ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧುನಿಕ ವಚನ ಪರಂಪರೆಗೆ ಕನ್ನಡದಲ್ಲಿ ಪರಂಪರೆಯೇ ಇದೆ. ವಿಮಲಾ ಚನ್ನಬಸಪ್ಪ ಕನ್ನಡದ ಆಧುನಿಕ ವಚನಕಾರರಲ್ಲಿ ಎದ್ದುಕಾಣುವ ಹೆಸರು. ಸುಲಿದ ಬಾಳೆಯ ಹಣ್ಣಿನಂದದ ತಿಳಿಗನ್ನಡ, ಕಗ್ಗಂಟಲ್ಲದ ವಿಚಾರ- ವಿಮಲಾ ಅವರ ವಚನಗಳನ್ನು ಆಕರ್ಷಕವಾಗಿಸಿದೆ. ಓದುಗರಲ್ಲಿ ವಿಚಾರದ ಕಿಡಿಯನ್ನ , ಅಧ್ಯಾತ್ಮದ ಕುಡಿಯನ್ನ ಅರಳಿಸಬಹುದೆನ್ನುವ ನಂಬುಗೆಯಿಂದ ವಿಮಲಾ ಅವರ ಆಯ್ದ ವಚನಗಳನ್ನು ದಿನಕ್ಕೆ ನಾಲ್ಕರಂತೆ ವಾರಕಾಲ ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಒಪ್ಪಿಸಿಕೊಳ್ಳಿ.

By Staff
|
Google Oneindia Kannada News

ವಿಮಲ ವಚನಗಳು

  • ವಿಮಲಾ ಚನ್ನಬಸಪ್ಪ (ಅಲೆಕ್ಸಾಂಡ್ರಿಯಾ, ವರ್ಜೀನಿಯಾ)
9
ಕಾಲಿಲ್ಲದ ಹೆಳವನ ಕಂಡು
ಕಾಲು ನೋವನು ಮರೆತು,
ಕಣ್ಣಿಲ್ಲದ ಕುರುಡನ ಕಂಡು
ಕಣ್ಣೀರ ಮರೆತೆನಯ್ಯ!
ನೊಂದವರ ನೋವನು ಕಂಡು
ಹಸಿವು ತೃಷೆ ಮರೆತೆನಯ್ಯ !
ಸಾವಿನೆದುರಲಿ ನಿಂತು ನೋವನ್ನೆ ಮರೆತೆನಯ್ಯ
ಎನ್ನೊಡೆಯ ವಿಮಲೇಶ ಚನ್ನಬಸವೇಶ !

10
ಕುರುಡನ ಮುಂದೆ ಕಣ್ಣು ನೋವೆಂದಂತೆ
ಹೆಳವನ ಮುಂದೆ, ಎಡವಿದೆನು ಎಂದಂತೆ
ಹಸಿದವನ ಮುಂದೆ ತುಪ್ಪವಿಲ್ಲೆಂದಂತೆ
ಸಾವೆ ಬಂದಪ್ಪಿರಲು, ಜೀವನವೆ ನೋವಾದರೇನಂತೆ ?
ವಿಮಲೇಶ ಶ್ರೀ ಚನ್ನಬಸವ ಪ್ರಭುವೇ
ನನಗಿರಲಿ ದಿನನಿತ್ಯ ನಿನ್ನ ಚಿಂತೆ

11
ಲೇಸೆ ಕೇಳಿಸಲಿ ಕಿವಿಗೆ, ನಾಲಗೆಗೆ ಲೇಸೆ ನುಡಿದುಬರಲಿ
ಲೇಸೆ ಕಾಣಿಸಲಿ, ಜಗದೊಳಗೆ ಲೇಸೆ ಹಬ್ಬುತಿರಲಿ
ಲೇಸೆ ಕೈಗಳಿಂದಾಗುತಿರಲಿ, ತಾ ಬರಲಿ ಲೇಸೆ ನಡೆದು
ಲೇಸನುಂಡು ಲೇಸು ಸರಿ, ಇಲ್ಲಿರಲಿ ಲೇಸೆ ಮೈಯ ಪಡೆದು
ಲೇಸು ಜೀವನವಾಗಿ, ಲೇಸು ಚಿನ್ಮಯವಾಗಿ
ಲೇಸು ಭಕ್ತಿಯ ಶರಣು ಚನ್ನಬಸವನಲಿ

12
ಬೆಂಕಿಯಲಿ ಉಷ್ಣವನು ಶಂಖದಲಿ ನಾದವನು
ತುಂಬಿ ಬೈತಿಟ್ಟವರು ಯಾರು?
ಮೋಡದಲಿ ಮಳೆ ಗುಡುಗು ಸಿಡಿಲು ವಿದ್ಯುತ್ತನ್ನು
ಗಡನಾಗಿ ಸಂಚರಿಸುತಿರುವರಾರು ?
ಕಬ್ಬಿನಲಿ ಸಿಹಿಯನ್ನು ನಿಂಬೆಯಲಿ ಹುಳಿಯನ್ನು
ತುಂಬುವರು ನಿತ್ಯವೂ ಯಾರು?
ಮರುಗ ಮಲ್ಲಿಗೆ ಬಕುಲ ಸುರಗಿ ಕೇದಗೆಯಲ್ಲಿ
ಪರಿಪರಿಯ ಪರಿಮಳವ ಹಂಬಿಸುವರಾರು ?
ಕೋಗಿಲೆಗೆ ಗಾನವನು ನವಿಲಿಂಗೆ ನಾಟ್ಯವನು
ದಿನದಿನವೂ ಕಲಿಸುವರು ಯಾರು?
ಮಾತೆಯಲಿ ಮಮತೆಯನು ಪ್ರೀತಿಯನು ನಲ್ಲರಿಗೆ
ಕಾಣದೋಲೈಸುವರು ಯಾರು?
ದೇವ ನಿನ್ನದು ಶಕ್ತಿ ನಿನ್ನದೆಲ್ಲವು ಯುಕ್ತಿ
ನೀನೆ ಕೊಟ್ಟರೆ ಭಕ್ತಿ ಎನಗಲ್ಲವೇ ?
ವಿಮಲೇಶ ಶ್ರೀ ಚನ್ನಬಸವೇಶ ಕರುಣಿಸೈ
ನಿನ್ನಿಂದಲೇ ಮುಕ್ತಿ , ನಾನೆಷ್ಟರವಳು

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X