ಸಣ್ಣ ಕಥೆ : ಫೇಸ್ಬುಕ್, ದಿಗ್ಗಿ, ಹಾಲು ಹಿಂಡೋದು
ರವಿಯ ಅಪ್ಪ ಅವ್ವ ಪೇಟೆಗೆ ಹೋದವರು ಸಂಜೆಯಾದರೂ ವಾಪಸ್ ಬಂದಿರಲಿಲ್ಲ.
ರವಿ ಒಂದು ಮುಖ್ಯ ಕೆಲಸವನ್ನೇ ಮರೆತು ಫೇಸ್ಬುಕ್ಕಿನಲ್ಲಿ ಮುಳುಗಿದ್ದ.
ಯಾರೋ ಪುಣ್ಯಾತ್ಮ ಹಾಕಿದ್ದ ಹಸುವಿನ ಫೋಟೋ ಆಕಸ್ಮಾತ್ ಕಣ್ಣಿಗೆ ಬಿದ್ದಿದ್ದರಿಂದ- ತನಗೆ ವಹಿಸಲಾಗಿದ್ದ -ಹಾಲು ಹಿಂಡುವ ಜವಾಬ್ದಾರಿಯ ನೆನಪಾಯಿತು!
ಅಷ್ಟೊತ್ತಿಗೆ ದೂರದಲ್ಲಿ ಹಾಲಿನ ಲಾರಿಯ ಹಾರ್ನ್ ಸದ್ದಾಯಿತು!
ಮೊಬೈಲನ್ನು ಸೈಡಿಗಿಟ್ಟು ಹಾಲು ಹಿಂಡಲು ಕುಳಿತ .
ಲಾಗೌಟಾದ ಮರುಕ್ಷಣವೇ ನೀರಿನಿಂದ ಹೊರಬಿದ್ದ ಮೀನಿನಂತೆ ತಳಮಳಿಸುವ ರವಿಗೆ -ಫೇಸ್ಬುಕ್ ನೋಡದೇ -ಹಾಲು ಹಿಂಡುವುದು ದೊಡ್ಡ ಸವಾಲಿನ ಕೆಲಸವಾಗಿತ್ತು.
ಹಾಗಾಗಿ ಪಾತ್ರೆಯನ್ನು ಕೆಚ್ಚಲಿನ ಅಡಿಯಲ್ಲಿಟ್ಟು ಒಂದು ಕೈಯಲ್ಲಿ ಮೊಬೈಲು ಹಿಡಿದು ಇನ್ನೊಂದು ಕೈಲಿ ಹಾಲು ಕರೆಯತೊಡಗಿದ.
ಅಷ್ಟರಲ್ಲಿ ಸ್ಕ್ರೀನಿನ ಮೇಲೆ ಮೂಡಿಬಂದ ಒಂದು ಫೋಟೋ ಅವನನ್ನು ಬೆಚ್ಚಿ ಬೀಳಿಸಿತು!
ಸೋಮ
ಹುಡುಗಿಯೊಬ್ಬಳೊಂದಿಗೆ
ಪೋಸ್
ಕೊಡುತ್ತಾ
ನಿಂತಿದ್ದಾನೆ!
ಇಬ್ಬರೂ ಹಾರ ಹಾಕಿಕೊಂಡಿದ್ದಾರೆ!
''With
my
lovely
wife''
ಎಂಬ
ಒಕ್ಕಣೆ
ಬೇರೆ
ಇದೆ!
ಎಲಾ ಬಡ್ಡೈದ್ನೇ !
ಸೋಮ ಊರು ಬಿಟ್ಟು ಬೆಂಗಳೂರಿನ ಬೇಕರಿಯೊಂದಕ್ಕೆ ಸೇರಿಕೊಂಡು ಐದಾರು ವರ್ಷಗಳಾಗಿದ್ದವು.
