ಕಡಲತೀರದ ಭಾರ್ಗವ ಶಿವರಾಮ ಕಾರಂತರ ಮಾತುಗಳಲ್ಲಿ...
ಕಾರಂತರ ಬಗೆಗೆ ಏನೇ ಬರೆದರೂ ಅದು ಪುನರಾವರ್ತನೆ ಆಗಬಹುದು ಎನ್ನುವ ಮಟ್ಟಿಗೆ ಅವರ ಕುರಿತಾದ ಬರಹಗಳು ಬರೆಯಲ್ಪಟ್ಟಿವೆ. ಕನ್ನಡದ ಸೃಜನಶೀಲ ಮನಸ್ಸೊಂದು ಜಗತ್ತಿಗೆ ತೆರೆದುಕೊಂಡ ವಿಶಿಷ್ಟ ಅನುಭವ ಕಥನದ ದಾಖಲೆ ಕಾರಂತರ ಅಗಾಧ ಸಾಹಿತ್ಯ ಕೃತಿಗಳು. ಯಾವುದೇ ಸಂಗತಿಯ ಕುರಿತಾಗಲಿ ಅವರದೇ ಆದ ಸರಳ ಭಾಷೆಯಲ್ಲಿ ಆಯಾ ವರ್ಗದ ಓದುಗರ ಮನಮುಟ್ಟುವಂತೆ ಅವರ ಬರವಣಿಗೆಯ ಛಾಪು.
ಮಕ್ಕಳಿಗಾಗಿ ಅವರು ರಚಿಸಿದ 'ಬಾಲಪ್ರಪಂಚ', 'ವಿಜ್ಞಾನ ಪ್ರಪಂಚ'ದ ಮೌಲಿಕ ಲೇಖನಗಳಿಂದ ಹಿಡಿದು ಕನ್ನಡದ ಸರ್ವಕಾಲಿಕ ಶ್ರೇಷ್ಠ ಕೃತಿಯಾದ 'ಮೂಕಜ್ಜಿಯ ಕನಸು' ಕೃತಿಯ ತನಕ ಅವರ ಬರಹ ವಿಸ್ತಾರ ಸಾಗರ. ಅವರು ಬಳಸುವ ಭಾಷೆ ಸರಳವಾದರೂ ಅನುಕರಣೆಗೆ ಕಷ್ಟವಾದುದು ಎಂಬ ಮಾತನ್ನು ನಾವು ಮರೆಯುವಂತಿಲ್ಲ.
ರೈಗೆ ಕಾರಂತ ಪ್ರಶಸ್ತಿ : ಸಾಮಾಜಿಕ ತಾಣದಲ್ಲಿ ಭುಗಿಲೆದ್ದ ಆಕ್ರೋಶ
ಅವರ 'ಜಗದೋದ್ಧಾರ- ನಾ' ಕಾದಂಬರಿಯ ಮುನ್ನುಡಿಯಲ್ಲಿ ದೇವರ ಕುರಿತು ಅವರು ಹೇಳುವ ಮಾತುಗಳು ಅತ್ಯಮೂಲ್ಯವಾಗಿವೆ. "ನಮ್ಮ ದೇಶದಲ್ಲಿ ಮಹಾವಿಷ್ಣು ಅವತರಿಸುವುದನ್ನು ಬಿಟ್ಟಿದ್ದರೂ, ನಮಗೆ ತಿಳಿದಿಲ್ಲದ ಇನ್ನ್ಯಾವನೋ ಒಬ್ಬ ದೇವಾನು ತಿರುತಿರುಗಿ ಅವತರಿಸುತ್ತಲೇ ಬಂದಿದ್ದಾನೆ" ಎಂದಾಗ ದೇವರ ನಿಜರೂಪದ ಬಗೆಗೆ ಕಾರಂತರಿಗಿದ್ದ ನಿಕಟ ದೃಷ್ಟಿ ಅರಿವಾಗುವುದು.
ಮೂಕಜ್ಜಿಯ ಕನಸುಗಳಲ್ಲಿ...
