ವಿಶ್ವೇಶ್ವರಯ್ಯ ಜನ್ಮದಿನ: ಉಸಿರಾಡುವ ಅಂಚೆಚೀಟಿ ಕಂಡ ಕನ್ನಡಿಗ
ಸಾಧನೆ ಮಾಡಿದ ಮಹನೀಯರಿಗೆ ಅಥವಾ ಸಂಸ್ಥೆಗೆ ನೂರು ವರ್ಷ ತುಂಬಿದಾಗ ವಿಶೇಷ ಅಂಚೆ ಚೀಟಿ ಹೊರತರಲಾಗುತ್ತದೆ. ಕರ್ನಾಟಕಕ್ಕೆ ಇಂತಹ ಗೌರವ ತಂದುಕೊಟ್ಟವರಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಮೊದಲಿಗರು.
ಜೀವಂತವಾಗಿ ಇರುವಾಗಲೇ ಸಾಧಕರ ಗೌರವಾರ್ಥ ಅಂಚೆ ಚೀಟಿ ಹೊರತರುವುದು ಭಾರತದಲ್ಲಂತೂ ಬಹಳ ಅಪರೂಪ. 1960ರ ಸೆಪ್ಟೆಂಬರ್ 15 ರಂದು ಸರ್.ಎಂ.ವಿ ಅವರಿಗೆ ನೂರು ವರ್ಷ ತುಂಬಿದ ದಿನದಂದೇ ಕೇಂದ್ರ ಸರ್ಕಾರ ಅವರ ಗೌರವಾರ್ಥ ಅಂಚೆ ಚೀಟಿಯನ್ನು ಹೊರತಂದಿತು. ವಿಶೇಷ ಅಂಚೆ ಚೀಟಿ ಸರಣಿಯಲ್ಲಿ ಕರ್ನಾಟಕಕ್ಕೆ ಲಭಿಸಿದ ಮೊದಲ ಅಂಚೆ ಚೀಟಿಯಿದು.[ಇಂಜಿನಿಯರ್ ದಿನ : ವಿಶ್ವೇಶ್ವರಯ್ಯನವರ ಸಾಧನೆಗಳು]
ತಮ್ಮದೇ ಚಿತ್ರವಿರುವ ಅಂಚೆ ಚೀಟಿಯ ಬಿಡುಗಡೆಯನ್ನು ಕಂಡ ಅಪರೂಪದ ಭಾಗ್ಯಶಾಲಿ ಸರ್.ಎಂ.ವಿಶ್ವೇಶ್ವರಯ್ಯ. 15 ಪೈಸೆ ಮುಖಬೆಲೆಯ ಈ ಅಂಚೆ ಚೀಟಿಯು ಅಶೋಕಸ್ತಂಭ, ಜಲಚಿಹ್ನೆಯನ್ನು ಹೊಂದಿದ್ದು, ಕಂದು ಮತ್ತು ಕ್ಯಾರಮೈನ್ ಮಿಶ್ರ ವರ್ಣದಲ್ಲಿ ಮುದ್ರಿತವಾಗಿದೆ.[ಕನ್ನಂಬಾಡಿ ನಿರ್ಮಾಣದಲ್ಲಿ ವಿಶ್ವೇಶ್ವರಯ್ಯನವರ ಪಾತ್ರ]
50 ವರ್ಷಗಳ ನಂತರ ಸರ್.ಎಂ.ವಿ ಅವರ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ (2010ರಲ್ಲಿ) ವಿಶೇಷ ಅಂಚೆ ಲಕೋಟೆಯನ್ನು ಸಹ ಬಿಡುಗಡೆ ಮಾಡಲಾಯಿತು. ಐದು ರುಪಾಯಿ ಮುಖಬೆಲೆಯ ವಿಶೇಷ ಅಂಚೆ ಲಕೋಟೆಯು ಸರ್.ಎಂ.ವಿ ಚಿತ್ರವಿರುವ ವಿಶೇಷ ಸೀಲ್, ಅವರು ವಾಸಿಸಿದ ಮನೆ ಹಾಗೂ ಭಾವಚಿತ್ರವನ್ನು ಒಳಗೊಂಡಿದೆ.[ವಿಶ್ವೇಶ್ವರಯ್ಯನವರ ಜೀವನ ಮತ್ತು ಸಾಧನೆಗಳು]
ಇಂದು ವಿಶ್ವೇಶ್ವರಯ್ಯನವರ 156ನೇ ಜನ್ಮದಿನ ನಿಮಿತ್ತ ಈ ಲೇಖನ ಪ್ರಕಟಿಸಲಾಗಿದೆ.
ಉಸಿರಾಡುವ ಅಂಚೇ ಚೀಟಿ
1960ರ ಸೆಪ್ಟೆಂಬರ್ 15ರಂದು ವಿಶ್ವೇಶ್ವರಯ್ಯ ಅವರ ನೂರನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರ ಅಂಚೆಚೀಟಿ.
ವಿಶ್ರಾಂತಿಯಲ್ಲಿದ್ದಾರೆ ವಿಶ್ವೇಶ್ವರಯ್ಯ
ಚಿಕ್ಕಬಳ್ಳಾಪುರ ತಾಲ್ಲೂಕು ಮುದ್ದೇನಹಳ್ಳಿಯಲ್ಲಿರುವ ಸರ್ ಎಂ.ವಿಶ್ವೇಶ್ವರಯ್ಯ ಅವರ ಸಮಾಧಿ ಸ್ಥಳ.
ನೂರೈವತ್ತರ ಸ್ಮರಣೆಯಲ್ಲಿ
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ 2010ರ ಸೆಪ್ಟೆಂಬರ್ 15, ರಂದು ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಬಿಡುಗಡೆಯಾದ ವಿಶೇಷ ಅಂಚೆ ಲಕೋಟೆ.
ಮಹಾನ್ ಚೇತನದ ಸಂಬಂಧಿ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸರ್.ಎಂ.ವಿಶ್ವೇಶ್ವರಯ್ಯನವರ ಸೊಸೆ ಶಕುಂತಲಾ ಕೃಷ್ಣಮೂರ್ತಿ(ಬಲಭಾಗದಲ್ಲಿ ಕುಳಿತವರು).