ಲೋಕಾಯುಕ್ತ ಹುದ್ದೆಗೇರಲಿರುವ ನ್ಯಾ.ವಿಶ್ವನಾಥ್ ಶೆಟ್ಟಿ ವ್ಯಕ್ತಿಚಿತ್ರ
ಲೋಕಾಯುಕ್ತ ಹುದ್ದೆಗೇರಲಿರುವ ಉಡುಪಿಯ ನ್ಯಾ.ವಿಶ್ವನಾಥ್ ಶೆಟ್ಟಿ ವ್ಯಕ್ತಿಚಿತ್ರ ಅವರ ಸಂಕ್ಷಿಪ್ತ ವ್ಯಕ್ತಿಚಿತ್ರ.
ಉಡುಪಿ, ಜನವರಿ 11: ರಾಜ್ಯದ ನೂತನ ಲೋಕಾಯುಕ್ತರಾಗಿ ಹುದ್ದೆಗೇರಲಿರುವ ನ್ಯಾ.ವಿಶ್ವನಾಥ್ ಶೆಟ್ಟಿ ಉಡುಪಿ ಜಿಲ್ಲೆಯವರು ಅನ್ನೋದು ವಿಶೇಷ. ಈ ಮೂಲಕ ಲೋಕಾಯುಕ್ತ ಗಾದಿಗೇರಲಿರುವ ಉಡುಪಿಯ ಎರಡನೇ ನ್ಯಾಯಮೂರ್ತಿ ಎನಿಸಿಕೊಳ್ಳಲಿದ್ದಾರೆ.
ಈ ಹಿಂದೆ ನ್ಯಾ. ಸಂತೋಷ್ ಹೆಗ್ಡೆ ರಾಜ್ಯದ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಇವರು ಉಡುಪಿ ಜಿಲ್ಲೆಯ ನಿಟ್ಟೆಯವರು. ನ್ಯಾ.ವಿಶ್ವನಾಥ್ ಶೆಟ್ಟಿ ಅವರು 1944 ರಲ್ಲಿ ಉಪ್ಪೂರಿನ ಕೊಳಲಗಿರಿಯಲ್ಲಿ ಜನಿಸಿದ್ದಾರೆ. ಇವರ ತಂದೆ ಕೃಷ್ಣಯ್ಯ ಶೆಟ್ಟಿ. ತಾಯಿ ಕಲ್ಯಾಣಿ ಶೆಟ್ಟಿ. ತಂದೆ-ತಾಯಿ ಮೂಡಬಿದ್ರೆಯ ಪೆರೋಡಿಯ ಪುತ್ತಿಗೆಗುತ್ತಿನವರು.[ಕರ್ನಾಟಕ ಲೋಕಾಯುಕ್ತ ಹುದ್ದೆಗೆ ನ್ಯಾ ವಿಶ್ವನಾಥ್ ಶೆಟ್ಟಿ ಹೆಸರು ಅಂತಿಮ]
ಇವರ ಇಬ್ಬರು ಅಣ್ಣಂದಿರಾದ ಶಿವಾಜಿ ಶೆಟ್ಟಿ ಹಾಗೂ ವಿಠಲ್ ಶೆಟ್ಟಿ ಸಹ ವಕೀಲರು. ಇವರ ಮಾವ ಚಂದ್ರಶೇಖರ್ ಸಹ ಜಿಲ್ಲಾ ನ್ಯಾಯಾಧೀಶರಾಗಿ, ಉಚ್ಛ ನ್ಯಾಯಾಲಯದ ರಿಜಿಸ್ಟ್ರಾರ್. ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಇವರ ಬಾವ.
ಕೊಳಲಗಿರಿ, ಹಾವಂಜೆ ಇರ್ಮಾಡಿ ಶಾಲೆ, ಉಡುಪಿ ಬೋರ್ಡ್ ಹೈಸ್ಕೂಲ್, ಎಂಜಿಎಂ ಕಾಲೇಜಿನಲ್ಲಿ ಪಿಯುಸಿ, ಪದವಿ ವಿದ್ಯಾಭ್ಯಾಸ ಮಾಡಿ ಉಡುಪಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.
ಕಾನೂನು ಅಧ್ಯಯನ ಮಾಡುತ್ತಿರುವಾಗಲೇ ಉಡುಪಿ ಬೋರ್ಡ್ ಹೈಸ್ಕೂಲ್ ನಲ್ಲಿ ಸಮಾಜಶಾಸ್ತ್ರ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗಲೇ ವಿಶ್ವನಾಥ ಶೆಟ್ಟಿಯವರು ಶಾಲಾ ನಾಯಕರಾಗಿ, ಎನ್ ಸಿಸಿ ಕೆಡೆಟ್ ಆಗಿ ಹಾಗೂ ವಿದ್ಯಾರ್ಥಿ ಸಂಘದಲ್ಲಿ ಗುರುತಿಸಿಕೊಂಡಿದ್ದರು.
ಉಡುಪಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ನಂತರ ಬೆಂಗಳೂರಿನ ಹೈಕೋರ್ಟ್ ನಲ್ಲಿ ವಕೀಲ ವೃತ್ತಿ ಆರಂಭಿಸಿದರು. 1965 ರಲ್ಲಿ ಕಿರಿಯ ವಕೀಲರಾಗಿ ವೃತ್ತಿ ಆರಂಭಿಸಿದ ಪೆರೋಡಿ ವಿಶ್ವನಾಥ ಶೆಟ್ಟಿ, 1971 ರಿಂದ ಸ್ವಂತವಾಗಿ ತರಬೇತಿ ಆರಂಭಿಸಿದರು.
ನಂತರ ಕಿರಿಯ ವಕೀಲರನ್ನು ಕಟ್ಟಿಕೊಂಡು ದೊಡ್ಡ ಮಟ್ಟದ ಪ್ರಕರಣಗಳಲ್ಲಿ ವಕಾಲತ್ತು ಮಾಡಿ ಸೈ ಎನ್ನಿಸಿಕೊಂಡರು. ಈ ಮಧ್ಯೆ 1971 ರಿಂದ 1978 ರವರೆಗೆ ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸಹ ಕೆಲಸ ನಿರ್ವಹಿಸಿದರು.
ದೈವ ಭಕ್ತರಾಗಿರುವ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿಯವರು ರಾಜ್ಯದ ನೂತನ ಲೋಕಾಯುಕ್ತರಾಗಿ ಆಯ್ಕೆಯಾಗಿರುವುದಕ್ಕೆ ಉಡುಪಿಗರು ಸಂತಸ ವ್ಯಕ್ತಪಡಿಸಿದ್ದಾರೆ.