ಎದೆಯೊಡ್ಡಿ ನಿಂತು ಉಗ್ರರನ್ನು ಕೊಂದಿದ್ದ ಕನ್ನಡಿಗನ ಸಾಹಸಗಾಥೆ ಪುಸ್ತಕ ರೂಪದಲ್ಲಿ
ನವದೆಹಲಿ, ಜೂನ್ 6: ಕಳೆದ ವರ್ಷ ಶೌರ್ಯ ಪ್ರಶಸ್ತಿಯನ್ನು ಒಬ್ಬ ಆದಾಯ ತೆರಿಗೆ ಇಲಾಖೆ ಅಧಿಕಾರಿಗೆ ನೀಡುವುದಾಗಿ ಘೋಷಿಸಿದ್ದಾಗ ಇಡೀ ದೇಶ ಅಚ್ಚರಿಗೊಳಗಾಗಿತ್ತು. ಅಪ್ರತಿಮ ಸಾಹಸ, ಸಾಧನೆ ಮಾಡಿದ ವೀರ ಯೋಧರಿಗೆ ನೀಡುವ ಪ್ರಶಸ್ತಿಯ ಗೌರವವನ್ನು ಐಟಿ ಅಧಿಕಾರಿಗೆ ಹೇಗೆ ನೀಡಲು ಸಾಧ್ಯ? ಈ ರೀತಿಯ ಘಟನೆ ದೇಶದಲ್ಲಿ ನಡೆದಿದ್ದು ಅದೇ ಮೊದಲು. ಆದರೆ, ಅದರ ಹಿಂದಿನ ಕಥೆಯನ್ನು ಓದಿದಾಗ ಮೈನವಿರೇಳುತ್ತದೆ. ಈ ಸಾಧಕ ಕರ್ನಾಟಕದ ಮೂಲದವರು ಎಂಬುದು ಮತ್ತೊಂದು ಹೆಮ್ಮೆ.
ತೆರಿಗೆ ಅಧಿಕಾರಿಯೊಬ್ಬ ದೇಶದ ಗಡಿಯಲ್ಲಿ ನಿಂತು ಶತ್ರುಗಳ ವಿರುದ್ಧ ಕಾದಾಡಲು ಹೇಗೆ ಸಾಧ್ಯ ಎಂಬ ಅನುಮಾನ ಮೂಡಬಹುದು. ಅದನ್ನು ಸಾಧ್ಯವಾಗಿಸಿವರು ಕ್ಯಾಪ್ಟನ್ ಪ್ರದೀಪ್ ಶೌರಿ ಆರ್ಯ. ಅವರ ರೋಮಾಂಚನಕಾರಿ ಸಾಹಸದ ಕಥನ ಇಂಗ್ಲಿಷ್ ಭಾಷೆಯ ಪುಸ್ತಕವೊಂದರಲ್ಲಿ ಹೊರಬರುತ್ತಿದೆ.
ಕರ್ನಾಟಕ ಮೂಲದ ಪ್ರದೀಪ್ ಶೌರಿ ಆರ್ಯ ಸೇನೆಯಲ್ಲಿನ ಅಪ್ರತಿಮ ಸಾಹಸಕ್ಕೆ ಶೌರ್ಯ ಪ್ರಶಸ್ತಿ ಪಡೆದ ದೇಶದ ಮೊದಲ ಭಾರತೀಯ ಕಂದಾಯ ಸೇವೆ (ಐಆರ್ಎಸ್) ಅಧಿಕಾರಿ. ಸದ್ಯ ಅವರು ಮುಂಬೈನ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಕಮಿಷನರ್ (ತನಿಖಾ ವಿಭಾಗ). ಕಾಶ್ಮೀರದಲ್ಲಿ ಒಳನುಸುಳುತ್ತಿದ್ದ ಉಗ್ರರನ್ನು ತಡೆದು ಅವರ ವಿರುದ್ಧ ಕೆಚ್ಚೆದೆಯಿಂದ ಹೋರಾಟ ನಡೆಸಿದ್ದರು ಕ್ಯಾಪ್ಟನ್ ಪ್ರದೀಪ್.
