ದಿನದ ಝೆನ್ ಕಥೆ: ಗುರುವಿನ 'ವಿಷದ ಬಾಟಲಿ' ಕಥೆ
ಒಬ್ಬ ಝೆನ್ ಗುರು ಬಹಳ ಜಿಪುಣನಾಗಿದ್ದ. ಆತನ ಬಳಿ ಎರಡು ಬಹಳ ಅಮೂಲ್ಯ ವಸ್ತುಗಳಿದ್ದವು. ಒಂದು ಪೆನ್ನು, ಇನ್ನೊಂದು ವೈನ್ ಬಾಟಲಿ. ಎರಡೂ ಬಹಳ ದುಬಾರಿಯಾಗಿದ್ದವು.
ಆದರೆ ಮಹಾ ಜಿಪುಣವಾಗಿದ್ದ ಗುರು, ಆ ಪೆನ್ನನ್ನು ಯಾರಿಗೂ ಬಳಸಲು ಕೊಟ್ಟಿರಲಿಲ್ಲ. ಮಾತ್ರವಲ್ಲ, ತಾನೂ ಅದರಲ್ಲಿ ಒಮ್ಮೆ ಕೂಡ ಬರೆಯಲಿಲ್ಲ. ಹಾಗೆಯೇ ಆ ವೈನ್ ಬಾಟಲು ಕೂಡ. ಅದರ ಒಂದೇ ಒಂದು ಹನಿಯನ್ನು ಆತ ಯಾರಿಗೂ ಕುಡಿಯಲು ಕೊಟ್ಟಿರಲಿಲ್ಲ; ತಾನೂ ಅದರ ರುಚಿ ಹೇಗಿದೆ ಎಂದು ನೋಡಿರಲಿಲ್ಲ. ವೈನ್ ಬಾಟಲನ್ನು ಯಾರೂ ಕದಿಯಬಾರದು ಎಂಬ ಉದ್ದೇಶದಿಂದ ಆತ ಅದು ಮಹಾವಿಷ ಎಂದು ಎಲ್ಲಾ ಕಡೆ ಪ್ರಚಾರ ಬೇರೆ ಮಾಡಿದ್ದ. ಅದರ ಒಂದೇ ಒಂದು ಹನಿ ನಾಲಗೆ ಮೇಲೆ ಬಿದ್ದರೂ ಮನುಷ್ಯ ಬದುಕುವುದು ಅನುಮಾನ ಎಂದು ಎಲ್ಲರಿಗೂ ಹೆದರಿಸಿದ್ದ.
ನರಸಿಂಗರಾಯನಿಗೆ ಆ ಸುಖದುಸಿರು ಪ್ರಣಯ ಗೀತೆಯಾಗಿ ಧ್ವನಿಸುತ್ತಿತ್ತು
ಇದನ್ನೆಲ್ಲ ನೋಡುತ್ತಿದ್ದ ಒಬ್ಬ ವಿದ್ಯಾರ್ಥಿಗೆ ತನ್ನ ಗುರುವಿನ ಜಿಪುಣತನ ಬೇಸರ ತರಿಸಿತ್ತು. ಹೇಗಾದರೂ ಮಾಡಿ ಗುರುವಿಗೆ ಬುದ್ಧಿ ಕಲಿಸಬೇಕೆಂದು ಆತ ತೀರ್ಮಾನಿಸಿದ್ದ. ಒಮ್ಮೆ ಗುರು ಪಕ್ಕದ ಹಳ್ಳಿಗೆ ಭೇಟಿ ನೀಡುವ ಸಲುವಾಗಿ ಮಠದಿಂದ ಹೊರಹೋಗಬೇಕಾಯಿತು. ಹಳ್ಳಿಗೆ ಭೇಟಿ ನೀಡಿ ಸಂಜೆ ಮಠಕ್ಕೆ ಹಿಂದಿರುಗುವ ವೇಳೆ ಆತನ ಶಿಷ್ಯ ಮಠದ ಒಂದು ಮೂಲೆಯಲ್ಲಿ ಕಂಬಳಿ ಹೊದ್ದು ಮಲಗಿದ್ದ.
ಆತನನ್ನು ನೋಡಿದ ಗುರು ಏನಾಯಿತು ಎಂದು ವಿಚಾರಿಸಿದ. "ಏನು ಮಾಡಲಿ ಹೇಳಿ ಗುರುಗಳೇ! ಯಾವುದೋ ಕೆಲಸಕ್ಕೆಂದು ನಿಮ್ಮ ಕೋಣೆಗೆ ಹೋಗಿದ್ದಾಗ ಅಲ್ಲಿ ನಿಮ್ಮ ಪೆನ್ನನ್ನು ತಿಳಿಯದೆ ಮುರಿದುಬಿಟ್ಟೆ. ಅದು ಎಂತಹ ಅಮೂಲ್ಯವಾದ ಪೆನ್ನು! ನಿಮಗೆ ಅದನ್ನು ಕಂಡರೆ ಪ್ರಾಣ ಎನ್ನುವುದು ನನಗೆ ಗೊತ್ತಿಲ್ಲದ ವಿಷಯವೇ? ಹಾಗಾಗಿ ಇಷ್ಟು ಘನಘೋರ ತಪ್ಪು ಮಾಡಿದ್ದಕ್ಕಾಗಿ ನನಗೆ ಸಾವೇ ಸರಿಯಾದ ಶಿಕ್ಷೆ ಎಂದು ತೀರ್ಮಾನಿಸಿದೆ. ನೀವು ಇಟ್ಟಿದ್ದ ವಿಷದ ಬಾಟಲಿಯಲ್ಲಿ ಒಂದು ಹನಿಯೂ ಉಳಿಯದಂತೆ ಕುಡಿದುಬಿಟ್ಟೆ! ಈಗ ಸಾವಿಗಾಗಿ ಎದುರು ನೋಡುತ್ತ ಮಲಗಿದ್ದೇನೆ" ಎಂದ ಶಿಷ್ಯ.
(ಸಂಗ್ರಹ)