ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಟೆ ಬಾರಿಸುತಿದೆ ಕೇಳಿದಿರಾ

By Super
|
Google Oneindia Kannada News

ಸಾವಿನ
ಆಹಾ ಕುಸಿದವು ಗೋಪುರಗಳು ಹಾಹಾಕಾರದ ಜತೆಗೆ
ಹಾಹಾ ಧರ್ಮಾಂಧತೆಗೆ ನಾಚಿಕೆಗೇಡಿನ ಸೇಡಿನ ಕತೆಗೆ

ಅದೊ ಅದೊ ಕುಸಿಯುತ್ತಿದೆ ಕಿಸಿಯುತ್ತಿದೆ ನೋಡ
ಮಾನವ್ಯದ ಭವಿತವ್ಯದ ಆಶಾಗೋಪುರ ಕೂಡ

ಬೇಡಾ ಬೇಡಾ ರಕ್ಕಸ ನಮ್ಮೀ ನಾಡಿಗೆ ಬರಬೇಡ
ಬೆಕ್ಕಸ ಬೆರಗಾಗಿದೆ ವ್ಯಾಕುಲ ಮನುಕುಲ ಸಂಕುಲ ದಿಙ್ಮೂಢ
ನೀನೋ ಧರ್ಮಕೆ ತಲೆಯನು ಮಾರಿದ ಮೂಢ
ಆದರೆ ಏನಿದು ಏನಿದು ವಿಧಿಯ ನಿಗೂಢ

ಮಾಯಕ ಮಾಯಕ ಕ್ಷಣದಲಿ ಕಣ್‌ಮಾಯಕ
ಮಾನವ ಸಂತತಿ ಅಯ್ಯೋ ಅಸಹಾಯಕ


-------------2-----------


ಸಾವಿನ

ಅಬ್ಬರಿಸಿದ ಗಬ್ಬರಿಸಿದ ಸುಡುಗಾಡಿನ ದೈತ್ಯ
ನರರನು ನರನೇ ನುರಿನುರಿ ನುಂಗುವ ಸಂಹಾರದ ತಾಂಡವ ನೃತ್ಯ
ಮಾಡಿದವನಿಗೂ ಗುರಿಗೊತ್ತಿರದ ನೆತ್ತಿಗೇರಿದ ಪೈತ್ಯ
ಹತ್ಯಾಕಾಂಡದ ಈ ಪೈಶಾಚಿಕ ಕೃತ್ಯ
ಕಂದರ ಕಂದರ ಎಲುಬಿನ ಹಂದರ
ಹರಿಯಿತು ನೆತ್ತರ ನೆಲಮುಗಿಲೆತ್ತರ

ಬರ್ಬರತೆಯ ಸಾಮ್ರಾಜ್ಯದ ಸಿಂಹಾಸನದಲ್ಲಿ
ಕೊಲ್ಲೀಕೊಲ್ಲೀ ಎನ್ನುವ ಕೊಳ್ಳೀದೆವ್ವದ ಗಲ್ಲೀಗಲ್ಲಿ
ಲೊಚಗುಟ್ಟಿತು ಯಮಲೋಕದ ಹಲ್ಲಿ
ಎಲ್ಲೀ ಎಲ್ಲೀ ಮನೆಮನೆಯಂಗಳದಲ್ಲಿ
?

--------------3---------------


ಸಾವಿನ

ಮುಗಿಲೆ ಮುಗಿಬಿದ್ದು ಕುಸಿದಂತೆ ನೆಲದ ಬಿಲದೊಳಗೆ
ಒಂದನೊಂದವಚುತ್ತ ಕವಚುತ್ತ ಮಾಳಿಗೆಯ ಮಳಿಗೆಮಳಿಗೆ