ಮೂಕಜ್ಜಿಯ ಕನಸು ಕಾದಂಬರಿಯಲ್ಲೂ ಮೂಕಜ್ಜಿ ಈ ಕೆಳಗಿನ ಮಾತುಗಳನ್ನು ಹೇಳುತ್ತಾರೆ. "ಮುಂದೆ ಇದರ ಕಥೆಯೂ ಸ್ವಾರಸ್ಯವಿಲ್ಲ. ಜೀವ ಶಾಶ್ವತವೇ? ಮನುಷ್ಯ ಶಾಶ್ವತನೇ? ಹಾಗಿದ್ದ ಮೇಲೆ ಅವರು ಕಟ್ಟಿಕೊಂಡ ದೇವರು ಶಾಶ್ವತ ಅದಾನೆಯೇ? ಮೂಲದಲ್ಲಿ ದೇವರ ಪ್ರೇರಣೆ ಯಾವುದೇ ಇದ್ದರೂ, ಅದನ್ನು ಕಟ್ಟಿಕೊಂಡ ಜನರು ಬದಲಾಗಿಯೇ ಆಗುತ್ತಾರೆ." ಹಾಗೆಯೆ ಮುಂದುವರೆದು, "ಗುಡಿಯು ಶಾಶ್ವತವಲ್ಲ; ಅಲ್ಲಿನ ದೇವರು ಶಾಶ್ವತವಲ್ಲ. ಒಬ್ಬ ಶಾಶ್ವತವಾದ ದೇವರು ಇದ್ದನೆಂದರೂ, ಅವನು ಎಂಥವನೆಂದು ನಮ್ಮ ಎಟುಕಿಗೆ ಸಿಕ್ಕಿದ್ದಿಲ್ಲ. ನಾವು ನಮ್ಮ ನಮ್ಮ ಬುದ್ಧಿಗೆ ಸಮನಾಗಿ, ನೂರು, ಸಾವಿರಗಟ್ಟಲೆ ದೇವರನ್ನು ಮಾಡಿಕೊಂಡು ಇದೇ ನಿಜ ಅದೇ ನಿಜ ಎಂತ ಮರುಳು ಮಾತನಾಡಿದವರು" ಎಂದು ಹೇಳುತ್ತಾರೆ ಮೂಕಜ್ಜಿ.
ಮೈಮನಗಳ ಸುಳಿಯಲ್ಲಿ
ಕಾರಂತರ ಜೀವನದೃಷ್ಟಿಯನ್ನು ಅವರ ನಿರಂತರ ಪ್ರವಾಸ ಹೇಗೆ ಹಂತಹಂತವಾಗಿ ರೂಪಿಸಿತು ಎನ್ನುವುದನ್ನು ಅವರು 'ಬೆಟ್ಟದ ಜೀವ' ಕಾದಂಬರಿಯ ಮೊದಲ ಪುಟದಲ್ಲಿ ಹೇಳಿಕೊಂಡಿದ್ದಾರೆ. 'ಮೈಮನಗಳ ಸುಳಿಯಲ್ಲಿ' ಕಾದಂಬರಿಯಲ್ಲಿ ಸ್ತ್ರೀಲೋಕವನ್ನು ಆಳವಾದ ಒಳನೋಟದಲ್ಲಿ ತೆರೆದಿಟ್ಟಿದ್ದಾರೆ. ಎಪ್ಪತ್ತರ ದಶಕದಲ್ಲಿ ಬರೆದ ಈ ಬರಹದ ಕುರಿತು ಕಾರಂತರು ಹೀಗೆ ಹೇಳಿದ್ದಾರೆ- "ವಿಷಯ ದೇಹಚರ್ಯೆಗೆ ಸಂಬಂಧಿಸಿದಾಗ ಓದುಗರ ಕುತೂಹಲ ಸ್ವಾಭಾವಿಕವಾಗಿಯೇ ಕೆರಳುತ್ತದೆ. ನಿಸರ್ಗದತ್ತ ಪ್ರೇರಣೆಯನ್ನು ಸಾವಿರದಲ್ಲಿ ಒಬ್ಬ ಕಳಚಿಕೊಂಡು ಸುಖಿಯಾಗಿರಬಲ್ಲನೋ ಏನೋ! ಆತ ಸುಖಿಯಾದನು- ಎಂದು ನಂಗೆ ಇಂದು ಅನಿಸುತ್ತಲಿಲ್ಲ. ಆ ಮಟ್ಟಿಗೆ ಮನುಷ್ಯನೂ ಒಬ್ಬ ಪ್ರಾಣಿಯೇ. ಅವನಲ್ಲಿರುವ ಹೆಣ್ಣು ಗಂಡು ಪ್ರವೃತ್ತಿಗಳು ಅವನಿಗಾಗಿಲ್ಲ. ಕುಲ ಪರಂಪರೆಯನ್ನು ಮುಂದುವರೆಸುವ ನಿಸರ್ಗದ ಇಚ್ಛೆಗೆ ಅದು ಸೇರಿದ್ದು. ಅದರ ಒತ್ತಡವನ್ನು ಅಳಿಯುವುದು ಕಠಿಣ. ಅದನ್ನು ಹೀಯಾಳಿಸುವವರಿಗೂ ನಿಲುಕದ ಶಕ್ತಿ ಅದರದು" ಎಂದು ಹೇಳಿದ್ದಾರೆ.
