ನುಡಿ ನಮನ: ಸರಳ ಕವಿ ವೀರಭದ್ರಪ್ಪ ಚನ್ನಪ್ಪ ಐರಸಂಗ
ಸರಳ ಜೀವಿ, ಕವಿ ವೀರಭದ್ರಪ್ಪ ಚನ್ನಪ್ಪ ಐರಸಂಗ ಧಾರವಾಡದ ಶ್ರೀರಾಮನಗರದ ನಿವಾಸಿಯಾಗಿದ್ದು, ಸೈಕಲ್ ಹತ್ತಿ ಸಾಹಿತ್ಯ ಸೇವೆಗೆ ಹೊರಡುತ್ತಿದ್ದರು ಇಂದು(ನ.13,2020) ಇಹಲೋಕ ತ್ಯಜಿಸಿದ್ದಾರೆ. ಮುಗ್ಧರಂತೆ ಕಾಣುವ ಇವರೊಟ್ಟಿಗೆ ಮಾತನಾಡುತ್ತಿದ್ದರೆ ಧಾರವಾಡ ನೆಲದ ಕವಿ, ಕಾವ್ಯ, ಜ್ಞಾನಶಕ್ತಿಯ ಅರಿವಾಗುತ್ತದೆ. 50ಕ್ಕೂ ಹೆಚ್ಚು ಕವನ ಸಂಕಲನಗಳನ್ನು ರಚಿಸಿದ್ದ ಅವರ ಸಾಹಿತ್ಯ ಕೊಡುಗೆ ನೋಡಿ ಧಾರವಾಡದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತ್ತು. ಆದರೆ, ತಾವು ರಚಿಸಿದ ಶಿಶು ಗೀತೆಗಳು ಶಾಲಾಮಕ್ಕಳ ಪಠ್ಯಪುಸ್ತಕವಾಗಬೇಕೆಂಬುದು ಇವರ ಮಹದಾಸೆಯಾಗಿತ್ತು.
ತಮ್ಮ 17ನೇ ವಯಸ್ಸಿನಲ್ಲಿ ಮೊದಲ ಕವನ ಪ್ರಕಟಿಸಿದ ಐರಸಂಗ ಅವರು ಆಶುಕವಿ. ಆಡುಭಾಷೆಯಲ್ಲಿ ಇದುವರೆಗೂ 2000ಕ್ಕೂ ಅಧಿಕ ಕವನಗಳನ್ನು ರಚಿಸಿದ್ದಾರೆ. ಆಧ್ಯಾತ್ಮ, ಪರಿಸರ, ಪ್ರಣಯ, ವಿರಹ, ಭಕ್ತಿ, ದೇಶಪ್ರೇಮ, ಶಿಶುಸಾಹಿತ್ಯ, ಹಾಸ್ಯ, ಸೌಂದರ್ಯ, ಸುಪ್ರಭಾತ ಹೀಗೆ ಎಲ್ಲಾ ಬಗೆಯ ವಿಷಯಗಳಲ್ಲೂ ಕವನಗಳನ್ನು ರಚಿಸಿದ್ದಾರೆ. ಬಹುಶಃ ಹೀಗೆ ಎಲ್ಲಾ ಪ್ರಕಾರಗಳಲ್ಲಿ ಕೈ ಆಡಿಸಿದವರು ತುಂಬಾ ವಿರಳ ಎನ್ನಬಹುದು. ಲಯಬದ್ಧವಾಗಿ ಎಲ್ಲರಿಗೂ ಅರ್ಥವಾಗುವ ಹಾಗೆ ಬರೆಯುವುದು ಐರಸಂಗರ ಶೈಲಿ.
