625/625 ಅಂಕಗಳು ತೆಗೆಯುವುದು ಮಹತ್ ಸಾಧನೆಯೆ! ಆದರೆ....
ಏಪ್ರಿಲ್-ಮೇ-ಜೂನ್ ತಿಂಗಳಿನಲ್ಲಿ ಅತಿ ಹೆಚ್ಚು ಚರ್ಚೆಯಾಗುವ ವಿಷಯವೇ 'ಮಾರ್ಕ್ಸು'. ಅದು ಅಷ್ಟು ಮುಖ್ಯವೋ? ಅಲ್ಲವೋ? ಆ ಬಗ್ಗೆ ಚರ್ಚಿಸಿ ಹೆಚ್ಚು ಪ್ರಯೋಜನವಿಲ್ಲ. ಏಕೆಂದರೆ ಮಾರ್ಕ್ಸ್ ಮುಖ್ಯ ಎಂದು ಒಬ್ಬ ಹತ್ತು ಕಾರಣ ಕೊಟ್ಟರೆ, ಮಾರ್ಕ್ಸ್ ಮುಖ್ಯವಲ್ಲ ಎಂದು ಮತ್ತೊಬ್ಬ ಇಪ್ಪತ್ತು ಕಾರಣ ಕೊಡುತ್ತಾನೆ. ಆದರೆ ಹೆಚ್ಚು ಮಾರ್ಕ್ಸ್ ತೆಗೆದಿರುವ ವಿದ್ಯಾರ್ಥಿ ಹೆಚ್ಚು ಶ್ರದ್ಧೆಯಿಂದ ಓದಿರುತ್ತಾನೆ ಎಂಬ ಮಾತನ್ನು ತೆಗೆದು ಹಾಕುವಂತಿಲ್ಲ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಈಗಂತೂ 625/625 ಮಾರ್ಕ್ಸನ್ನು, ಅದಕ್ಕಿಂತ ಒಂದು ಅಥವಾ ಎರಡು ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್ನು ತೊಂಬತ್ತಕ್ಕಿಂತ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಲೆಕ್ಕಕ್ಕೇ ಸಿಗುವುದಿಲ್ಲ. ಬಹುಶಃ ಅವರಿಗೆ ಪಾಠ ಮಾಡಿದ ಮೇಷ್ಟ್ರುಗಳಿಗೂ ಅಷ್ಟು ಮಾರ್ಕ್ಸ್ ತೆಗೆಯಲು ಸಾಧ್ಯವಾಗುವುದಿಲ್ಲವೇನೊ. ಅಷ್ಟರ ಮಟ್ಟಿಗೆ ವಿದ್ಯಾರ್ಥಿಗಳು ಮೇಷ್ಟರನ್ನೇ ಮೀರಿಸುತ್ತಾರೆ.
SSLC ಫಲಿತಾಂಶ:ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ? ಚಿತ್ರ ಮಾಹಿತಿ
ಸಂತೋಷ. ಆದರೆ ಒಬ್ಬ ವಿದ್ಯಾರ್ಥಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿರುತ್ತಾನೆ. ಅವನಿಗೆ ಅವನ ಕನ್ನಡ ಪಠ್ಯಪುಸ್ತಕದಲ್ಲಿರುವ ಎಲ್ಲಾ ಕತೆ-ಪದ್ಯ-ನಾಟಕದ ಬಗ್ಗೆ ತಿಳಿದಿರುತ್ತದೆ. ಹಾಗಾಗಿಯೇ ಅವನಿಗೆ ಅಷ್ಟು ಅಂಕಗಳನ್ನು ತೆಗೆಯಲು ಸಾಧ್ಯವಾಗಿರುತ್ತದೆ. ಆದರೆ ಆ ವಿದ್ಯಾರ್ಥಿ ಕನ್ನಡ ಪಠ್ಯಪುಸ್ತಕವನ್ನು ಹೊರತುಪಡಿಸಿ ಬೇರೆ ಕನ್ನಡ ಪುಸ್ತಕಗಳನ್ನು ಓದಿದ್ದಾನಾ? ಅದು ಮುಖ್ಯವಾದ ಪ್ರಶ್ನೆ.