ಆರು ತಿಂಗಳ ಹಿಂದೆ ಸೋಮ ಚಾಟ್'ಗೆ ಸಿಕ್ಕಿದ್ದಾಗ ಬೇಕರಿ ಓನರ್ ಮಗಳನ್ನು ಲವ್ ಮಾಡುತ್ತಿರುವುದಾಗಿ ಹೇಳಿದ್ದು ನೆನಪಾಯಿತು .
ಅವರಪ್ಪ ಒಪ್ಪದಿದ್ರೆ ಎತ್ತಾಕ್ಕೊಂಡು ಹೋಗಿ ಮದುವೆಯಾಗುವುದಾಗಿಯೂ ಹೇಳಿದ್ದ.
ಎಲ್ಲೋ ಬುರುಡೆ ಬಿಡ್ತಿರ್ಬೇಕು ಅಂದ್ಕೊಂಡ್ರೆ ಬಡ್ಡೀಮಗ ಸಾಧಿಸಿಯೇ ಬಿಟ್ಟಿದ್ದಾನೆ!
ಒಂದು ಕ್ಷಣ ಅಸೂಯೆಯಾಯಿತು!
ಹಾಲು ಹಿಂಡುವುವದಕ್ಕೆ ಬ್ರೇಕ್ ಹಾಕಿ ಫೋಟೋವನ್ನು ಏಳೆಂಟು ಬಾರಿ ಎನ್ಲಾರ್ಜ್ ಮಾಡಿ ನೋಡಿದ.
ಬಡ್ಡೈದ ಸೂಪರ್ ಹುಡ್ಗೀನೇ ಪಟಾಯ್ಸಿದಾನೆ!
ಅದೇ ಗುಂಗಿನಲ್ಲಿ ಮುಳುಗಿದ್ದಾಗ ದಢಾರ್ ಎಂದು ಸದ್ದಾಯಿತು.
ನೋಡಿದ್ರೆ -ಮಾಲಿಂಗನ ಬಾಲಿಗೆ ಎಗರಿ ಡ್ಯಾನ್ಸ್ ಮಾಡುವ ಸ್ಟಂಪಿನಂತೆ- ಹಾಲಿನ ಪಾತ್ರೆ ಮಾರು ದೂರದಲ್ಲಿ ಗಿರಿಗಿಟ್ಲೆಯಾಡುತ್ತಿದೆ!
ಹಸುವಿನ ಬಲವಾದ ಕಿಕ್ಕಿಗೆ ಪಾತ್ರೆಯಲಿದ್ದ ಹಾಲು ಸುರುಳಿಯಾಕಾರದಲ್ಲಿ ಅಷ್ಟುದ್ದಕ್ಕೂ ಚೆಲ್ಲಿ ನಿಂತಿದೆ!
ಅಷ್ಟರಲ್ಲಿ ಅಪ್ಪ ಅವ್ವ ಪ್ರವೇಶ!
ಆ ಹಾಲಾ'ಹಲವನ್ನು ನೋಡಿ ಕೆರಳಿದ ರವಿಯ ಅಪ್ಪ ಬಿದಿರು ಕಡ್ಡಿಯನ್ನು ಹಿಡಿದು ಅವನನ್ನು ಅಟ್ಟಾಡಿಸಿಕೊಂಡು ಹೋದ.
ರವಿಯು ಮೋಟು ಗೋಡೆ ಹಾರಿ ಇರುಕಲು ಗಲ್ಲಿಯೊಳಗೆ ನುಗ್ಗಿ ಕ್ಷಣದಲ್ಲಿ ಎಸ್ಕೇಪಾದ.
ಒಂದು ಹೊರೆ ಹುಲ್ಲು ಕಿತ್ತು ತಂದರೆ ಅಪ್ಪನ ಕೋಪವನ್ನು ತಣಿಸಬಹುದೆಂದು ಐಡಿಯಾ ಮಾಡಿ ಹೊಲದತ್ತ ಹೆಜ್ಜೆ ಹಾಕಿದ.
ರವಿಯ ಹೊಲದ ದಾರಿಯಲ್ಲೇ ದೋಸ್ತು ಸುಬ್ಬುವಿನ ಹೊಲವಿತ್ತು.