ಧಾರವಾಡ: ಸೈಕಲ್ ಕವಿ ಎಂದೇ ಖ್ಯಾತರಾಗಿದ್ದ ಐರಸಂಗ ನಿಧನ
ಆರಂಭದ ದಿನಗಳಲ್ಲಿ ತಾನು ಬರೆದಿದ್ದನ್ನು ಹಿಂಜರಿಕೆಯಿಂದ ಇತರರಿಗೆ ತೋರಿಸದೆ ತನ್ನಲ್ಲಿ ಆಡಗಿಸಿಟ್ಟುಕೊಳ್ಳುತ್ತಿದ್ದರಂತೆ. ಆದರೆ ಹೂವಿನ ಪರಿಮಳವನ್ನು ಎಷ್ಟು ದಿನ ಅಂತಾ ಬಚ್ಚಿಡಲು ಸಾಧ್ಯ. ಒಂದಲ್ಲಾ ಒಂದು ದಿನ ಹೊರಹೊಮ್ಮಲೇ ಬೇಕು. ಅದೇ ರೀತಿ ಇವರ ಪ್ರತಿಭೆಯನ್ನು ಧಾರವಾಡ ಆಕಾಶವಾಣಿ ಕೇಂದ್ರ ಮೊದಲಿಗೆ ಗುರುತಿಸಿತು. ಅನುರಾಧಾ ಧಾರೇಶ್ವರ್, ಪರಮೇಶ್ವರ ಹೆಗಡೆ, ವಿಶ್ವನಾಥ ನಾಕೋಡ, ಕೃಷ್ಣ ಹಾನಗಲ್ ಮುಂತಾದ ಪ್ರಸಿದ್ಧ ಗಾಯಕ, ಗಾಯಕಿಯರು ಇವರ ಕವನಗಳನ್ನು ಇಷ್ಟಪಟ್ಟು ಹಾಡಿದ್ದಾರೆ.
ತಮ್ಮ ಮೊದಲ ಕವನ ಸಂಕಲನವನ್ನು ಹೊರತರಲು ಸಹಾಯ ಮಾಡಿದ ಹಾಗೂ ಸದಾ ತಮಗೆ ಪ್ರೋತ್ಸಾಹ ನೀಡುವ ಆರ್. ಜಿ. ಚಿಕ್ಕಲವಾಡ ಅವರನ್ನು ಕವಿ ಐರಸಂಗರವರು ವಿಶೇಷವಾಗಿ ನೆನಪಿಸಿಕೊಳ್ಳುತ್ತಾರೆ.
ಕರ್ನಾಟಕ ವಿಶ್ವವಿದ್ಯಾಲಯದಿಂದ ಒಬ್ಬ ವಿದ್ಯಾರ್ಥಿನಿ ಇವರ ಕವನಗಳ ಮೇಲೆ ಪ್ರಬಂಧ ಮಂಡಿಸಿ ಎಂ.ಫಿಲ್ ಪದವಿ ಗಳಿಸಿದ್ದಾರೆ. ತಮ್ಮ ಕೃತಿಗಳನ್ನು ಮಾರುತಿ ಪ್ರಕಾಶನ ಎಂಬ ಹೆಸರಿನಿಂದ ತಾವೇ ಮುದ್ರಿಸಿ ಹಾಡುಗಾರರಿಗೆ ಹಂಚುತ್ತಿದ್ದಾರೆ. ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು,ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸೈಕಲ್ ಮೇಲೆ ಬಂದಿದ್ದರು. ಸೈಕಲ್ ಕವಿ ಎಂದೇ ಸ್ಥಳೀಯರಲ್ಲಿ ಪರಿಚಯ.
ಸುಧಾ ಸರಿತಾ, ಮಕ್ಕಳ ಹಾಡು, ನವರಸ, ಉದಯಗೀತಾ, ಗುಬ್ಬಿಯ ಹಾಡು, ಭಾವ ಭಾಸ್ಕರ, ಬರೆದವ ನಾನಲ್ಲ, ಆಶಾಕಿರಣ, ಪಯಣ, ಮೀರಾಬಾಯಿ ಕಥೆ, ನಲ್ಲೆಯೂರಿಗೆ, ಹನ್ನೊಂದನೆಯ ಅವತಾರ ಮುಂತಾದ 30ಕ್ಕೂ ಹೆಚ್ಚು ಕವನ ಸಂಕಲನಗಳ ಗಂಟನ್ನು ಬಿಚ್ಚಿ ತೋರಿಸುತ್ತಾರೆ.