ಪಠ್ಯಪುಸ್ತಕದಲ್ಲಿ ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ, ಕುವೆಂಪು ಮುಂತಾದವರ ಕತೆ-ಕಾದಂಬರಿಗಳನ್ನು ಅಳವಡಿಸುವುದೇ, ವಿದ್ಯಾರ್ಥಿಗಳಿಗೆ ಆ ಲೇಖಕರ ಪರಿಚಯವಾಗಿ, ನಂತರ ವಿದ್ಯಾರ್ಥಿಗಳು ಆ ಲೇಖಕರ ಮತ್ತಷ್ಟು ಪುಸ್ತಕಗಳನ್ನು ಓದಲಿ ಎಂದು. ಆದರೆ ಆ ಮೂಲ ಉದ್ದೇಶದ ಅರಿವೇ ಇಲ್ಲದೆ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಪಠ್ಯಪುಸ್ತಕವೊಂದನ್ನು ಓದಿ, ನೂರಕ್ಕೆ ನೂರು ಪಡೆದರೆ ಜಗತ್ತಿನ ಸಮಸ್ತ ಜ್ಞಾನವೂ ಪಡೆದಂತೆ ಎಂಬ ಭ್ರಮೆಯಲ್ಲಿರುತ್ತಾರೆ.
ಒಂದು ಪಠ್ಯಪುಸ್ತಕ ಓದಿ, ನೂರಕ್ಕೆ ನೂರು ತೆಗೆಯುವುದಕ್ಕಿಂತ ಕನ್ನಡ ಸಾಹಿತ್ಯದ ಬೇರೆ ಬೇರೆ ಪುಸ್ತಕಗಳನ್ನು ಓದಿ, ನೂರಕ್ಕೆ ಅರವತ್ತು-ಎಪ್ಪತ್ತು ತೆಗೆಯುವುದು ಮೇಲು ಅಲ್ಲವೇ? ಒಂದು ವೇಳೆ ವಿದ್ಯಾರ್ಥಿಯೊಬ್ಬ, ಕನ್ನಡ ಸಾಹಿತ್ಯದ ಬೇರೆ ಬೇರೆ ಕೃತಿಗಳನ್ನು ಓದಿಯೂ, ಅವನಿಗೆ ನೂರಕ್ಕೆ ನೂರು ಬಂದರೆ, ಅದು ಹೆಚ್ಚುಗಾರಿಕೆ. ಅವನು ಅಭಿನಂದನೆಗೆ ಅರ್ಹ! ಬರೀ ಕನ್ನಡ ಪುಸ್ತಕವನ್ನೇ ಓದಬೇಕಂತೇನೂ ಇಲ್ಲ. ಒಟ್ಟಿನಲ್ಲಿ ಓದಿನ ವಿಸ್ತಾರವನ್ನು ಹೆಚ್ಚಿಸಿಕೊಳ್ಳಬೇಕು.
SSLCಯಲ್ಲಿ 623 ಅಂಕ ಪಡೆದ ಮಾಗಡಿಯ ಚೈತನ್ಯಗೌಡ
ನಾನು ವಿಜಯಾ ಕಾಲೇಜಿನಲ್ಲಿ ಪತ್ರಿಕೋದ್ಯಮವನ್ನು ಓದುತ್ತಿದ್ದಾಗ, ನನ್ನ ಜೂನಿಯರ್ 'ಪ್ರಕೃತಿ ಬದರೀನಾಥ್' ಅಂತ ಇದ್ದರು. ಆಕೆ ದಿನ ಪುಸ್ತಕದ ಮುಂದೆ ಕೂರುತ್ತಿರಲ್ಲಿಲ್ಲ. ಆಕೆಗೆ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇತ್ತು. ಆಕೆ ನೃತ್ಯ ಕಲಾವಿದೆ ಕೂಡ. ಬೇರೆ ಬೇರೆ ಊರುಗಳಿಗೆ ನೃತ್ಯ ಪ್ರದರ್ಶನವನ್ನು ನೀಡಲು ಹೋಗುತ್ತಿದ್ದರು. ಖಾಸಗಿ ವಾಹಿನಿಯೊಂದರಲ್ಲಿ ನಿರೂಪಕಿಯೂ ಆಗಿದ್ದರು. ಆಕೆ ಓದಲು ಕೂರುತ್ತಿದ್ದದ್ದೆ ಪರೀಕ್ಷೆಗೆ ಕೆಲವು ದಿನಗಳ ಮುಂಚೆ.
ಬೇರೆ ಊರಿಗಳ್ಳಲ್ಲಿ ನೃತ್ಯ ಪ್ರದರ್ಶನ, ವಾಹಿನಿಯಲ್ಲಿ ನಿರೂಪಣೆ; ಇವೆಲ್ಲದರ ನಡುವೆ ಕಾಲೇಜಿಗೆ ಸರಿಯಾಗಿ ಬರಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಪರೀಕ್ಷೆಗೆ ಓದಲು ಅವಶ್ಯಕತೆ ಇರುವ ನೋಟ್ಸ್ ಪ್ರಕೃತಿ ಬಳಿ ಇರುತ್ತಿರಲಿಲ್ಲ. ಒಮ್ಮೆ ಅವರ ಕ್ಲಾಸಿನ ಕೆಲವು ಹುಡುಗಿಯರು, ಅವರ ಬಳಿ ನೋಟ್ಸ್ ಇದ್ದರೂ, ಇವರಿಗೆ ಜಾಸ್ತಿ ಮಾರ್ಕ್ಸ್ ಬಂದುಬಿಡುತ್ತದೆ ಎಂದು ನೋಟ್ಸ್ ಕೊಟ್ಟಿರಲ್ಲಿಲ್ಲ.
