ಚೇಳು ಕಚ್ಚುವುದಿಲ್ಲ ಎಂದು ಮಾತುಕೊಟ್ಟರೆ ನಂಬಬಹುದೇ?
ಒಂದು ಚೇಳು ನದಿಯ ಇನ್ನೊಂದು ಬದಿಗೆ ಹೋಗಬೇಕಿತ್ತು. ಆದರೆ ದಾಟುವುದು ಹೇಗೆ? ದಡದ ಮೇಲೆ ನಿಂತು ಆಚೆ ಈಚೆ ನೋಡುತ್ತಿತ್ತು. ಆ ಚೇಳಿನ ಅದೃಷ್ಟಕ್ಕೆ ಕಪ್ಪೆಯೊಂದು ಈಜುತ್ತಾ ನದಿ ದಂಡೆಗೆ ಬಂತು
ಕೂಡಲೇ ಖುಷಿಗೊಂಡ ಚೇಳು 'ನನಗೊಂದು ಸಹಾಯ ಮಾಡುತ್ತೀಯ?' ಎಂದು ಕಪ್ಪೆಗೆ ಕೇಳಿತು. 'ನಾನು ನಿನ್ನ ಬೆನ್ನ ಮೇಲೆ ಕೂತುಕೊಳ್ಳುತ್ತೇನೆ. ನೀನು ನನ್ನನ್ನು ಆಚೆ ದಂಡೆಗೆ ಮುಟ್ಟಿಸು' ಎಂದು ಚೇಳು, ಕಪ್ಪೆಯನ್ನು ಕೋರಿಕೊಂಡಿತು.
ದಿನದ ಝೆನ್ ಕಥೆ: ಗುರುವಿನ 'ವಿಷದ ಬಾಟಲಿ' ಕಥೆ
ಹೇಳಿಕೇಳಿ ಅದು ಚೇಳು, ತನಗೆ ಕಚ್ಚಿದರೆ? ಕಪ್ಪೆ ತನ್ನ ಅನುಮಾನವನ್ನು ನೇರವಾಗಿ ಚೇಳಿನ ಎದುರಿಟ್ಟಿತು. 'ನನ್ನನ್ನೇನು ಹುಚ್ಚ ಅಂದುಕೊಂಡಿದ್ದೀಯಾ? ನೀನು ನನ್ನ ಮೇಲೆ ಕುಳಿತುಕೊಂಡು ನದಿ ಮಧ್ಯೆ ನನಗೆ ಕಚ್ಚಿದರೆ ನಾನು ಸತ್ತು ಹೋಗುತ್ತೇನೆ' ಎಂದಿತು.
'ಸ್ವಲ್ಪ ಯೋಚನೆ ಮಾಡು. ಅರ್ಧದಾರಿಯಲ್ಲಿ ನಿನಗೆ ನಾನು ಕಚ್ಚಿ ನೀನು ಸತ್ತರೆ, ನಾನೂ ಕೂಡ ನದಿಯಲ್ಲಿ ಮುಳುಗಿ ಸತ್ತು ಹೋಗುತ್ತೇನಲ್ಲವೇ' ಎಂದು ಚೇಳು, ಕಪ್ಪೆ ಒಪ್ಪಿಕೊಳ್ಳುವಂತೆ ತನ್ನ 'ತರ್ಕ'ದ ವಾದ ಮುಂದಿಟ್ಟಿತು.
'ಅರೇ, ಹೌದಲ್ವಾ? ಹಾಗಾದರೆ ತೊಂದರೆ ಇಲ್ಲ. ಬಾ ನನ್ನ ಬೆನ್ನ ಮೇಲೆ ಕುಳಿತುಕೋ. ನಿನ್ನನ್ನು ಆಚೆ ದಡಕ್ಕೆ ಮುಟ್ಟಿಸುತ್ತೇನೆ' ಎಂತು ಕಪ್ಪೆ. ಚೇಳನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ನದಿಯಲ್ಲಿ ಈಜುತ್ತಾ ಸವಾರಿ ಹೊರಟಿತು.
