ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಧರ ಬಾಳಿನ ಬೆಳಕು 'ದೃಷ್ಟಿದೇವತೆ' ಮೈಸೂರಿನ ಮಧುರ

By Prasad
|
Google Oneindia Kannada News

ಅಂಧರ ಬಾಳಿಗೆ ಬೆಳಕಾಗಿರುವ, ಜನಸೇವೆಗೆ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಿರುವ ಮೈಸೂರಿನ ಬಿಎಸ್ ಮಧುರಾ ಅವರು 1984ರಿಂದ ದೃಷ್ಟಿಹೀನರಿಗೆ ದೃಷ್ಟಿ ದೊರಕಿಸಿಕೊಡಲು ಮತ್ತು ದೃಷ್ಟಿದಾನದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಅಹರ್ನಿಶಿಯಾಗಿ ಶ್ರಮಿಸುತ್ತಿದ್ದಾರೆ. ಈ ಇಳಿವಯಸ್ಸಿನಲ್ಲಿಯೂ ಅವರ ಶ್ರದ್ಧೆ ಎಳ್ಳಷ್ಟೂ ಕಡಿಮೆಯಾಗಿಲ್ಲ.

ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಮೈಸೂರು ನೇತ್ರ ಭಂಡಾರ ಮತ್ತು ಸಂಶೋಧನಾ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿರುವ ಮಧುರ ಅವರು 1994ರಲ್ಲಿ ನೇತ್ರ ಭಂಡಾರವನ್ನು ಸ್ಥಾಪಿಸಿದರು. ಲಾಭರಹಿತ ಸಂಸ್ಥೆಯಾಗಿರುವ ನೇತ್ರ ಭಂಡಾರ ದಿನ 24 ಗಂಟೆಗಳ ಕಾಲ ನೇತ್ರದಾನಕ್ಕಾಗಿ ಕರೆಗಳನ್ನು ಸ್ವೀಕರಿಸುತ್ತದೆ ಮತ್ತು ಆಂಬುಲನ್ಸ್ ಸೇವೆಯನ್ನು ಒದಗಿಸುತ್ತಿದೆ.

ಅವರ ಸೋದರಮಾವನ ದೃಷ್ಟಿಹೀನತೆಯೇ ಅವರನ್ನು ಅಂಧರ ಬಾಳಲ್ಲಿ ಬೆಳಕಾಗಲು ಪ್ರೇರೇಪಿಸಿತು. ಇಲ್ಲಿಯವರೆಗೆ ಅವರು 1,300 ನೇತ್ರಗಳನ್ನು ಸಂಗ್ರಹಿಸಿದ್ದು, 20 ಸಾವಿರಕ್ಕೂ ಹೆಚ್ಚು ಜನರನ್ನು ನೇತ್ರದಾನಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ. ಈ ಕುರಿತಂತೆ 650ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿ, ನೇತ್ರದಾನದ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

Goddess of sight B.S. Madhura

ಧೈರ್ಯವಂತ ಮಹಿಳೆ : ಯಾರಾದರೂ ತೀರಿಕೊಂಡರೆ ಮಹಿಳೆಯರು ಶವಾಗಾರಕ್ಕೆ ಹೋಗಲು ಹಿಂದೇಟು ಹಾಕುತ್ತಾರೆ. ಆದರೆ, ಮಧುರ ಅವರು ತಾವೇ ಸ್ವತಃ ಸ್ವಲ್ಪವೂ ಅಳುಕಿಲ್ಲದೆ ಅಲ್ಲಿಗೆ ಹೋಗಿ, ಸಂಬಂಧಿತರನ್ನು ಕೇಳಿಪಡೆದು, ಕಾರ್ನಿಯಾವನ್ನು ಸಂರಕ್ಷಿಸುತ್ತಾರೆ ಮತ್ತು ಕಾರ್ನಿಯಾ ತೊಂದರೆಯಿಂದ ಕಣ್ಣು ಕಳೆದುಕೊಂಡವರಿಗೆ ಕಾರ್ನಿಯಾ (ಜೋಡಣೆ) ಟ್ರಾನ್ಸ್‌ಪ್ಲಾಂಟ್ ಮಾಡಲು ಸಹಕಾರ ನೀಡುತ್ತಾರೆ.