ಹೊಸಗುಂದಕ್ಕೆ ಮರಳಿತು ಗತವೈಭವ! ಬೆಂಗಳೂರು ದಂಪತಿಗಳ ಯಶೋಗಾಥೆ
ಪ್ರಾದೇಶಿಕ ಸೈನ್ಯದ ಅಧಿಕಾರಿಯಾದ ಪ್ರದೀಪ್, 4ನೇ ಬೆಟಾಲಿಯನ್-ಪ್ಯಾರಾಚೂಟ್ ರೆಜಿಮೆಂಟ್ನ (ವಿಶೇಷ ಪಡೆ) 106 ಇನ್ಫೆಂಟ್ರಿ ಬೆಟಾಲಿಯನ್ ಟೆರಿಟೋರಿಯಲ್ ಆರ್ಮಿಯಲ್ಲಿದ್ದರು. ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಬೇಹುಗಾರಿಕಾ ಜಾಲ ರಚಿಸುವ ಜವಾಬ್ದಾರಿ ಹೊತ್ತುಕೊಂಡಿದ್ದ ಯೋಜನೆಯ ನಾಯಕರಾಗಿದ್ದರು.
ಕಗ್ಗತ್ತಲ ರಾತ್ರಿಲಿ ಉಗ್ರರ ಬೇಟೆ
2017ರ ಮೇ 28ರಂದು 19 ಇನ್ಫೆಂಟ್ರಿ ಡಿವಿಷನ್ ಪ್ರದೇಶದ ಚಾಬುಕ್ನ ಸುತ್ತಲೂ ಲಷ್ಕರ್ ಎ ತಯಬಾದ ಉಗ್ರರು ಒಳನುಸುಳುವ ಸಾಧ್ಯತೆ ಇದೆ ಎಂಬ ಮಾಹಿತಿ ಅವರಿಗೆ ದೊರಕಿತ್ತು. ಕೂಡಲೇ ತುರ್ತು ಕಾರ್ಯಾಚರಣೆಯನ್ನು ಅವರು ಸಿದ್ಧಪಡಿಸಿದರು. ಒಳನುಸುಳುಕೋರರ ಮೇಲೆ ದಾಳಿಗೆ ಮುಂದಾದರು.
ಆ ರಾತ್ರಿ 10.30ರ ವೇಳೆಗೆ 4-6 ಉಗ್ರರು 200 ಮೀಟರ್ ದೂರದಲ್ಲಿ ಸಾಗುತ್ತಿರುವುದು ಕ್ಯಾಪ್ಟನ್ ಪ್ರದೀಪ್ ಅವರ ಗಮನಕ್ಕೆ ಬಂದಿತ್ತು. ಚಂದಿರನಿಲ್ಲದ ರಾತ್ರಿಯಲ್ಲಿ ಮತ್ತು ದಟ್ಟವಾದ ಕಾಡಿನ ಕಗ್ಗತ್ತಲಲ್ಲಿ ಉಗ್ರರು ತಪ್ಪಿಸಿಕೊಂಡು ಹೋಗಬಹುದು ಎಂಬ ಅತಂಕ ಅವರನ್ನು ಕಾಡಿತು. ಕ್ಯಾಪ್ಟನ್ ಮತ್ತು ಅವರ ಪಡೆ ಆ ರಾತ್ರಿಯಲ್ಲಿಯೇ ಧೈರ್ಯದಿಂದ ಮುಂದುವರಿಯಿತು. ಉಗ್ರರಿಗೆ ಏನಾಗುತ್ತಿದೆ ಎಂಬುದು ಅರಿವಾಗುವ ಮೊದಲೇ ಗುಂಡಿನ ಸುರಿಮಳೆಗೈದಿತು.