ಆದರೆ ನದಿಯಲ್ಲಿ ಸ್ವಲ್ಪ ದೂರ ಹೋಗುತ್ತಿದ್ದಂತೆ ಕಪ್ಪೆಗೆ ತನ್ನ ಕುತ್ತಿಗೆಯನ್ನು ಏನೋ ಬಲವಾಗಿ ಕಚ್ಚಿದಂತೆ ಎನಿಸಿತು. ಕಪ್ಪೆಯ ಕಣ್ಣು ಮಂಜಾಗತೊಡಗಿತು. ಕಂಗಾಲಾದ ಕಪ್ಪೆ, ತನ್ನ ಬೆನ್ನ ಮೇಲೆ ಕೂತಿದ್ದ ಚೇಳನ್ನು ಪ್ರಶ್ನಿಸಿತು.
ದಿನದ ಝೆನ್ ಕಥೆ: ದಂಡನಾಯಕನಿಗೆ ಗುರುವಿನ ಸವಾಲು
'ನಾನು ನಿನ್ನನ್ನು ನದಿ ದಾಟಿಸುತ್ತಿರುವಾಗ ನೀನು ಯಾವ ಕಾರಣಕ್ಕೂ ನನ್ನ ಕಚ್ಚುವುದಿಲ್ಲ ಎಂದು ನೀನು ಹೇಳಿದ್ದೆ. ಒಂದು ವೇಳೆ ಕಚ್ಚಿದರೆ ಅದು ನಿನ್ನ ಪ್ರಾಣಕ್ಕೂ ಎರವಾಗುತ್ತದೆ. ಹೀಗಾಗಿ ನೀರಿನಲ್ಲಿ ಹೋಗುವಾಗ ಕ್ಷಣದಲ್ಲಿ ನನ್ನನ್ನು ಕಚ್ಚುವುದು ತರ್ಕಬದ್ಧ ಕೂಡ ಅಲ್ಲ ಎಂದು ಹೇಳಿದ್ದೆ. ಆದರೂ ಮತ್ಯಾಕೆ ಕಚ್ಚಿದೆ?' ಎಂದು ಕಪ್ಪೆ ತಡಬಡಾಯಿಸುತ್ತಲೇ ಕೇಳಿತು.
'ನನಗೆ ಕಚ್ಚುವುದು ತರ್ಕದ ವಿಷಯ ಅಲ್ಲ ಮಾರಾಯ, ಅದು ನನ್ನ ಸ್ವಭಾವ' ಎಂದು ಚೇಳು ಉತ್ತರಿಸಿತು.
ಎಲ್ಲರೂ ಬಂದು ಹೋಗುವ ಜಾಗ ಅರಮನೆಯಲ್ಲ, ಪ್ರವಾಸಿಗೃಹ!
ಎದುರಿನವರು ಅಪಾಯಕಾರಿ ವ್ಯಕ್ತಿ ಎಂಬುದು ಅರಿವಿದ್ದಾಗ ನಾವು ಅವರ ತರ್ಕದ ವಾದಗಳನ್ನು ಒಪ್ಪಿಕೊಂಡು ಅವರಿಗೆ ಸಹಾಯ ಮಾಡಲು ಮುಂದಾದರೆ ಕಪ್ಪೆಗೆ ಕಚ್ಚುವ ಚೇಳಿನಂತೆಯೇ ನಮ್ಮನ್ನು ತುಳಿಯುತ್ತಾರೆ. ಇಲ್ಲಿ ಚೇಳೂ ಮುಳುಗಿತು. ಆದರೆ, ಮನುಷ್ಯರು ಹಾಗೆ ಮುಳುಗುವುದಿಲ್ಲ. ನಂಬಲನರ್ಹ ವ್ಯಕ್ತಿ ಒಳ್ಳೆತನದ ಪ್ರದರ್ಶನ ತೋರಿದರೂ ಅಂತರಂಗದ ಗುಣ ಬದಲಾಗುವುದಿಲ್ಲ ಎನ್ನುವುದು ನಮಗೆ ಅರಿವಿರಬೇಕು.(ಸಂಗ್ರಹ)