ಅಗೋಚರ ಶಕ್ತಿ : ಪ್ರೇಮದೇವತೆಯ ವಶನಾದ
(ಮುಂದುವರಿದಿದೆ...) ಕೆಲಸವಿಲ್ಲದಿದ್ದರೂ ಶರಣ್ ಗೃಹಸ್ಥಾಶ್ರಮ ಸೇರಿದ. ತಂದೆಗೆ ಯಾವ ಆದಾಯವೂ ಇರದೆ, ಅದೇ ಚಿಂತೆಯಲ್ಲಿ ಆರೋಗ್ಯ ಹದಗೆಟ್ಟಿತು. ತಾಯಿ ಅಸಹಾಯಕರಾದರು. ಕೊನೆಗೊಂದು ದಿನ, ಅವನ ತಂದೆ ಕೊನೆಯುಸಿರೆಳೆದರು. ತಾಯಿ ಅವರ ಚಿಂತೆಯಲ್ಲೇ ಮಂಕಾದರು.
ಶರಣ್ ಈಗ ಕೀರ್ತಿವಂತ, ಹಣವಂತ ಜೊತೆಗೆ ಇನ್ನೂ ಗುಣವಂತ! ಇದಕ್ಕಾಗಿ ಯಾವ ಅಡ್ಡದಾರಿಯನ್ನೂ ಹಿಡಿಯಲಿಲ್ಲ. ಹಲವು ವರ್ಷಗಳ ಅವಿರತ ಪ್ರಯತ್ನದ ಫಲವೇ ಅವನ ಈಗಿನ ಸುಸ್ಥಿತಿ. ತಂದೆಯ ಸಾಲದ ಋಣ ತೀರಿಸಿ ಆಗಲೇ ಬಹಳ ಕಾಲವಾಗಿತ್ತು. ಅಂದು, ಅವನಿಗೆ ತಂದೆಯ ಕಡೆಯ ಅಪ್ಪುಗೆ ಆಕಾರವಾಗಿ ಮೂಡಿತ್ತು, ಅವನನ್ನು ಕಾಡಿತ್ತು.
ಶರಣ್ ನ ಈ ಏಳ್ಗೆಗೆ ಕಾರಣ ಆ ಸುದಿನ. ಅಂದು ಅವನ ಹೆಂಡತಿ ಕರೆದು ಹೀಗೆ ಅರಿವು ಮತ್ತು ಆತ್ಮಸ್ಥೈರ್ಯ ಮೂಡಿಸಿದ್ದಳು, "ನಿಮ್ಮ ತಂದೆ ಇತ್ತೀಚೆಗೆ ಮರಣ ಹೊಂದಿದ್ದು ಅನಾರೋಗ್ಯದಿಂದಲ್ಲ; ಅವರನ್ನು ಕೊರೆಯುತ್ತಿದ್ದ ಸಾಲದ ಚಿಂತೆ. ಪರೋಕ್ಷವಾಗಿ, ನಿಮ್ಮ ತಂದೆಯ ಸಾವಿಗೆ ನೀವೇ ಕಾರಣ. ತಂದೆಯ ಋಣ ತೀರಿಸಲು ಸಾಧ್ಯವಿಲ್ಲ. ಆದರೆ, ತಂದೆಯ ಸಾಲದ ಋಣ ತೀರಿಸದವನು ನಿಜವಾದ ಮಗನೇ ಅಲ್ಲ. ನಿಮ್ಮಲ್ಲಿ ಪುಸ್ತಕ ಜ್ಞಾನದ ಕೊರತೆಯಿರಬಹುದು. ಆದರೆ, ಜಗತ್ತಿನಲ್ಲಿ ಹೇಗೆ ಬಾಳಬೇಕೆಂಬ ಅರಿಕೆಗಲ್ಲ. ನಿಮ್ಮಲ್ಲಿ ಮೊದಲಿನಿಂದಲೂ ಬರೆಯುವ ಹುಚ್ಚಿತ್ತು. ಈಗ ನಿಮ್ಮ ಮನಸ್ಸು ಪಕ್ವಗೊಂಡಿದೆ. ನಿಮ್ಮ ಅನುಭವ, ಚಿಂತೆಯ ಆಳ ಶಕ್ತಿಯೇ ನಿಮಗೆ ಗುರುವಾಗಲಿ".