ಇಂಥ ಸೇವೆಗೆ ಮುಂದಾದಾಗ ಅವರು ಅಸುನೀಗಿದ ಸಂಬಂಧಿತರಿಂದ ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದಾರೆ. ಕಾರ್ನಿಯಾ ಪಡೆಯಲು ಹೋದಾಗ ಅವರಿಂದ ಬೈಗುಳಗಳನ್ನು ಕೂಡ ತಿಂದ ಉದಾರಹಣೆಗಳಿವೆ. ಆದರೆ, ಇದಕ್ಕೆಲ್ಲ ಬೇಜಾರು ಮಾಡಿಕೊಳ್ಳದೆ ತಮ್ಮ ಸೇವೆಯಲ್ಲಿ ಅವರು ನಿರತರಾಗಿದ್ದರು. ನಂತರ ದಾನ ಮಾಡಿದ ಜನರೇ ಅವರಿಗೆ ಕರೆ ಮಾಡಿ ಶುಭಾಶಯ ಹೇಳಿದ್ದಾರೆ.

ಮೂವರು ಅಂಧ ಸಹೋದರಿಯರ ಮಾನವೀಯತೆಯ ಕಥೆ : ಕಾರ್ನಿಯಾ ಆರೋಗ್ಯಕರವಾಗಿದ್ದರೂ ನರದ ದೌರ್ಬಲ್ಯದಿಂದ ಹುಟ್ಟಿನಿಂದಲೇ ಕಣ್ಣು ಕಳೆದುಕೊಂಡಿದ ಶಿವಮೊಗ್ಗದ ಮೂವರು ಸಹೋದರಿಯರ ಕಥೆಯನ್ನು ಮಧುರ ಅವರು ಸ್ಫೂರ್ತಿ ತುಂಬಲು ಹೇಳುತ್ತಿರುತ್ತಾರೆ. ಎ.ಟಿ. ಅಂಬಿಕಾ (44), ಎ.ಟಿ. ಅನಿತಾ (42) ಮತ್ತು ಎ.ಟಿ. ಆಶಾ (40) ಅವರು ತಮ್ಮ ಕಾರ್ನಿಯಾಗಳನ್ನು ದಾನ ಮಾಡಿ ಮಾನವೀಯತೆ ಮೆರೆದ ಸಹೋದರಿಯರು.

ಮಧುರ ಅವರ ಶ್ರಮದಿಂದ ಕಣ್ಣು ಪಡೆದ ಸವಿತಾ ಮತ್ತು ಆಕೆಯ ಸಹೋದರ ಈಗ ಮಧುರ ಅವರ ನೇತ್ರ ಭಂಡಾರದಲ್ಲಿ ಸಹಾಯಕಿಯರಾಗಿ ಕೆಲಸ ಮಾಡುತ್ತಿದ್ದಾರೆ. ಮಧುರ ಅವರು ಬೆಂಗಳೂರಿನ ಲಯನ್ಸ್ ಕಣ್ಣಾಸ್ಪತ್ರೆ, ವಿದ್ಯಾಧರಸ್ವಾಮಿ - ಲೋಕಸೇವಾ ನಿರತೆ ಪ್ರಶಸ್ತಿ, ರೋಟರಿ ರಮ್ಯ ಮುಂತಾದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರ ಜೀವನವೇ ದೃಷ್ಟಿದಾನ ಮಾಡುವವರಿಗೆ ಸ್ಫೂರ್ತಿಯಾಗಿದೆ.

ಪ್ರಶಸ್ತಿ, ಸನ್ಮಾನ : ಜನಸೇವೆಗಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿರುವ ಬಿ.ಎಸ್. ಮಧುರ ಅವರು ಮೈಸೂರಿನಲ್ಲಿ ಆಗಸ್ಟ್ 31ರಂದು ಪದ್ಮಶ್ರೀ ಡಾ. ಮತ್ತೂರು ಕೃಷ್ಣಮೂರ್ತಿ ಗೌರವ ಪ್ರಶಸ್ತಿಯನ್ನು ಪಡೆಯಲಿದ್ದಾರೆ. ಮೈಸೂರಿನ ವನಮಾಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅವರನ್ನು ಸನ್ಮಾನಿಸಲಾಗುತ್ತಿದೆ. ಮಧುರ ಅವರ ಸೇವೆಯನ್ನು ಮೆಚ್ಚಿ ಅನೇಕ ಸಂಘಸಂಸ್ಥೆಗಳು ಅವರಿಗೆ 'ಲೋಕಸೇವಾ ನಿರತೆ', 'ದೃಷ್ಟಿದೇವತೆ' ಮುಂತಾದ ಬಿರುದುಗಳನ್ನು ನೀಡಿವೆ.

English summary
B.S. Madhura from Mysore has worked relentlessly from 1984 to give sight to the blind and educating people to donate eyes. Madhura is the executive director of The Mysore Eye Bank and Research Centre situated in Krishnamurthypuram, Mysore. She has been conferred with Dr. Mathur Krishnamurthy Honorary Award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X