ಆಗ ನಾನು ನನ್ನ ಬಳಿ ಇದ್ದ ನೋಟ್ಸನ್ನು ಕೊಟ್ಟು, "ನೀವು ಇದರಲ್ಲಿ ಓದಿ. ನಿಮ್ಮ ಕ್ಲಾಸಿನೋರು ನಿಮಗೆ ನೋಟ್ಸ್ ಕೊಡಲಿಲ್ಲ ತಾನೆ? ನೀವು ಇದನ್ನು ನಿಮ್ಮ ಕ್ಲಾಸಿನವರಿಗೆ ಕೊಡಬೇಡಿ" ಎಂದೆ. ಆಗ ಅವರು, "ನನ್ನ ಹತ್ತಿರ ಇರೊ ನೋಟ್ಸನ್ನ ನಾನೊಬ್ಬಳೆ ಬಚ್ಚಿಟ್ಟುಕೊಂಡು ಓದಿ, ಕ್ಲಾಸಿಗೆ ಫಸ್ಟ್ ಬರೋದು ಗ್ರೇಟ್ ಅಲ್ಲ. ನನ್ನ ಹತ್ತಿರ ಇರೊ ನೋಟ್ಸನ್ನ ಎಲ್ಲರಿಗೂ ಕೊಟ್ಟು ನಾನೂ ಓದಿ, ಕ್ಲಾಸಿಗೆ ಫಸ್ಟ್ ಬರಬೇಕು. ಅದು ಗ್ರೇಟ್" ಎಂದರು. ಪದವಿಯಲ್ಲಿ ಅವರು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಎರಡನೇ Rank! ನಂತರ ಎಂ.ಎ. ಆಂಗ್ಲ ಸಾಹಿತ್ಯದಲ್ಲಿ ವಿಶ್ವವಿದ್ಯಾಲಯಕ್ಕೆ ಮೊದಲನೇ Rank ತೆಗೆದು, ಚಿನ್ನದ ಪದಕ ಪಡೆದರು.
ಸಿದ್ದಿಸಿದ ರೋಹಿಣಿ ಸಂಕಲ್ಪ, ಎಸ್ಎಸ್ಎಲ್ಸಿಯಲ್ಲಿ ಹಾಸನ ನಂ.1
ಪ್ರಕೃತಿಗೆ ಬೆಂಗಳೂರಿನ ಯಾವುದಾದರೂ ಪ್ರತಿಷ್ಠಿತ ಕಾಲೇಜಿನಲ್ಲಿ ಉಪನ್ಯಾಸಕಿಯ ಹುದ್ದೆ ಹಿಡಿಯುವುದು ಕಷ್ಟವಾಗಿರಲಿಲ್ಲ. ಆದರೆ ಆಕೆ ಒಂದು ಚಿಕ್ಕ ಕಾಲೇಜಿನಲ್ಲಿ ಉಪನ್ಯಾಕಿಯಾಗಿ ಕೆಲಸಕ್ಕೆ ಸೇರಿದರು. "80 ಪರ್ಸೆಂಟ್ ತೆಗೆದೋರಿಗೆ ಮಾತ್ರ ಅಡ್ಮೀಷನ್ ಕೊಟ್ಟು. ಅವರಿಗೆ ಇನ್ನೊಂದು ಐದು ಪರ್ಸೆಂಟ್ ಜಾಸ್ತಿ ಬರೊ ಹಾಗೆ ಮಾಡಿ. ನಮ್ಮದು ಟಾಪರ್ಸ್ ಕಾಲೇಜ್ ಅಂತ ಹೇಳ್ಕೊತಾರೆ. ಅಲ್ಲಿ ಕೆಲಸ ಮಾಡೋದು ಸಾಧನೆ ಅಲ್ಲ. ನಾನು ಕೆಲಸ ಮಾಡ್ತಿರೊ ಕಾಲೇಜಲ್ಲಿ ಇರೋರೆಲ್ಲ ಜಸ್ಟ್ ಪಾಸ್ ಸ್ಟೂಡೆಂಟ್ಸ್. ಅವರಿಗೆ ಪಾಠ ಮಾಡಿ, ಅವರು ಫಸ್ಟ್ ಕ್ಲಾಸ್ ಬರೊ ಹಾಗೆ ಮಾಡೋದು ಸಾಧನೆ" - ಇದು ಪ್ರಕೃತಿಯವರ ಅಭಿಪ್ರಾಯ.