ಸಕಲಕಲಾ ಪಾರಂಗತೆ ಬೆಂಗಳೂರಿನ ಶ್ವೇತ ಅಕ್ನೂರ್
ಹತ್ತನೆಯ ತರಗತಿಯಲ್ಲಿ ತೆಗೆದ ಕಡಿಮೆ ಅಂಕವು ಆಕೆಯ ಬದುಕಿನ ದಿಕ್ಕನ್ನು ಬದಲಾಯಿಸುವಂತೆ ಮಾಡಿತು. ತಾಯಿ ಅಕ್ನೂರ್ ಚಂದ್ರಿಕಾ, ಅಪ್ಪ ಅಕ್ನೂರ್ ಕೃಷ್ಣ ಮೂರ್ತಿ ಮಗಳ ಭವಿಷ್ಯವನ್ನು ಹಣೆದಿದ್ದು ಚಿತ್ರಕಲೆ ಹಾಗೂ ನೃತ್ಯಕಲೆಯಲ್ಲಿ. ಪೋಷಕರ ಮಾರ್ಗದರ್ಶನ ಹಾಗೂ ಅಣ್ಣ ಅಕ್ನೂರ್ ಸುನೀಲ್ ಬೆಂಬಲ ಈ ಸಾಧನೆಗೆ ಕಾರಣ. ವಿವಾಹವಾದ ನಂತರವೂ ಸಹ ಯಾವುದೇ ರೀತಿಯಲ್ಲೂ ಅಡ್ಡಿ ಆಗದಂತೆ ಇವರ ಸಾಧನೆಗೆ ಬೆಂಬಲವಾಗಿ ಶ್ವೇತ ಪತಿ ಗುರುಸತ್ಯನಾರಾಯಣ, ಅತ್ತೆ ಉಷಾ, ಮಾವ ಸತ್ಯ ನಾರಾಯಣ ಬೆನ್ನೆಲುಬಾಗಿ ನಿಂತಿದ್ದಾರೆ.
ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ಚಿತ್ರಕಲೆಯಲ್ಲಿ ಪದವಿ (ಬಿ.ಎಫ್.ಎ) ಪಡೆದ ಶ್ವೇತ 3ಡಿ ಅನಿಮೇಶನ್ ಸ್ನಾತಕೋತ್ತರ ಪದವಿ ಕೆನಡಾದ ವ್ಯಾಂಕೊವರ್ ನಲ್ಲಿ ಇರುವ ಕಲಾ ಮಾಧ್ಯಮ ಸಂಸ್ಥೆಯಲ್ಲಿ ಪಡೆದರು. ಪ್ರಸ್ತುತ 3Icube Technologies (Unit of Test Yantra Software Solutions India Pvt Ltd) ಸಂಸ್ಥೆಯಲ್ಲಿ ವೆಬ್ ದಿಸೈನ್ಗಳ ಮೂಲಕ ತಮ್ಮ ಕಾಯಕ ಮುಂದುವರಿಸಿದ್ದಾರೆ. ಜೊತೆಗೆ ಶ್ವೇತ ತಮ್ಮ ಪ್ರೀತಿಯ ನೃತ್ಯ ಕ್ಷೇತ್ರದಲ್ಲೂ ಗಮನಾರ್ಹವಾದ ಸಾಧನೆ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಮತ್ತಷ್ಟು ಹೊತನಗಳನ್ನು ನೀಡುವ ಆಶಯವನ್ನು ಸಹ ಹೊಂದಿದ್ದಾರೆ.
ಸಾಧನೆಯ ಹಾದಿ : ಶ್ರೀನಿವಾಸ ಅವರಿಂದ ಕಾಲಿಗೆ ಗೆಜ್ಜೆ ಕಟ್ಟಿಸಿಕೊಂಡ ಶ್ವೇತ ಅವರಿಂದ ಭರತನಾಟ್ಯದ ಅ,ಆ ಎ ಈ.. ಕಲಿತರು. ನಂತರ ರಾಧಾ ಶ್ರೀಧರ್ ಈ ಹೆಣ್ಣುಮಗಳ ಗೆಜ್ಜೆ- ಹೆಜ್ಜೆ ಧ್ವನಿಯು ಕಲಾಸಕ್ತರಿಗೆ ಗಟ್ಟಿಯಾಗುವಂತೆ ಕೇಳುವಂತೆ ಮಾಡಿದರು. ಪ್ರಸ್ತುತ ವಿದುಷಿ ವಿದ್ಯಾ ಶಿಮ್ಲಡ್ಕ ಅವರ ಬಳಿ ವಿದ್ವತ್ ಗೆ ಅಗತ್ಯವಾದ ತಾಲಿಮು ನಡೆಸಿದ್ದಾರೆ. ಭರತನಾಟ್ಯ, ಸಮಕಾಲಿನ ನೃತ್ಯ ಪರಂಪರೆಯಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ, ಕಲಾನಿಧಿ ತಂಡದ ಮೂಲಕ ಪ್ರಸ್ತುತ ಪಡಿಸಿದ್ದಾರೆ. ಇವರ ನೃತ್ಯಗಳಿಗೆ ಸಾಥ್ ನೀಡಿದವರು ಇದೇ ತಂಡದ ಸದಸ್ಯೆಯರಾದ ರಾಧಾ ರಾಜು ಹಾಗೂ ದಿವ್ಯಶ್ರೀ. ಸೆಂಟ್ರಲ್ ಜೈಲ್, ಕರುಣಾಶ್ರಯ(ಕ್ಯಾನ್ಸರ್ ಪೀಡಿತರ ಶುಶ್ರುಷಾ ಕೇಂದ್ರ)ದಲ್ಲಿ ನೃತ್ಯ ಕಾರ್ಯಕ್ರಮ ನೀಡುವುದರ ಮೂಲಕ ತಮ್ಮ ಸಮಾಜಮುಖಿಯ ವ್ಯಕ್ತಿತ್ವ ಅನಾವರಣ ಮಾಡಿದ್ದಾರೆ.