ಈ ಮಾತುಗಳನ್ನು ಕೇಳಿ ಅವನಿಗೆ ಅವಳು ಎರಡನೆಯ ತಾಯಿ ಎನಿಸಿದಳು; ಮಲತಾಯಿಯಲ್ಲ! ಒಮ್ಮೆ ಮುಂದೆ, ತಾನು ದೊಡ್ಡ ಸಾಹಿತಿಯೆಂದು ಕಲ್ಪಿಸಿಕೊಂಡ. ತಕ್ಷಣವೇ, "ಪ್ರತಿ ಗಂಡಿನ ಯಶಸ್ಸಿನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ" ಎಂಬ ಮಾತು ಅಕ್ಷರಶಃ ಸತ್ಯವೆನಿಸಿತು. ಅದೇ ಖುಷಿಯಲ್ಲಿ ಅವಳ ಕೆನ್ನೆಗೊಂದು ಸಿಹಿ-ಮುತ್ತು ಕೊಟ್ಟ. ತಕ್ಷಣವೇ, ಮತ್ತೆ ದೇವತೆಯ ಪ್ರತ್ಯಕ್ಷ! ಕಳೆದ ರೂಪದಲ್ಲೇ! ಈ ಬಾರಿ ಶರಣ್ ಕೇಳಿಯೇ ಬಿಟ್ಟ, "ತಾಯಿ! ನೀನ್ಯಾರು? ಊರ ದೇವತೆಯೋ, ಕಾಡ ದೇವತೆಯೋ, ನಾಡ ದೇವತೆಯೋ, ತಾಯಿ ಭುವನೇಶ್ವರಿಯೋ ಅಥವಾ ನಮ್ಮ ಇಷ್ಟ ದೈವ ಮೂಕಾಂಬಿಕೆಯೋ?".
ಪ್ರಸನ್ನವದನಳಾದ ದೇವತೆ ಹೀಗೆ ನುಡಿದಳು, "ಅಯ್ಯೋ ಮೂರ್ಖ! ನಾನು, ನೀನು ಹೇಳಿದ ಯಾವ ದೇವತೆಯೂ ಅಲ್ಲ! ನಾನು ಜಲದೇವತೆಯಂತೆ, ಶುದ್ಧ ಭಾವದಲ್ಲಿ ಯಾವ ರೂಪ, ಆಕಾರವೂ ಇರುವುದಿಲ್ಲ. ಆದರೆ, ನಾನು ವಿವಿಧ ರೂಪಗಳಲ್ಲಿ, ಬಣ್ಣಗಳಲ್ಲಿ ಕಾಣಿಸಿಕೊಳ್ಳಬಲ್ಲೆ; ಚೆಲುವಾಗಿ ತೋರಬಲ್ಲೆ. ಈಗಲಾದರೂ ತಿಳಿಯಿತೆ?". ಶರಣ್ ಕೂಡಲೇ, "ಹಾಂ ತಾಯಿ, ತಿಳಿಯಿತು! ನೀನು "ಪ್ರೇಮದೇವತೆ"ಯಲ್ಲವೆ? ಹಾಗಾದರೆ, ನೀನು ಎಲ್ಲಿ ವಾಸವಾಗಿರುವೆ?" ಎಂದು ಮರುಪ್ರಶ್ನಿಸಿದ. ಮತ್ತೆ ದೇವತೆಯ ಮೊಗದಲ್ಲಿ ಮಂದಹಾಸ. "ಮಗೂ! ನಾನು ಸಕಲ ಜೀವಿ ಜಂತುಗಳ ಒಳಗೆ ಅಡಗಿರುವೆ. ನಿಮ್ಮೆಲ್ಲರ ಹೃದಯ ಕಮಲವೇ ನನ್ನ ನಿಜವಾದ ವಾಸ ಸ್ಥಳ. ಆಗಾಗ, ವಿವಿಧ ಬಂಧಗಳಲ್ಲಿ, ವಿವಿಧ ರೂಪಗಳಲ್ಲಿ ಚೆಲುವಾಗಿ ಕಾಣಿಸುತ್ತೇನೆ ರಸ ಘಳಿಗೆಗಳಲ್ಲಿ!" ಎಂದು ಹೇಳಿ ಅಪ್ರತ್ಯಕ್ಷಳಾದಳು.