ಮಾಂತ್ರಿಕ ಶಕ್ತಿಯ ಹಾಡುಗಾರ ವಿಕಾಸ ವಸಿಷ್ಠ
ಕೆಲವೊಬ್ಬರು ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತರಾಗಿದ್ದರೆ, ಕೆಲವರು ಸುಗಮ ಸಂಗೀತದಲ್ಲಿ ಮುಳುಗಿರುತ್ತಾರೆ. ಕೆಲವರು ಪಾಶ್ಚಿಮಾತ್ಯ ಹಾಡುಗಾರಿಕೆಯನ್ನು ಉಸಿರಾಗಿಸಿಕೊಂಡಿದ್ದರೆ, ಕೆಲವರು ಜಾನಪದ ಶೈಲಿಯಲ್ಲಿ ಪ್ರವೀಣರಾಗಿರುತ್ತಾರೆ. ಆದರೆ, ಎಲ್ಲ ಪ್ರಕಾರಗಳ ಸಂಗೀತವನ್ನು ಪ್ರಾವೀಣ್ಯತೆ ಪ್ರಡೆದಿರುವ ಮತ್ತು ಎಲ್ಲ ಪ್ರಕಾರಗಳಲ್ಲಿಯೂ ಅಷ್ಟೇ ಸಾಮರ್ಥ್ಯದಿಂದ ಕೇಳುಗರನ್ನು ಗಂಧರ್ವ ಲೋಕಕ್ಕೆ ಕೊಂಡೊಯ್ಯುವ ಗಂಧರ್ವರು ತುಂಬ ವಿರಳ.
ಅಂತಹ ವಿರಳ ಸಂಗೀತಗಾರರಲ್ಲಿ ವಿಕಾಸ ವಸಿಷ್ಠ ಕೂಡ ಒಬ್ಬರು. ಭ್ರಮೆ ತಂಡದ ಪ್ರಮುಖ ಸಂಗೀತಗಾರರಲ್ಲಿ ಒಬ್ಬರಾಗಿರುವ ವಿಕಾಸ ವಸಿಷ್ಠ ಅವರ ಸಂಗೀತ ಮಾಂತ್ರಿಕತೆಗೆ ಮರುಳಾಗದವರು ಕೂಡ ತುಂಬ ವಿರಳ. ಅವರ ಭಜನಗಳು ಅಲೌಕಿಕವಾದ ಆನಂದ ನೀಡಿದರೆ, ಅವರು ಹಾಡುವ ಗಝಲ್ ಗಳು ನಶೆಯೇರಿಸುತ್ತವೆ. ಸುಶ್ರಾವ್ಯ ಕಂಠದಿಂದ ವಿಕಾಸ ಅವರು ಸುಗಮ ಸಂಗೀತ ಹೃದಯಕ್ಕೆ ಲಗ್ಗೆ ಹಾಕಿದರೆ, ಅವರ ಚಲನಚಿತ್ರ ಸಂಗೀತಗಳು 'ಛೆ ಇವರೇ ಆ ಹಾಡು ಹಾಡಿದ್ರೆ ಚೆನ್ನಾಗಿತ್ತು' ಎಂಬ ಅನಿಸಿಕೆ ಹುಟ್ಟುಹಾಕುತ್ತದೆ.
ಕಳೆದ 15 ವರ್ಷಗಳಿಂದ ವಿದ್ವಾನ್ ಬಾಲಸುಬ್ರಮಣ್ಯ ಶರ್ಮಾ ಅವರ ಬಳಿ ಕರ್ನಾಟಕ ಸಂಗೀತ ಕಲಿಯುತ್ತಿರುವ ವಿಕಾಸ ಸುವರ್ಣ ಚಾನಲ್ ನಲ್ಲಿ ಪ್ರಸಾರವಾದ 'ಕಾನ್ಫಿಡೆಂಟ್ ಸ್ಟಾರ್ ಸಿಂಗ್' ರಿಯಾಲಿಟಿ ಶೋನಲ್ಲಿ ಅಂತಿಮ ಹಂತ ತಲುಪಿದ್ದರು. ಅಲ್ಲದೆ, ಯೋಗರಾಜ್ ಭಟ್ ಅವರ 'ಮನಸಾರೆ' ಚಿತ್ರದಲ್ಲಿ ಮನೋಮೂರ್ತಿ ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದ 'ನಾನು ಮನಸಾರೆ' ಹಾಡಿಗಾಗಿ ರೇಡಿಯೋ ಮಿರ್ಚಿ ಪ್ರಶಸ್ತಿಯನ್ನು ಕೂಡ ಬಗಲಿಗಿಳಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯದಿಂದ ಕೆಂಪೇಗೌಡ ಪ್ರಶಸ್ತಿ ಪಡೆದಿದ್ದಾರೆ.
ಬೆಂಗಳೂರಿನ ಎಪಿಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಕಲಿತಿರುವ ಸ್ಫುರದ್ರುಪಿ ಯುವಕ ವಿಕಾಸ ವಸಿಷ್ಠ ಅವರು ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿಯೂ ತಮ್ಮ ಪ್ರತಿಭೆಯ ಅನಾವರಣ ಮಾಡುವ ಹವಣಿಕೆಯಲ್ಲಿದ್ದಾರೆ. 'ಜೀತು' ಕನ್ನಡ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನೂ ಮಾಡಿರುವ ಅವರು ಪೂರ್ಣ ಪ್ರಮಾಣದಲ್ಲಿ ಕನ್ನಡ ಚಿತ್ರರಂಗದಲ್ಲಿ ತೊಡಗಿಕೊಳ್ಳಬೇಕೆಂಬ ಆಸೆ ಇಟ್ಟುಕೊಂಡಿದ್ದಾರೆ. 'ಭ್ರಮೆ' ಅವರಿಗೆ ಮುಂದಿನ ಭವಿಷ್ಯತ್ತಿಗೆ ಉತ್ತಮ ವೇದಿಕೆ ಕಲ್ಪಿಸಲಿ, ಅವರ ಎಲ್ಲ ಆಸೆಗಳೂ ಈಡೇರಲಿ ಎಂಬುದು ಒನ್ಇಂಡಿಯಾ ಕನ್ನಡದ ಹಾರೈಕೆ. [ವಿಕಾಸ ವಸಿಷ್ಠ ಫೇಸ್ ಬುಕ್ ಪುಟ]
ಭ್ರಮೆ
ತಂಡಕ್ಕೆ
ನಿರ್ದೇಶಕ
'ಸಿಂಪಲ್'
ಸುನಿ
ಶುಭ
ಹಾರೈಕೆ