ಬದುಕಿನಲ್ಲಿ ಎಲ್ಲದಕ್ಕೂ ಅರ್ಥ ಹುಡುಕಬೇಡಿ, ಆನಂದ ಅನುಭವಿಸಿ ಅಷ್ಟೇ!
ಪ್ರಸಿದ್ಧ ಝೆನ್ ಗುರುವೊಬ್ಬ ಆಶ್ರಮದಲ್ಲಿ ಆರಾಮವಾಗಿ ಕಾಲು ಚಾಚಿ ಕುಳಿತು ವಿರಮಿಸುತ್ತಿದ್ದ. ಅವನ ಪಕ್ಕದಲ್ಲಿ ಒಬ್ಬ ಶಿಷ್ಯ ಝೆನ್ ಗ್ರಂಥವೊಂದನ್ನು ಓದುತ್ತ ಕುಳಿತಿದ್ದ. ಮಧ್ಯಾಹ್ನ ಬಹಳ ಬಿಸಿಲಿನ ಸಮಯ. ಗುರುವಿಗೆ ಹಣ್ಣು ತಿನ್ನಬೇಕೆಂದೆನಿಸಿ ಕೈಚೀಲದಿಂದ ಮೂಸಂಬಿಯೊಂದನ್ನು ಹೊರತೆಗೆದ. ಒಬ್ಬನೇ ತಿನ್ನುವುದು ಸರಿಯಲ್ಲ ಎಂದು ಶಿಷ್ಯನಿಗೂ ಕೊಡುವ ಸಲುವಾಗಿ ಹಣ್ಣನ್ನು ಎರಡು ಭಾಗ ಮಾಡಿದ. ಶಿಷ್ಯನಿಗೆ ಒಂದನ್ನು ಕೊಟ್ಟು, ಇನ್ನೊಂದು ಭಾಗವನ್ನು ತಿನ್ನಲು ಪ್ರಾರಂಭಿಸಿದ.
ಆಗ ಶಿಷ್ಯನಿಗೆ ಅನುಮಾನವೊಂದು ಮೂಡಿತು. 'ಗುರುಗಳೇ, ನೀವು ಮಾಡುವ ಪ್ರತಿಯೊಂದು ಕ್ರಿಯೆಗೂ ಅರ್ಥವಿದ್ದೇ ಇರುತ್ತದೆ. ಹಾಗಿದ್ದ ಮೇಲೆ, ಈ ಮೂಸಂಬಿಯನ್ನು ಎರಡು ಮಾಡಿ ಹಂಚಿಕೊಳ್ಳುವುದರ ಮೂಲಕ ನನಗೇನಾದರೂ ಹೊಸ ಸಂದೇಶ ಕೊಡುತ್ತಿದ್ದೀರಾ?' ಎಂದು ಕೇಳಿದ. ಗುರು ಏನೂ ಉತ್ತರ ನೀಡಲಿಲ್ಲ. ಸುಮ್ಮನೆ ತನ್ನ ಪಾಡಿಗೆ ಮೂಸಂಬಿ ತಿನ್ನುವುದರಲ್ಲಿ ಮಗ್ನನಾಗಿದ್ದ.