ಹಸಿದವರಿಗೆ ಆಹಾರ ಕೊಡಲು ಕೆಲಸವನ್ನೇ ಬಿಟ್ಟ, ವಿಶ್ವದಾಖಲೆ ಬರೆದ: ಮಾನವೀಯ ವರದಿ
ಉಗ್ರರೊಂದಿಗೆ ನೇರ ಮುಖಾಮುಖಿ
'ಜೀವವನ್ನು ಪಣವಾಗಿಟ್ಟು ಮತ್ತು ಎದೆನಡುಗಿಸುವ ಸನ್ನಿವೇಶದಲ್ಲಿ ಕ್ಯಾಪ್ಟನ್ ಆರ್ಯ ಹೀರೋನಂತೆ ಕಾರ್ಯ ನಿರ್ವಹಿಸಿದರು. ಬಿದ್ದಿದ್ದ ಮರವನ್ನೇರಿ ಭಯೋತ್ಪಾದಕರು ಅತ್ತ ಬರುವುದನ್ನೇ ಕಾದಿದ್ದರು. ತಮ್ಮ ಉನ್ನತ ಸ್ಥಾನದ ಪದವಿ ಅವರಿಗೆ ಮುಖ್ಯವಾಗಿರಲಿಲ್ಲ. ಸ್ವತಃ ತಮ್ಮದೇ ನಾಯಕತ್ವದಲ್ಲಿ ಮಾದರಿಯಾಗಿ ತಂಡವನ್ನು ಮುನ್ನಡೆಸಿದರು. ತಮ್ಮ ಸುರಕ್ಷತೆಯ ಬಗ್ಗೆಯೂ ಚಿಂತಿಸಲಿಲ್ಲ. ನೇರವಾಗಿ ಉಗ್ರರೊಂದಿಗೆ ಮುಖಾಮುಖಿಯಾಗಿ ಅವರನ್ನು ಹೊಡೆದುರುಳಿಸಿದರು' ಎಂದು ಸೇನೆ ಅವರ ಸಾಹಸವನ್ನು ಬಣ್ಣಿಸಿತ್ತು.
2004ರ ಬ್ಯಾಚ್ನ ಐಆರ್ಎಸ್ ಅಧಿಕಾರಿಯಾಗಿರುವ ಪ್ರದೀಪ್, ಅವರ ಸಾಹಸಯಾನ ಸಾಕಷ್ಟು ಅಚ್ಚರಿ ಮೂಡಿಸುತ್ತದೆ. ಪ್ರಾರಂಭದಿಂದಲೂ ಸೇನಾ ಸಮವಸ್ತ್ರದೆಡೆಗೆ ಪ್ರೀತಿ ಹೊಂದಿದ್ದ ಅವರು, ಆ ಬಯಕೆಯನ್ನು ಈಡೇರಿಸಿಕೊಳ್ಳಲು ಪ್ರಾದೇಶಿಕ ಸೇನೆಯನ್ನು ಸೇರಿಕೊಂಡಿದ್ದರು.
ಏನಿದು ಪ್ರಾದೇಶಿಕ ಸೇನೆ?
ಪ್ರಾದೇಶಿಕ ಸೇನೆ (ಟಿಎ) ಮೂಲತಃ ಯಾವುದೇ ತುರ್ತು ಸಂದರ್ಭದಲ್ಲಿ ದೇಶದ ರಕ್ಷಣೆಗೆ ಸೇರಿಕೊಳ್ಳಲು ನಾಗರಿಕರಿಗೆ ಅನುವಾಗುವಂತೆ ಸ್ವಯಂ ಕಾರ್ಯಕರ್ತರಿಗೆ ಸೇನಾ ತರಬೇತಿ ನೀಡುವ ಸಂಸ್ಥೆ. ದೈಹಿಕವಾಗಿ ಕ್ಷಮತೆಯುಳ್ಳ ಭಾರತದ ಉದ್ಯೋಗಿ ನಾಗರಿಕರು ಇದರ ಸದಸ್ಯರಾಗಬಹುದು. ಈ ಮೂಲಕ ಪ್ರತಿ ವರ್ಷ ಎರಡು ತಿಂಗಳು ಅವರು ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.
