79ರ ವಯಸ್ಸಿನಲ್ಲೂ ದುಡಿದು ತಿನ್ನೋ ಛಲ, ಎಳ್ಳಷ್ಟೂ ಕುಗ್ಗದ ಜೀವನೋತ್ಸಾಹ
ವರ್ಷ 79 ತುಂಬಿದ್ದರೂ ಜೀವನೋತ್ಸಾಹ ಇನ್ನೂ ಎಳ್ಳಷ್ಟೂ ಕಳೆಗುಂದಿಲ್ಲ,ದುಡಿಯಬೇಕು ಎನ್ನುವ ಛಲ, ದುಡಿಯದೆ ಕುಳಿತರೆ ನಾಳೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲವೆಂಬ ಆತಂಕ.
ಅದರ ಜೊತೆ ಹೃದಯ ಸಂಬಂಧಿ ಕಾಯಿಲೆ, ಕಾಲು ಶಸ್ತ್ರಚಿಕಿತ್ಸೆ ಬೇರೆ ಬಡತನವೆಂಬ ಬೇನೆಗೆ ಮತ್ತಷ್ಟು ಕಾರದಪುಡಿ ಎರಚಿದಂತಾಗಿತ್ತು.
ಅಷ್ಟಕ್ಕೂ ನಾನು ಹೇಳುತ್ತಿರುವುದು ಯಾರ ಬಗ್ಗೆ ಎಂಬುದನ್ನು ನೋಡೋಣ, ಅವರ ಹೆಸರು ಕೆಎಚ್ ರೇವಣ್ಣ ಸಿದ್ದಪ್ಪ. ಉದ್ಯೋಗವನ್ನರಸಿ ಹಲವು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದವರು, ಕೈನಲ್ಲಿ ಬಿಡಿಗಾಸೂ ಇಲ್ಲದ ಕಾರಣ ರಾಗಿರೊಟ್ಟಿಯ ಬುತ್ತಿಕಟ್ಟಿಕೊಂಡು 5 ದಿನಗಳ ಕಾಲ ನಡೆದು ಬೆಂಗಳೂರಿಗೆ ಸೇರಿದ್ದರು.
ಆಗಿನ ಕಾಲದಲ್ಲಿ ಬಸ್ಗಳ ಟಿಕೆಟ್ ದರ ಕಡಿಮೆಯೇ ಆದರೂ ಆ ಹಣವನ್ನು ನೀಡಲೂ ಅವರ ಬಳಿ ಇರಲಿಲ್ಲ.ಬಳಿಕ ಬಂದು ಇಷ್ಟು ವರ್ಷಗಳ ಕಾಲ ಔಷಧ ಸಸ್ಯಗಳನ್ನು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮೊದಲು ನೆಲದ ಮೇಲೆಯೇ ಇಟ್ಟುಕೊಂಡಿದ್ದರು, ಇದೀಗ ಒಂದು ಟೇಬಲ್ ಹಾಗೂ ಖುರ್ಚಿಯನ್ನು ಹಾಕಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ.
ದೊಡ್ಡಪತ್ರೆ, ಕರಿಬೇವು, ಅಲೋವೆರಾ, ಕನಕಾಂಬರ, ತುಳಿಸಿಯಿಂದ ಹಿಡಿದು ಹಲವು ಬಗೆಯ ಸಸ್ಯಗಳು ಅವರ ಬಳಿ ದೊರೆಯುತ್ತದೆ.
ಅವರಿಗೆ ಸುಮಾರು 18 ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಕಾಲಿಗೆ ಭಾರಿ ಏಟಾಗಿ ರಾಡ್ ಅಳವಡಿಸಿದ್ದಾರೆ. ಆದರೆ ಅದನ್ನು ತೆಗೆಯಲು ಬೇಕಾದ ಸುಮಾರು 20 ಸಾವಿರದಷ್ಟು ಮೊತ್ತ ಅವರ ಬಳಿ ಇಲ್ಲ.
ಹಾಗೆಯೇ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆ ಕೂಡ ಆಗಿದೆ. ಇಷ್ಟಾದರೂ ಎದೆಗುಂದದೆ ನಿಷ್ಠೆಯಿಂದ ಅವರ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಬರುವ ಅಲ್ಪ ಸ್ವಲ್ಪ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.
Recommended Video
ಸಾರಕ್ಕಿ ಸಿಗ್ನಲ್ ಬಳಿ ಇರುವ ಜಾಕಿ ಶೋ ರೂಂ ಬಳಿ ಅವರು ಈ ಪುಟ್ಟ ವ್ಯಾಪಾರ ನಡೆಸುತ್ತಿದ್ದಾರೆ. ಆರಾಮವಾಗಿ ಮಕ್ಕಳ ಆಶ್ರಯದಲ್ಲಿ ಕಾಲ ಕಳೆಯಬೇಕಿದ್ದ ಈ ವೃದ್ಧ ದಂಪತಿ ಬಿಸಿಲಿನಲ್ಲಿ ಬೇಯುವಂತಾಗಿದೆ.