ಕಾಡಿನಲ್ಲಿ ಎದುರಾದ ಹುಲಿಯ ಕಣ್ಣೊಳಗೆ ಕಣ್ಣಿಟ್ಟು ನೋಡಿದಾಗ...
ಅದೊಂದು ದಟ್ಟ ಕಾಡು. ಒಬ್ಬ ಝೆನ್ ಸನ್ಯಾಸಿ ಮತ್ತು ಆತನ ಶಿಷ್ಯ ಆ ಕಾಡಿನ ಮೂಲಕ ಹಾದು ಬೇರೆ ಊರಿನತ್ತ ಪ್ರಯಾಣಿಸುತ್ತಿದ್ದರು. ಕಾಡಿನ ನಡುವೆ ಪ್ರಯಾಣ ಎಂದಾದಾಗ ದಾರಿ ಸಾಗಬೇಕೆಂದರೆ ಮಾತು ಇರಬೇಕಲ್ಲ. ಸನ್ಯಾಸಿ ತನ್ನ ಬದುಕಿನ ಅನುಭವಗಳನ್ನು, ಅವುಗಳ ನಡುವಿನ ಪರಸ್ಪರ ಸಂಬಂಧಗಳು ಮತ್ತು ಹೇಗೆ ಎಲ್ಲರ ಬದುಕುಗಳೂ ಒಂದೇ ಆಗಿರುತ್ತದೆ ಎಂದೂ ತನ್ನ ಶಿಷ್ಯನಿಗೆ ವಿವರಿಸಿ ಹೇಳುತ್ತಿದ್ದ. ಶಿಷ್ಯ ಅತ್ಯಂತ ಶಿಸ್ತು ಮತ್ತು ಆಸಕ್ತಿಯಿಂದ ಸನ್ಯಾಸಿಯ ಮಾತುಗಳನ್ನು ಆಲಿಸುತ್ತಿದ್ದ.
"ಗುರುಗಳೇ ನಿಮ್ಮ ಮಾತಿನ ಒಟ್ಟಾರೆ ಅರ್ಥ ಈ ಬದುಕಿನಲ್ಲಿ ಯಾವುದೂ ಬೇರೆ ಬೇರೆ ಅಲ್ಲ, ಎಲ್ಲವೂ ಒಂದೇ ಎಂದು ಅಲ್ಲವೇ?'' ಎಂದು ಶಿಷ್ಯ ಕೇಳಿದ.
ದಿನದ ಝೆನ್ ಕಥೆ: ಗುರುವಿನ 'ವಿಷದ ಬಾಟಲಿ' ಕಥೆ
ಗುರುವಿಗೆ ಶಿಷ್ಯನ ಪ್ರತಿಕ್ರಿಯೆ ಕೇಳಿ ಖುಷಿಯಾಯಿತು. "ಹೌದು, ನೀನು ನನ್ನ ಮಾತುಗಳನ್ನ ಸರಿಯಾಗಿ ಅರ್ಥಮಾಡಿಕೊಂಡಿದ್ದೀಯ" ಎಂದು ಸನ್ಯಾಸಿ ಮುಗುಳ್ನಗುತ್ತಾ ನಡಿಗೆ ಮುಂದುವರೆಸಿದ.
ಹೀಗೆ ಅವರು ಸ್ವಲ್ಪ ಮುಂದೆ ಹೋಗುತ್ತಿದ್ದಂತೆಯೇ, ಒಂದು ದೊಡ್ಡ ಹುಲಿ ಅವರ ಮುಂದೆ ಎದುರಾಯಿತು.
ಅದುವರೆಗೂ ಗುರುಗಳ ಜೀವಾನುಭವ ಕೇಳಿಸಿಕೊಂಡಿದ್ದ ಶಿಷ್ಯ ಗಾಬರಿಯಾಗಲಿಲ್ಲ. ಶಾಂತಚಿತ್ತದಿಂದ ಹುಲಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿದ. "ಗುರುಗಳೇ, ನೋಡಿ ನೀವು ಹೇಳಿದ್ದು ನಿಜ, ಆ ಹುಲಿ ಬೇರೆ ಅಲ್ಲ ನಾನು ಬೇರೆ ಅಲ್ಲ". ಹೀಗೆ ಹೇಳುತ್ತಾ ಶಿಷ್ಯ ತಿರುಗಿ ನೋಡಿದರೆ, ಗುರುಗಳೆಲ್ಲಿ? ನಾಪತ್ತೆ! ತಲೆ ಎತ್ತಿ ನೋಡಿದರೆ ಗುರುಗಳು ಮರದ ಕೊಂಬೆಯೊಂದರ ಮೇಲೆ ಹತ್ತಿ ಭಯದಿಂದ ಕುಳಿತಿದ್ದಾರೆ.
ದಿನದ ಝೆನ್ ಕಥೆ: ದಂಡನಾಯಕನಿಗೆ ಗುರುವಿನ ಸವಾಲು
"ಯಾಕೆ ಗುರುಗಳೇ? ಯಾಕೆ ಭಯ? ನಾವು ಬೇರೆ ಅಲ್ಲ, ಈ ಹುಲಿ ಬೇರೆಯಲ್ಲ. ಹಾಗಿದ್ದ ಮೇಲೆ ನಮಗೆ ನಾವೇ ಹೆದರುವುದಾದರೂ ಹೇಗೆ?" ಶಿಷ್ಯ, ಗುರುಗಳನ್ನು ಅಚ್ಚರಿಯಿಂದ ಪ್ರಶ್ನೆ ಮಾಡಿದ.
ಗುರುಗಳು ಗಡಗಡ ನಡುಗುತ್ತಲೇ ಕೂಗಿಕೊಂಡರು, "ಹೌದು, ನೀನು ಹೇಳೋದು ನಿಜ. ಈ ಸತ್ಯ ನನಗೆ ಗೊತ್ತು, ನಿನಗೆ ಗೊತ್ತು ಆದರೆ ಆ ಹುಲಿಗೆ ಗೊತ್ತಿಲ್ಲ! ಬೇಗ ಬೇಗ ಮರ ಹತ್ತು...!!"
ಎಲ್ಲರೂ ಬಂದು ಹೋಗುವ ಜಾಗ ಅರಮನೆಯಲ್ಲ, ಪ್ರವಾಸಿಗೃಹ!
ನಮ್ಮ ಜೀವನಾನುಭವ ಏನೇ ಆಗಿರಬಹುದು ಮತ್ತು ಹೇಗೆಯೇ ನಾವು ಅದನ್ನು ಎದುರಿಸಿರಬಹುದು, ಆದರೆ ಎಲ್ಲರ ಅನುಭವವೂ ಒಂದೇ ಆಗಬೇಕೆಂದಿಲ್ಲ. ಮತ್ತು ಆಗಿನ ಸಂದರ್ಭ, ಸನ್ನಿವೇಶಕ್ಕೆ ಅನುಗುಣವಾಗಿ ನಾವು ಅದನ್ನು ಎದುರಿಸಬೇಕಾಗುತ್ತದೆ. ಸಮಸ್ಯೆಯನ್ನು ಎದುರಿಸಲು ಹಿಂದೆ ಮತ್ತೊಬ್ಬರು ಅನುಸರಿಸಿದ ತಂತ್ರ ಈಗಲೂ ಅನ್ವಯಿಸಬಲ್ಲದು ಎನ್ನಲಾಗದು. ಅದೊಂದು ಉಪಾಯವಾಗಬಹುದಷ್ಟೇ.
(ಸಂಗ್ರಹ)