ಓದುಗರಿಗೆ ಆಯ್ಕೆ ಮಾಡಲು ಕಷ್ಟವಾಗದಿರಲೆಂದು ತಾವು ಬರೆದ ಎಲ್ಲಾ ಕವನ ಪ್ರಕಾರಗಳ ಪರಿವಿಡಿಯನ್ನು ರಚಿಸಿ ಉಚಿತವಾಗಿ ಎಲ್ಲರಿಗೂ ನೀಡುತ್ತಾ ಬಂದಿದ್ದಾರೆ. ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯತೆ ದೊರೆಯದಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ.
''ಸರಳ ಮಾತು; ನೇರ ಧಾಟಿ; ಹೃದಯ ಮುಟ್ಟುವ ಭಾಷೆ ಜೀವನದ ಪ್ರಾಮಾಣಿಕ ಗ್ರಹಿಕೆ.. ಧಾರವಾಡದ ದೇಸಿ ಸೊಗಡು.. ಅದಕ್ಕೆ ತಕ್ಕ ಹಾಗೆ ಮೂಡಿದ ನೈಜ ಹಾಡು.. ಇಂಥವು ವಿ.ಸಿ. ಐರಸಂಗರ ಕಾವ್ಯೋದ್ಯೋಗದ ಅಕ್ಷಯ ಥೈಲಿಯೊಳಗೆ ಅವೆಷ್ಟೋ!'' ಈ ಪ್ರಶಂಸೆಯ ಮಾತುಗಳು ಕೇಳಿ ಬಂದದ್ದು ಹಿರಿಯ ಸಾಹಿತಿ ಎನ್ಕೆ ಅವರಿಂದ.
''ಐರಸಂಗರಂಥ ಪ್ರಾಮಾಣಿಕ ಕವಿ ಮೂಲೆಗುಂಪಾಗಿ ಒಳಒಳಗೇ ನರಳೋ ಪರಿಸ್ಥಿತಿ ಯಾವತ್ತೂ ಒಳ್ಳೆಯದಲ್ಲ ಇನ್ನಾದರೂ ವಿಮರ್ಶಕರು ಈ ಕವಿಯ ಕಾವ್ಯ ಗಮನಿಸುವಂತಾಗಲಿ'' ಎಂದು ದೊಡ್ಡರಂಗೇಗೌಡರು ತಾವು ಬರೆದ ಮುನ್ನುಡಿಯಲ್ಲಿ ಹಂಬಲಿಸಿದ್ದಾರೆ.
''ನಾನು ಬರೆದ ಹಾಡು ಪಠ್ಯಪುಸ್ತಕದಲ್ಲಿ ಬಂದು ಮಕ್ಕಳು ಹಾಡಿ ನಲಿಯುವಂತಾಗಬೇಕು'' ಎಂಬುದು ಭಾರತೀಯ ರೈಲ್ವೇಯ ನಿವೃತ್ತ ಗುಮಾಸ್ತರಾದ ಐರಸಂಗರ ಆಸೆ. ಜೀವನೋಪಾಯಕ್ಕೆ ತೊಂದರೆಯಿಲ್ಲ. ಪಿಂಚಣಿ ಹಣ ಸಾಕಾಗುತ್ತದೆ. ಇಂದಲ್ಲಾ ನಾಳೆ ನನ್ನ ಕವನಗಳು ಜನ ಮನವನ್ನು ತಲುಪೇ ತಲುಪುತ್ತದೆ ಎಂಬ ಆಶಾಭಾವನೆಯಲ್ಲಿರುವ ಇಳಿವಯಸ್ಸಿನ ತರುಣ ಐರಸಂಗ ಅವರು ಎದುರಿಗುವವರನ್ನು ನೋಡಿ ನಗೆ ಚೆಲ್ಲುತ್ತಿದ್ದರು.