ಅಗೋಚರ ಶಕ್ತಿ : ಜೀವ ಉಳಿಸಿದ ಗೆಳೆಯ
(ಮುಂದುವರಿದಿದೆ...) ಒಂದು ರಾತ್ರಿ ಗೆಳೆಯನೊಬ್ಬನ ಹುಟ್ಟುಹಬ್ಬದ ಪಾರ್ಟಿಗೆ ಶರಣ್ ಹೊರಟಿದ್ದ. ರಾಮ್ ತಾನು ಬರುವುದಿಲ್ಲವೆಂದೂ, ರಾತ್ರಿ 11ರ ಒಳಗೆ ಮನೆಗೆ ಬರತಕ್ಕದುದೆಂದು ಹೇಳಿ ಕಳಿಸಿದ್ದ. ಪುಂಡ ಗೆಳೆಯರಿಗೊಂದು "ಗುಂಡು" ಹಾಕಲು ನೆಪ ಸಾಕು. ಅದು ಹುಟ್ಟುಹಬ್ಬವಾದರೂ ಸರಿ; ಪ್ರೇಮ ವಿರಹವಾದರೂ ಸರಿ. ಅಂದು ಕೊಂಚ ಹೆಚ್ಚಾಗಿತ್ತು ಗೆಳೆಯರಿಗೆಲ್ಲಾ. ಶರಣ್ ಗೆ ಮೊದಲು ಅಭ್ಯಾಸವಿಲ್ಲದಿದ್ದರೂ, ನಂತರ ಸ್ನೇಹಿತರೊಡನೆ ಬೇಡವೆನ್ನಬಾರದೆಂದು ತೆಗೆದುಕೊಳ್ಳುತ್ತಿದ್ದ. ಅತ್ತ ರಾಮ್ ನ ಮನೆ ಶರಣ್ ರೂಮ್ ಹತ್ತಿರ ಇದ್ದುದರಿಂದ ಒಮ್ಮೆ ಬಂದು ನೋಡಿದ. ಇನ್ನೂ ಶರಣ್ ಬಂದಿಲ್ಲವೆಂದು ಪೇಚಾಡಿದ. ರಾತ್ರಿ 12ರ ಸರಿ ಸಮಯಕ್ಕೆ, ಇತ್ತ ಗೆಳೆಯರೆಲ್ಲಾ ಹೊರಟರು. ಶರಣ್ ಒಬ್ಬನ ಗಾಡಿಯಲ್ಲಿ ಹಿಂದೆ ಕುಳಿತಿದ್ದ. ತೇಲಾಡುತ್ತ, ತೂಗುತ್ತ, ಕೂಗುತ್ತ ಏರಿಸುವ ಬೈಕ್ ನ ವೇಗ ಅವರಿಗೆಲ್ಲಾ ಒಂದು ವಿಚಿತ್ರ ಥ್ರಿಲ್ ಕೊಡುತ್ತಿತ್ತು. ಅಷ್ಟರಲ್ಲಿ ನಡೆಯಬಾರದದೊಂದು ಘಟನೆ ಸಂಭವಿಸಿತ್ತು. ಶರಣ್ ಕೂತಿದ್ದ ಬೈಕ್ ನ ಚಾಲಕ ಸ್ಮಶಾನಕ್ಕೆ ನಡೆದಿದ್ದ; ಕೊಂಚದರಲ್ಲಿಯೆ ತಪ್ಪಿಸಿಕೊಂಡು, ಶರಣ್ ಆಸ್ಪತ್ರೆ ಸೇರಿದ್ದ.
ಅತ್ತ ರಾಮ್ ಇನ್ನೂ ಶರಣ್ ಬಂದಿಲ್ಲವೆಂದು, ಆ ಕಡೆಯೇ ಹೆಜ್ಜೆ ಹಾಕಿದ್ದ. ನಡೆದ ಘಟನೆ ಕಂಡು ದಿಗ್ಭ್ರಾಂತನಾದರೂ, ಶರಣ್ ನನ್ನು ಸರಿ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿದ್ದ. ಇದರ ನಡುವೆಯೂ, ಒಂದು ವಿಚಿತ್ರ ಅನುಭವವಾಯಿತು. ರಸ್ತೆಯಲ್ಲಿ ಬಿದ್ದಿದ್ದ ಶರಣ್ ನನ್ನು ಒಮ್ಮೆ ರಾಮ್ ತನ್ನ ತೊಡೆಯ ಮೇಲಿರಿಸಿಕೊಂಡ. ಆಗ ಇದ್ದಕ್ಕಿದ್ದಂತೆ, ಅಗಾಧ ಬೆಳಕಿನ ಶಕ್ತಿಯೊಂದು ಗೋಚರಿಸಿದಂತಾಯಿತು. ಆದರೆ, ಆ ಶಕ್ತಿ ಈಗೊಂದು ಕಾಂತಿಯುತ ಸ್ತ್ರೀ ರೂಪ ಪಡೆದಿತ್ತು! ಅದು ರಾಮ್ ನತ್ತ ಮುಖ ಮಾಡಿ ಹೀಗೆ ನುಡಿಯಿತು: "ಮಗೂ, ನಿನ್ನ ಗೆಳೆಯನನ್ನು ಉಳಿಸಿಕೋ, ಅದಕ್ಕೆ ಬೇಕಾದ ಧೈರ್ಯ ನಾ ತುಂಬುತ್ತೇನೆ". ಮರುಕ್ಷಣವೇ, ಆ ದೇವತೆ ಮಾಯವಾದಳು.