ವ್ಯಾಂಕೊವರ್ ಕನ್ನಡ ಕೂಟದಲ್ಲಿ ವಿಭಿನ್ನ ರೀತಿಯ ನೃತ್ಯ ಕಾರ್ಯಕ್ರಮ ನೀಡಿದ ಶ್ವೇತಗೆ ಪ್ರೋತ್ಸಾಹಿಸಿ ಬೆಳೆಸಿದ್ದು ರೂಪ ಗೋಪಿನಾಥ್. ಅವರ ಆ ಸಹಾಯ ಬೆಂಬಲ ತಮ್ಮ ಬದುಕಿನಲ್ಲಿ ಉತ್ತಮ ತಿರುವು ನೀಡಿತು ಎನ್ನುವ ಸಂಗತಿಯನ್ನು ಪದೇಪದೇ ವಿನಮ್ರವಾಗಿ ಹೇಳುತ್ತಾರೆ ಈ ಪ್ರತಿಭಾವಂತೆ. ಅಷ್ಟೆ ಅಲ್ಲದೆ ಅಮೆರಿಕಾದಲ್ಲಿ ಮೂರು ತಿಂಗಳ ಬ್ಯಾಲೆ ಪ್ರದರ್ಶನ, ನವದೆಹಲಿ, ಶ್ರವಣ ಬೆಳಗೊಳ, ಶ್ರೀರಂಗಗಳಲ್ಲಿ ಪ್ರಭಾತ್ ತಂಡದ ಜೊತೆಗೂಡಿ ಮತ್ತು ಬೆಂಗಳೂರು, ಬಿಜಾಪುರದದಲ್ಲಿ ನಡೆದ ನವರಸ ಉತ್ಸವಗಳಲ್ಲಿ ಭ್ರಮರಿ ತಂಡದ ಒಡನಾಟದಲ್ಲಿ ಅತ್ಯುತ್ತಮ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. 'Fluid Space' ಸಂಸ್ಥೆಯಲ್ಲಿ ವಿದ್ಯಾ ಶಿಮ್ಲಡ್ಕ ಹಾಗೂ ರಂಜನ್ ಮುಲಾರತ್ ಅವರ ಜೊತೆಗೂಡಿ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಇತ್ತೀಚೆಗೆ ಯುಕೆ ದೇಶದಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳದಲ್ಲಿಯೂ ಸಹ ತಮ್ಮ ನೃತ್ಯ ಪ್ರದರ್ಶನ ನೀಡಿ ಕಲಾರಸಿಕರ ಮನ ರಂಜಿಸಿದ್ದಾರೆ.
ಯೋಗಾಸನ, ಫೋಟೋಗ್ರಫಿಯಲ್ಲೂ ನಿಪುಣೆಯಾದ ಶ್ವೇತ, ಕೊರಿಯೋಗ್ರಫಿಯಲ್ಲೂ ಹಿಡಿತ ಸಾಧಿಸಿದ್ದಾರೆ. ಭಿನ್ನ ರೀತಿಯಲ್ಲಿ ನೃತ್ಯ ಸಂಯೋಜನೆ ಮಾಡುವ ಶ್ವೇತಳ ಅಸಾಧಾರಣ ಪ್ರತಿಭೆಗೆ ಕೆಂಪೇಗೌಡ ಪ್ರಶಸ್ತಿ, ಅನೇಕ ಸಂಘ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳು ದೊರಕಿವೆ. ತನ್ನ ಸಾಧನೆಯ ಕ್ಷೇತ್ರ ವಿಸ್ತಾರ ಮಾಡಿಕೊಳ್ಳ ಬೇಕೆಂಬ ಅಮಿತ ಆಶಯ ಹೊಂದಿರುವ ಶ್ವೇತ ಸೂಕ್ತ ಅವಕಾಶಗಳಿಗೆ ಕಾಯುತ್ತಿದ್ದಾರೆ.