ಝೆನ್ ಕಥೆ: ಭೂಕಂಪವಾದಾಗಲೂ ಭಯ ನಿಯಂತ್ರಿಸಿಕೊಳ್ಳುವುದು ಹೀಗೆ...
ಒಮ್ಮೆ ಇಡೀ ಝೆನ್ ದೇವಾಲಯ ಅಲುಗಾಡುವಷ್ಟು ತೀವ್ರತೆಯ ಭೂಕಂಪ ಆಯಿತು. ದೇವಾಲಯದ ಕೆಲವು ಭಾಗಗಳು ಕುಸಿದೂ ಬಿದ್ದವು. ಒಳಗಿದ್ದ ಅನೇಕ ಸನ್ಯಾಸಿಗಳು ಭಯಭೀತರಾದರು. ಭೂಮಿ ಅಲುಗಾಡುವುದು ನಿಂತ ಬಳಿಕ ಗುರುಗಳು ಹೇಳಿದರು, "ಬಿಕ್ಕಟ್ಟಿನ ಸಂದರ್ಭದಲ್ಲಿ ಝೆನ್ ಮನುಷ್ಯ ಹೇಗೆ ವರ್ತಿಸುತ್ತಾನೆ ಎಂಬುದನ್ನು ನೋಡುವ ಅವಕಾಶ ನಿಮಗೆ ಈಗಷ್ಟೇ ದೊರಕಿತು. ಇಂತಹ ಸಂದರ್ಭದಲ್ಲಿಯೂ ಅವಸರದ ನಡೆಗಳನ್ನು ತೆಗೆದುಕೊಳ್ಳುವಂತಹ ತೀವ್ರ ಭಯ ನನ್ನನ್ನು ಬಾಧಿಸಲಿಲ್ಲ ಎಂಬುದನ್ನು ನೀವು ಗಮನಿಸಿರಬಹುದು. ಭೂಕಂಪನ ಉಂಟಾದಾಗ ದೇವಾಲಯದಲ್ಲಿ ಅತ್ಯಂತ ಗಟ್ಟಿಮುಟ್ಟಾದ ಭಾಗವಾಗಿರುವ ಅಡುಗೆ ಕೋಣೆಗೆ ನಿಮ್ಮೆಲ್ಲರನ್ನು ನಾನು ಕರೆದುಕೊಂಡು ಹೋದೆ. ಅದು ಒಳ್ಳೆಯ ನಿರ್ಧಾರವೇ ಆಗಿತ್ತು. ನಾನು ಗಾಬರಿಪಡದೆ ತಾಳ್ಮೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೆ. ಹೀಗಾಗಿ ಯಾವ ಗಾಯ ಕೂಡ ಆಗದೆ ನೀವೆಲ್ಲರೂ ಬದುಕಿ ಉಳಿದಿದ್ದೀರಿ. ಈ ವೇಳೆ ನನ್ನ ಆತ್ಮಸಂಯಮಕ್ಕೆ ಮತ್ತು ಶಾಂತ ಮನಸ್ಥಿತಿಗೆ ಧಕ್ಕೆಯಾಗದೇ ಇದ್ದರೂ, ತುಸು ಭಯ ಕಾಡಿದ್ದಂತೂ ನಿಜ. ನಾನು ಒಂದು ದೊಡ್ಡ ಲೋಟದಲ್ಲಿ ನೀರು ಕುಡಿದಿದ್ದನ್ನು ನೋಡಿ ಇದನ್ನು ನೀವೆಲ್ಲ ಊಹಿಸಿರುತ್ತೀರಿ. ಏಕೆಂದರೆ ಸಾಮಾನ್ಯ ಪರಿಸ್ಥಿತಿಗಳಲ್ಲಿ ನಾನು ಹೀಗೆ ಮಾಡುವುದಿಲ್ಲ ಎಂಬುದು ನಿಮಗೆ ಗೊತ್ತಿದೆ."
ಎಲ್ಲ ಸನ್ಯಾಸಿಗಳ ಪೈಕಿ ಒಬ್ಬ ಏನೂ ಮಾತನಾಡದೇ ಇದ್ದರೂ ಸಣ್ಣನೆ ಮುಗುಳ್ನಕ್ಕ. "ನೀನೇಕೆ ನಗುತ್ತಿದ್ದೀಯಾ?" ಗುರುಗಳು ಕೇಳಿದರು. ಸನ್ಯಾಸಿ ಉತ್ತರಿಸಿದ, "ಗುರುಗಳೇ, ನೀವು ಕುಡಿದದ್ದು ನೀರನ್ನಲ್ಲ, ದೊಡ್ಡ ಲೋಟದಲ್ಲಿ ತುಂಬಿದ್ದ ಸೋಯಾ ಅವರೆಯ ಸಾರನ್ನು".
ಅಪಾಯದ ಸಂದರ್ಭ ಬಂದಾಗ ನಾವು ಹೇಗೆ ಎದುರಿಸಬೇಕು, ನಮ್ಮ ದುಗುಡಗಳನ್ನು ನಿಯಂತ್ರಿಸಿಕೊಂಡು ಶಾಂತವಾಗಿ ಮುನ್ನಡೆದಾಗ ಪರಿಸ್ಥಿತಿಯನ್ನು ಎದುರಿಸಬಹುದು ಎಂದು ಹೇಳುವುದು ಸುಲಭ. ಆದರೆ ಅಂತಹ ಸನ್ನಿವೇಶ ಎದುರಾದಾಗ ನಾವು ಎಲ್ಲರಂತೆಯೇ ನಿಯಂತ್ರಣ ಕಳೆದುಕೊಳ್ಳುತ್ತೇವೆ.