ರಾಮ್ ಶರಣ್ ನನ್ನು ಆಸ್ಪತ್ರೆಗೆ ಸೇರಿಸಿದ ನಂತರ ಅವನ ತಂದೆ-ತಾಯಿಗೆ ಫೋನ್ ಮಾಡಿದ. ವಿಷಯವಷ್ಟು ಗಂಭೀರವಲ್ಲವೆಂದು ಸಮಾಧಾನ ಮಾಡಿ ತಿಳಿಸಿದ್ದ. ರಾಮ್ ಶರಣ್ ನನ್ನು ಬದುಕಿಸಲು ಯಶಸ್ವಿಯಾದನೇನೋ ಸರಿ, ಆದರೆ ಒಂದು ಆಘಾತ ಕಾಯ್ದಿತ್ತು. ಶರಣ್ ನ ಒಂದು ಮೂತ್ರ ಪಿಂಡ ಸಂಪೂರ್ಣವಾಗಿ ವಿಫಲಗೊಂಡಿತ್ತು. ವೈದ್ಯರು ಸಾಧಾರಣ ಜೀವನಕ್ಕೇನೂ ತೊಂದರೆಯಿಲ್ಲವೆಂದು ತಿಳಿಸಿದರು. ಆದರೆ, ಬೆಳೆದ ಮಗ ಹಿಗ್ಗಿನಿಂದ ಕುಣಿದಾಡುವುದನ್ನು ಕಾಣಬಯಸಿದ್ದ ತಂದೆ-ತಾಯಿಗೆ ಈ ಆಘಾತ ಹೇಗೆ ತಾನೆ ಸಹಿಸಲು ಸಾಧ್ಯ?
ಶರಣ್ ಚೇತರಿಸುತ್ತಿರುವಾಗ ರಾಮ್ ತಾನು ಕಂಡ ಆ ವಿಶಿಷ್ಟ ಘಟನೆಯನ್ನು ತಿಳಿಸಿದ. ತಾನು ಹುಟ್ಟುವ ಮುಂಚೆ ತನ್ನ ತಾಯಿ ಕಂಡ ಘಟನೆಯನ್ನು ಕೇಳಿ ತಿಳಿದಿದ್ದನಾದ್ದರಿಂದ, ಈ ಘಟನೆಯಲ್ಲಿ ಕಂಡ ಆ ಶಕ್ತಿ ಕೂಡ ಒಂದೇ ಇರಬಹುದೆಂದುಕೊಂಡ. ಜೊತೆಗೆ, ಈಗ ಆ ಶಕ್ತಿ ಒಂದು ಕಾಂತಿಯುತ ಸ್ತ್ರೀ ರೂಪ ಪಡೆದುದನ್ನು ಕೇಳಿ ಆಶ್ಚರ್ಯವಾಯಿತು. ಹಿಂದೆ, ಕೇವಲ ಹಣದ ಮೋಹಕೆ ರಾಮ್ ನ ಸ್ನೇಹ ಮಾಡಿದುದು ಇಂದು ತನ್ನ ಜೀವ ಉಳಿಸಿತು ಎಂದುಕೊಂಡ. ತನ್ನ ತಪ್ಪಿಗಾಗಿ ರಾಮ್ ನಲ್ಲಿ ಕ್ಷಮೆಯಾಚಿಸಿ, ಒಮ್ಮೆ ಅವನ ಬಿಗಿದಪ್ಪಿಕೊಂಡ. ಮತ್ತೆ ದಿವ್ಯ ಅಗಾಧ ಶಕ್ತಿಯುಳ್ಳ ರೂಪ ಇಬ್ಬರ ಕಣ್ಣಿಗೂ ಸುಸ್ಪಷ್ಟ! ಅದು ಎಂತಹವರಲ್ಲಿಯೂ ಭಯ-ಭಕ್ತಿ ಮೂಡಿಸಬಲ್ಲುದು. ಆ ದೇವತೆ ಶರಣ್ ನ ಕುರಿತು ಹೀಗೆ ನುಡಿದಳು: "ಮಗೂ! ಆಗ ನಿನ್ನ ಗೆಳೆಯ ನಿನ್ನ ಉಳಿಸಿಕೊಂಡ; ಈಗ ನೀನು ನಿನ್ನ ಸ್ನೇಹ ಉಳಿಸಿಕೊಂಡೆ". ಮತ್ತೆ, ಶರಣ್ ಏನೋ ಕೇಳಬೇಕೆನಿಸುವಷ್ಟರಲ್ಲಿ ಅಪ್ರತ್ಯಕ್ಷ.