ಮುಖ ಸುಟ್ಟರೂ ಮನಸ್ಸು ಸುಡಲಿಲ್ಲ: ಆಸಿಡ್ ದಾಳಿ ಸಂತ್ರಸ್ತೆಯ ಸ್ಫೂರ್ತಿದಾಯಕ ಕತೆ
ಐಟಿಯಿಂದ ನಿರಾಕ್ಷೇಪ ಪತ್ರ
ಪ್ರದೀಪ್ ಅವರು 2008ರಲ್ಲಿ ಆದಾಯ ತೆರಿಗೆ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಂಡು ಪ್ರಾದೇಶಿಕ ಸೇನೆ ಸೇರಲು ಸೇವಾ ಆಯ್ಕೆ ಮಂಡಳಿ ನಡೆಸಿದ ಪರೀಕ್ಷೆಯನ್ನು ಬರೆದರು. ಉತ್ತಮ ಅಂಕ ಪಡೆದ ಅವರು ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಳಿಕ ಮಹಾರಾಷ್ಟ್ರದ ದಿಯೋಲಾಲಿ ಕಂಟೋನ್ಮೆಂಟ್ನಲ್ಲಿ ತರಬೇತಿ ಪಡೆದರು. ಬಳಿಕ ಭಾರತೀಯ ಸೇನಾ ಅಕಾಡೆಮಿ ಸೇರ್ಪಡೆಯಾದರು.
ಮೂರು ತಿಂಗಳ ತರಬೇತಿ ಬಳಿಕ ಬೆಂಗಳೂರು ಪ್ರದೇಶದ 106 ಇನ್ಫೆಂಟ್ರಿ ಬೆಟಾಲಿಯನ್ ಪ್ರಾದೇಶಿಕ ಸೇನೆ (ಪ್ಯಾರಾ) ಸೇರಿಕೊಂಡರು.
ಬೆಂಗಳೂರಿನಲ್ಲಿ ಕುಟುಂಬ
ಶೌರ್ಯ ಪ್ರಶಸ್ತಿ ಸ್ವೀಕರಿಸಿದ ಬಳಿಕ ಅವರು ಮುಂಬೈನ ಐಟಿ ಅಧಿಕಾರ ಕಾರ್ಯಕ್ಕೆ ಮರಳಿದರು. ಸಾಮಾನ್ಯ ನಾಗರಿಕ ಹಾಗೂ ಅಧಿಕಾರಿಯಾಗಿ ಮತ್ತು ಸೇನಾ ಅಧಿಕಾರಿಯ ಬದುಕಿನ ಬಗ್ಗೆ ಅವರು ಸಂತುಷ್ಟರಾಗಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ಹೆಮ್ಮೆಯ ತಂದೆ ಅವರು. ಅವರ ಕುಟುಂಬ ಬೆಂಗಳೂರಿನಲ್ಲಿಯೇ ನೆಲೆಸಿದೆ. ಅವರದು ಅವಿಭಕ್ತ ಕುಟುಂಬ ಎನ್ನುವುದು ಮತ್ತೊಂದು ವಿಶೇಷ.
ಅಂದಹಾಗೆ, ಪ್ರದೀಪ್ ಓದಿರುವುದು-ಸಮಾಜಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ, ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್, ಕಾನೂನು ಪದವಿ, ತೆರಿಗೆ ಪದವಿ ಮತ್ತು ಸಮಾಜಶಾಸ್ತ್ರದಲ್ಲಿ ಪಿಎಚ್ಡಿ ಹಾಗೂ ವಾಣಿಜ್ಯ ಪೈಲಟ್ ಪರವಾನಗಿ (ಸಿಪಿಎಲ್).
