ಅಂತರಂಗದ ಸ್ನೇಹಿತನನ್ನು ಕಳೆದುಕೊಂಡ ಕ್ಯಾಮೆರಾ
ವೀರೇಂದ್ರ ಪಾಟೀಲ್, ವೀರಪ್ಪ ಮೊಯ್ಲಿ, ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಇವರು ಜಿಲ್ಲೆಯ ಮತ್ತೋರ್ವ ರಾಜಕೀಯ ಮುತ್ಸದ್ಧಿ ಎಂ.ಪಿ. ಪ್ರಕಾಶ್ ಅವರ ಅನೇಕ ಯೋಜನೆಗಳು, ಕ್ರಿಯಾಶೀಲತೆ, ಸಾಹಿತ್ಯದ ಗೀಳನ್ನು ಮುಕ್ತಕಂಠದಿಂದ ಮೆಚ್ಚುತ್ತಿದ್ದರು. ಎಂ.ಪಿ. ಪ್ರಕಾಶ್ ಅವರ 'ಹಂಪೆ ಉತ್ಸವ"ವನ್ನು ಪ್ರಕಾಶ್ ಉತ್ಸವ ಎನ್ನುತ್ತಲೇ ಪ್ರಕಾಶ್ ಅವರ ಜೊತೆ ಗ್ರಾಮೀಣ ಅಭಿವೃದ್ಧಿ, ಪಂಚಾಯಿತಿ ರಾಜ್ ವ್ಯವಸ್ಥೆಯ ಕುರಿತು ಚರ್ಚೆ ನಡೆಸುತ್ತಿದ್ದರು.
ಕುಟುಂಬ ರಾಜಕೀಯಕ್ಕೆ ಮನಸೋತು ಸಹೋದರ ವೆಂಕಟರಾವ ಘೋರ್ಪಡೆ ಅವರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡಿದ್ದರು. ವಯೋ ಸಹಜವಾಗಿ 2004ರಲ್ಲಿ ರಾಜಕೀಯ ನಿವೃತ್ತಿ ಘೋಷಣೆ ಮಾಡಿ ತಮ್ಮದೇ ಆದ ಸ್ಮಯೋರ್ ಶಿಕ್ಷಣ ಸಂಸ್ಥೆಯ ಬಾಲಕಿಯರ ಶಾಲೆಯಲ್ಲಿ ಬೋಧನೆಯಲ್ಲಿ ನಿರತರಾಗಿದ್ದರು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಮನೆಗೆ ಕರೆಯಿಸಿಕೊಂಡು ಪಾಠ ಹೇಳುತ್ತಿದ್ದರು. ಬರೋಡ ಮಹಾರಾಜರ ಮಗಳನ್ನು ವಿವಾಹವಾಗಿದ್ದ ಎಂ.ವೈ. ಘೋರ್ಪಡೆ, ಸ್ವಾಭಿಮಾನಿ. ಭಾರತದಲ್ಲೇ ಅಪರೂಪವಾಗಿರುವ ದರೋಜಿ ಕರಡಿಧಾಮದ ಕನಸುಗಾರ ಮತ್ತು ಕಾರಣಕರ್ತ. ನಂದಿಹಳ್ಳಿಯಲ್ಲಿ ಸ್ನಾತಕೋತ್ತರ ಕೇಂದ್ರ ಪ್ರಾರಂಭಕ್ಕೆ ಶ್ರಮಿಸಿದ್ದರು.
ವನ್ಯಜೀವಿ ಛಾಯಾಗ್ರಹಣದಲ್ಲಿ ಅಂತಾರಾಷ್ಟ್ರೀಯ ಛಾಯಾಗ್ರಾಹಕರ ಕ್ಲಬ್(ಲಂಡನ್ ರಾಯಲ್ ಫೋಟೋಗ್ರಫಿಕ್ ಸೊಸೈಟಿ)ಗಳ ಸದಸ್ಯತ್ವ, ಪ್ರಶಸ್ತಿ ಫಲಕಗಳು, ಹೆಗ್ಗುರುತುಗಳನ್ನು ಪಡೆದಿದ್ದರು. ಛಾಯಾಗ್ರಹಣವನ್ನು ಹವ್ಯಾಸವಾಗಿಸಿಕೊಂಡಿದ್ದರೂ ಒಂಟಿತನ ಕಳೆಯಲು ಕ್ಯಾಮರಾ ನನ್ನ ಆಪ್ತಮಿತ್ರ ಎನ್ನುತ್ತಿದ್ದರು.