ಭುಗಿಲು ಭುಗಿಲೆಂದು ಹೊಗೆಯೆದ್ದು ಧಗೆಯೆದ್ದು ಜೀವಂತ ದಹನ
ಬೆಳಗೆದ್ದು ಕಂಡದ್ದು ಕನಸಿಗಿಂತಲೂ ಗಹನ

ಸುಡುಗಾಡ ದೆವ್ವಗಳು ಹಾರಿಬಂದವು ಏರಿ ಅಮೇರಿಕದ ವಿಮಾನ
ಮಾರಿದವು ಮಾರಿಗಳು ಮನುಕುಲದ ಮಾನ

ಮಾನವ್ಯದಿತಿಹಾಸದೆದೆಯಲ್ಲಿ ಕಪ್ಪು ಅಳಿಸಲಾಗದ ಚುಕ್ಕೆ
ತಲೆಯಲ್ಲಿ ಮಣಭಾರ ಪಾಪ ತುಂಬಿದ ಇಳಿಸಲಾಗದ ಕುಕ್ಕೆ

ಪಾಶವೀಕೃತ್ಯ ಎನ್ನದಿರಿ ಇದನು ಅವಮಾನ ಪಶುಗಳಿಗೆ
ಸಾವು ಬೇಕೇ ಬನ್ನಿ ತೆರೆದಿದೆ ಇಲ್ಲಿ ಸಾವಿನ ಮಳಿಗೆ
?

-----------------4--------------------


ಸಾವಿನ ?

ಧರ್ಮಕಾಗಿ ಕೊಲ್ಲುವವರು
ಕೊಲ್ಲುವುದೆ ಧರ್ಮವೆಂದು ಸೊಲ್ಲುವವರು
ಧರ್ಮವನ್ನೆ ಕೊಲ್ಲುವವರು
ತಾವು ಮಾಡಿದ್ದನ್ನೆ ತಾವೆ ಮುಂದೆ ಮೆಲ್ಲುವವರು

ಅಲ್ಲಿಗೂ ಇಲ್ಲಿಗೂ ಎಲ್ಲಿಗೂ ಸಲ್ಲದವರು
ಏನೂ ಅಲ್ಲದವರು ಮಾನವತೆ ಇಲ್ಲದವರು

ಕಿವುಡರ ಮಂದೆಗೆ ಧರ್ಮದ ಪುಂಗಿ
ಧರ್ಮದ ಹೆಸರಲಿ ಅಮಲಿನ ಭಂಗಿ

ಯಮನ ವಾಹನಕು ಕಣ್ಣುತುಂಬ ಕಣ್ಣೀರು
ನೆಲವೆಣ್ಣಿಗೋ ಮತ್ತೆ ಮಿಂದು ಐನೀರು
?

----------------5-------------------


ಸಾವಿನ

ಅಯ್ಯಾ ತಲೆ ತಿರುಕ ಮತಮುರುಕ ತುರುಕ
ಅಯ್ಯೋ ಸುಮ್ಮನೇ ಸತ್ತೆಯಲ್ಲೋ ಎಂದು ನನಗೆ ಮರುಕ
ಕೊಂದೆಯಲ್ಲೋ ಅಮಾಯಕರನ್ನು
ಮಾನವ್ಯಕೆ ತಿರುಗಿಸಿ ಬೆನ್ನು

ಹೇಳೀಗ - ಎರಗುತಿದ್ದೆಯಾ ನೀನು ಈ ಸೌಧಕ್ಕೆ
ಎಳಸುತ್ತಿದ್ದೆಯಾ ಇಂಥ ನರಮೇಧಕ್ಕೆ
ಇದ್ದಿದ್ದಿರೆ ಆ ಗೋಪುರದಲಿ ನಿನ್ನಕ್ಕ ತಂಗಿ ಅಣ್ಣ ತಮ್ಮ
ಗೆಳೆಯನಥವ ಬಂಧುಬಳಗ ಅಪ್ಪ ಅಮ್ಮ
ಅಥವಾ ನೀ ಮೆಚ್ಚಿದ ಹುಡುಗಿ
ಬುರುಕೀಯಾಳಗೆ ಅರಳಿದ ಬೆಡಗಿ

ಗಂಟೆ ಬಾರಿಸಿಬಿಟ್ಟೆ ತಮ್ಮಾ
ಮನುಕುಲದ ಸಾವಿನ ಗಂಟೆ ಬಾರಿಸಿಬಿಟ್ಟೆ !

English summary
A poem on World trade centre tragedy by Bannanje Govindacharya
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X