2014ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ಚುನಾವಣಾ ಆಯೋಗದಲ್ಲಿ ಅವರು ಚುನಾವಣಾ ಪರಿವೀಕ್ಷಕರಾಗಿ ಕೆಲಸ ಮಾಡಿದ್ದರು. ನಾಗಾಲ್ಯಾಂಡ್ನಲ್ಲಿ ಸಹ ಪರಿವೀಕ್ಷಕರಾಗಿದ್ದರು. ಈ ವೇಳೆ ಅವರ ಕೆಲಸವನ್ನು ಮೆಚ್ಚಿ ರಾಷ್ಟ್ರೀಯ ಪುರಸ್ಕಾರ ನೀಡಲಾಗಿತ್ತು.
|
ಅಪರೂಪದ ಹಾದಿ ತುಳಿದವರು
ಕ್ಯಾಪ್ಟನ್ ಪ್ರದೀಪ್ ಆರ್ಯ ಅತಿ ಅಪರೂಪವಾಗಿ ಆಯ್ದುಕೊಳ್ಳುವ ಹಾದಿಯನ್ನು ಆರಿಸಿಕೊಂಡವರು. ಐಆರ್ಎಸ್ ಅಧಿಕಾರಿಯಾಗಿ ಪ್ರಾದೇಶಿಕ ಸೇನೆ ಸೇರಿಕೊಂಡರು. ಬಳಿಕ ಪ್ಯಾರಾ ಪಡೆಗಳನ್ನು ಸೇರಿದರು. ಯಶಸ್ವಿ ಉರಿ ಕಾರ್ಯಾಚರಣೆ ವೇಳೆ ಸ್ವಯಂ ಇಚ್ಛೆಯಿಂದ ಭಾಗವಹಿಸಿದರು. ನನ್ನ ಕುಟುಂಬದ ಸ್ನೇಹಿತ ಮತ್ತು ಸಹೋದ್ಯೋಗಿ ಎಂದು ಅವರ ಬಗ್ಗೆ ಹೆಮ್ಮೆಪಡುತ್ತೇನೆ. ಅವರ ಕುರಿತಾದ ಪುಸ್ತಕದ ಬಿಡುಗಡೆಗೆ ಕಾಯುತ್ತಿದ್ದೇನೆ ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಟ್ವೀಟ್ ಮಾಡಿದ್ದಾರೆ.
|
'ಇಂಡಿಯಾಸ್ ಮೋಸ್ಟ್ ಫಿಯರ್ಲೆಸ್ 2'
ಮುಂಬೈನ ತೆರಿಗೆ ಅಧಿಕಾರಿಯೊಬ್ಬರು 2016ರ ಸರ್ಜಿಕಲ್ ಸ್ಟ್ರೈಕ್ನ ಎಂಟು ತಿಂಗಳ ಬಳಿಕ ಉರಿಯಲ್ಲಿ ನಡೆದ ವಿಶೇಷ ಪಡೆಗಳ ಭಯಾನಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕ್ಯಾಪ್ಟನ್ ಪ್ರದೀಪ್ ಆರ್ಯ ಅವರ ರೋಮಾಂಚನಕಾರಿ ಕಥನ 'ಇಂಡಿಯಾಸ್ ಮೋಸ್ಟ್ ಫಿಯರ್ಲೆಸ್ 2' ಪುಸ್ತಕ ಈ ತಿಂಗಳು ಬಿಡುಗಡೆಯಾಗಲಿದೆ ಎಂದು ಲೇಖಕ ಶಿವ್ ಅರೂರ್ ಟ್ವೀಟ್ ಮಾಡಿದ್ದಾರೆ.