ಮೂಕಜ್ಜಿಯ ಮಾತುಗಳ ಶಕ್ತಿಯೇ ಬೇರೆ
ಇನ್ನು ಅವರು ಸೃಷ್ಟಿಸಿದ ಮೂಕಜ್ಜಿಯ ಮಾತುಗಳ ಶಕ್ತಿಯೇ ಬೇರೆ. ಒಂದು ಕಡೆ ಮೂಕಜ್ಜಿ ಹೀಗೆ ಹೇಳುತ್ತಾರೆ "ಲೋಕದ ಕಣ್ಣಿಗೆ ಒಪ್ಪದ್ದು ನಮ್ಮ ಕಣ್ಣಿಗೆ ಒಪ್ಪಲಿಲ್ಲ ಎಂದ ಕ್ಷಣಕ್ಕೆ, ಒಬ್ಬನಿಗೆ ತಲೆ ಸರಿಯಿಲ್ಲ ಅನ್ನುತ್ತಾರೆ. ಏನು ಬಾಧಕ ಅದರಿಂದ? ತಲೆ ಸರಿಯಿದ್ದದ್ದು ಯಾವುದು, ಇಲ್ಲದ್ದು ಯಾವುದು- ಎಂತ ಯಾರು ಅಳೆಯುವವರು?"
ಯುವಬರಹಗಾರರಿಗೆ ಪ್ರೇರಣೆ
ನಿರಂತರ ಬರವಣಿಗೆಯ ಕುರಿತು ಕಾರಂತರು "ವರ್ಷಕ್ಕೊಮ್ಮೆ ಕಾದಂಬರಿಯನ್ನು ಬರೆಯುವ ಹವ್ಯಾಸ ಇರಿಸಿಕೊಂಡಿದ್ದರೂ ಕಳೆದ ವರ್ಷ ಬೇರೆ ಬರವಣಿಗೆಗಳಿಗೆ ಸಮಯ ಮೀಸಲಾಯಿತು. ಕಾದಂಬರಿ ಬರೆಯಲೇಬೇಕೆಂಬ ವಿಧಿಯಿಲ್ಲವಷ್ಟೆ. ಮನಸ್ಸು ಅದಕ್ಕೆ ಬರಬೇಕು; ಅದಕ್ಕಿಂತ ಹೆಚ್ಚಾಗಿ ಬರೆಯುವ ವಿಷಯ ಹೊಳೆಯಬೇಕು; ಅದು ಬಲಿತು ಬಲವಂತವಾಗಬೇಕು; ಅನಂತರವೇ ಲೇಖನಿಯನ್ನು ಹಿಡಿಯಬೇಕು" ಎಂದು ಹೇಳಿದ್ದಾರೆ. ಈ ಮಾತುಗಳು ಯುವ ಸಾಹಿತ್ಯಾಸಕ್ತರಿಗೆ ಪ್ರೇರಣೆ ನೀಡಬಲ್ಲ ಕೈದೀವಿಗೆಯಾಗಿದೆ.
'ಮರಳಿ ಮಣ್ಣಿಗೆ' ಮರೆಯೋಕೆ ಸಾಧ್ಯವೇ?
ಇದೆಲ್ಲವನ್ನೂ ಮೀರಿ 'ಮರಳಿ ಮಣ್ಣಿಗೆ' ಕಾದಂಬರಿಯಲ್ಲಿ ಪಾರೋತಿ- ಸರಸೋತಿಯರ ದಿಟ್ಟತನವನ್ನು ಹೇಗೆ ಮರೆಯಲು ಸಾಧ್ಯ? ಅವರ ನೂರಾಹದಿನೈದನೆಯ ಜನ್ಮ ದಿನವಾದ ಇಂದು ಅವರ ಮಾತುಗಳ ಈ ಮಾಲಿಕೆ.