ಅರೆ! ಸುಬ್ಬು ಬಾವಿಯ ಅರುಗಿನಲ್ಲೇ ಕುಳಿತಿದ್ದಾನೆ!
ಸುಬ್ಬು ಅಪ್ಪಟ ಕಾಂಗ್ರೆಸ್ ಅಭಿಮಾನಿಯಾದ್ರೆ ರವಿ ಮೋದಿ ಫ್ಯಾನು!
ಆದ್ರೂ ಇಬ್ರೂ ಒಳ್ಳೇ ಫ್ರೆಂಡ್ಸ್!
ಆವತ್ತು ಮಧ್ಯಾಹ್ನವಷ್ಟೇ ದಿಗ್ವಿಜಯ್ ಸಿಂಗ್ ಅಫೇರ್ ಬಯಲಾಗಿತ್ತು.
ಸುಬ್ಬುವನ್ನು ವಾದಕ್ಕೆಳೆದು ಕೆಡವಿ ತುಳಿಯಲು ಇದೇ ಸುಸಮಯ!
ಹಳೇ ಬಾಕಿ ಚುಕ್ತಾ ಮಾಡಲು ಸುಸಂದರ್ಭ!
"ಯಾಕುಡಾ ಸುಬ್ಬ ಸಪ್ಪಗ್ ಕೂತಿದ್ದೈ .. ನಿಮ್ ದಿಗ್ಗಿ ಬಣ್ಣ ಬಯಲಾಯ್ತಲ್ಲ.. ಅದ್ಕ ಅವ್ಮಾನ ಆಗಿ ಬಾವಿಗ್ ಬೀಳಕ್ ಬಂದ್ಯಾ " ಅಂದ ರವಿ .
ಅದಕ್ಕೆ ಸುಬ್ಬು, "ನಮ್ಮಂಥವ್ರು ಈ ಬೂಮಿ ಮ್ಯಾಲ ಬದ್ಕಿರೋದು ವೇಸ್ಟು"
" ನೀನ್ ವೇಸ್ಟ್ ಇರ್ಬೋದು.. ನಾನಲ್ಲ.. ಬೇಕಾದ್ರೆ ನೆಗ್ದ್ ಬಿದ್ ಸಾಯಿ.. ನಾನೇ ತಳ್ತೀನಿ''
" ಆ ಮುದಿಯ ದಿಗ್ಗಿರಾಜ ಅಂಥಾ ಗರ್ಲ್ ಫ್ರೆಂಡ್ ಕ್ಯಾಚ್ ಹಾಕವ್ನೆ ..ಅಂಥಾದ್ರಲ್ಲಿ ನಮ್ ಕೈಲಿ ಒಂದ್ ಹುಡ್ಗಿ ಬೀಳಿಸ್ಕಳಕ್ಕಾಗ್ತಿಲ್ಲ ಅಂದ್ರ ನಾವ್ ವೇಸ್ಟ್ ಬಾಡಿಗಳು ಅಂತ್ಲೇ ಅರ್ಥ''
''ಹಂಗಾದ್ರ ನಾವ್ ದಿಗ್ಗಿಗಿಂತ ಕಡೆಯಾಗೋದ್ವಾ.... ಛೇ''
ರವಿಗೆ ಅದೇ ಮೊದಲ ಬಾರಿಗೆ ಸುಬ್ಬುವಿನ ಮೇಲೆ ಅನುಕಂಪ ಉಕ್ಕಿ ಹರಿಯಿತು!
ತನ್ನ ಬಗ್ಗೆಯೂ ಸ್ವಾನುಭೂತಿ ಉಕ್ಕಿ ಬಂತು!
ಇಬ್ಬರೂ ಸಮಾನ ಸಂತ್ರಸ್ತರು ಅನ್ನಿಸಿತು!
ಪಕ್ಷಬೇಧ ಮರೆತು ಒಬ್ಬರನ್ನೊಬ್ಬರು ಸಂತೈಸಿಕೊಂಡರು!