ದಿನದ ಝೆನ್ ಕಥೆ: ಗುರುವಿನ 'ವಿಷದ ಬಾಟಲಿ' ಕಥೆ
ಶಿಷ್ಯ ಅಷ್ಟಕ್ಕೆ ಸುಮ್ಮನಾಗಲಿಲ್ಲ. 'ನೀವು ಮೌನವಾಗಿದ್ದೀರಿ ಅಂದರೆ ಏನನ್ನೋ ಆಳವಾಗಿ ಚಿಂತಿಸುತ್ತಿದ್ದೀರಿ ಅಂತನ್ನಿಸುತ್ತದೆ' ಎಂದ. ಆತನೇ ಊಹೆಗೆ ಇಳಿದ. 'ಓಹೋ, ಅದು ಹೀಗಿರಬೇಕು, ಮೂಸಂಬಿ ತಿಂದಾಗ ಸಿಗುವ ಆನಂದ ಹಣ್ಣಿನಲ್ಲಿದೆಯೋ ಅಥವಾ ಅದನ್ನು ಅನುಭವಿಸುವ ನಾಲಗೆಯಲ್ಲಿದೆಯೋ ಎಂಬ ವಿಷಯದ ಬಗ್ಗೆ ನೀವು ಗಾಢವಾಗಿ ಆಲೋಚಿಸುತ್ತಿರಬೇಕು, ಅಲ್ಲವೇ?' ಗುರು ಆಗಲೂ ಏನೂ ಮಾತನಾಡಲಿಲ್ಲ.
ಇದರಿಂದ ಶಿಷ್ಯ ಬಿಡುವ ಲಕ್ಷಣ ಕಾಣಿಸಲಿಲ್ಲ; 'ನಿಜ ಗುರುಗಳೆ, ಬದುಕಿನಲ್ಲಿ ಪ್ರತಿಯೊಂದು ಕ್ರಿಯೆಗೂ ಅರ್ಥ ಇದ್ದೇ ಇರುತ್ತದೆ. ನನಗೆ ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿದೆ! ತಪ್ಪಿದ್ದಲ್ಲಿ ತಿದ್ದಿ. ಹಣ್ಣನ್ನು ತಿಂದಾಗ ಸಿಗುವ ಆನಂದ ಬರಿಯ ಹಣ್ಣಿನಲ್ಲೂ ಇಲ್ಲ ಅಥವಾ ಬರಿಯ ನಾಲಗೆಯಲ್ಲೂ ಇಲ್ಲ. ಅದು ನಾವು ತಿನ್ನುವ ವಸ್ತು ಮತ್ತು ಅದನ್ನು ಅನುಭವಿ...'
ದಿನದ ಝೆನ್ ಕಥೆ: ದಂಡನಾಯಕನಿಗೆ ಗುರುವಿನ ಸವಾಲು
ಶಿಷ್ಯನ ಮಾತನ್ನು ಅರ್ಧಕ್ಕೇ ತಡೆದ ಗುರು ಹೇಳಿದ, 'ನಿನ್ನ ಹುಚ್ಚು ಕಲ್ಪನೆಗಳನ್ನು ಸಾಕು ಮಾಡು! ನಾನು ಬಿಸಿಲಿನಲ್ಲಿ ತಂಪಾಗಿರುತ್ತೆ ಅಂತ ಮೂಸಂಬಿ ತಿನ್ನಲು ಹೊರಟೆ. ಪಕ್ಕದಲ್ಲೇ ಇದ್ದೆಯಲ್ಲ ಅಂತ ನಿನಗೂ ಅರ್ಧ ಕೊಟ್ಟೆ, ಅಷ್ಟೇ. ನಿನಗೆ ಬೇಕು ಎನಿಸಿದರೆ ಮೂಸಂಬಿಯನ್ನು ತಿಂದು ಆನಂದ ಅನುಭವಿಸು. ಮೂಸಂಬಿ ತಿನ್ನುವಾಗ ಸಿಗುವ ಆನಂದದ ಬಗ್ಗೆ ಯೋಚಿಸುತ್ತ ಅದನ್ನು ತಿನ್ನುವ ಆನಂದವನ್ನು ಕಳೆದುಕೊಳ್ಳಬೇಡ. ಝೆನ್ ಎಂದರೆ ಎಲ್ಲದಕ್ಕೂ ಅರ್ಥ ಹುಡುಕುವುದಲ್ಲ; ಬದಲಾಗಿ ಬದುಕಿನಲ್ಲಿ ಪ್ರತಿ ಕ್ರಿಯೆಯಲ್ಲೂ ಆನಂದವನ್ನು ಅನುಭವಿಸುವುದು'.