ಕಾರ್ಪೋರೇಟ್ ವಾನಪ್ರಸ್ಥಕ್ಕೆ ಎನ್ಆರ್ಎನ್?
ಲೈವ್ ಮಿಂಟ್ ಅಂತರ್ಜಾಲ ತಾಣದಲ್ಲಿ ಪ್ರಕಟವಾಗಿರುವ ಸಂದರ್ಶಾನಾಧಾರಿತ ಲೇಖನದಲ್ಲಿ ಅವರಾಡಿರುವ ಮಾತುಗಳು ಅವರ ಮನದಾಳದ ಇಂಗಿತಕ್ಕೆ ದಿಕ್ಸೂಚಿಯಾಗಿವೆ.
"ನಾನು ಒಂದು ಕ್ರಮಬದ್ಧವಾದ ಜೀವನಕ್ಕೆ ಒಗ್ಗಿಕೊಂಡಿದ್ದೇನೆ. ಅತ್ಯಂತ ಶಿಸ್ತುಬದ್ಧವಾಗಿ ಕೆಲಸ ಮಾಡುವ ಜನರೊಂದಿಗೆ ನನ್ನ ಒಡನಾಟ. ಮಾತು ಕೊಟ್ಟಂತೆ ನಡೆದುಕೊಳ್ಳುವುದು ನನ್ನ ಜಾಯಮಾನ. ಅತ್ಯಂತ ನಾಗರಿಕ ಜನರೊಂದಿಗೆ ಕೆಲಸ ಮಾಡುವುದು ನನಗೆ ರೂಢಿಯಾಗಿದೆ. ಆದರೆ, ಅತ್ಯಂತ ಖೇದಕರ ಸಂಗತಿಯೆಂದರೆ ಸಾರ್ವಜನಿಕ ಜೀವನದಲ್ಲಿ ಈ ಗುಣವಿಶೇಷಣಗಳು ಕಂಡುಬರುವುದಿಲ್ಲ."
ಈ ಮಾತುಗಳು ಎನ್ಆರ್ಎನ್ ಸಾರ್ವಜನಿಕ ಜೀವನದಿಂದ ದೂರ ಸರಿಯುತ್ತಿರುವ ಬಗ್ಗೆ ಪುಷ್ಟಿ ನೀಡುತ್ತಿವೆ. 1999ರಲ್ಲಿಯೇ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತಮ್ಮ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡಿ ನಾರಾಯಣ ಮೂರ್ತಿಯವರಿಗೆ ಆಹ್ವಾನವಿತ್ತಿದ್ದರು. ಅದನ್ನು ಅವರು ನಿರಾಕರಿಸಿದ್ದರು. 2004ರಲ್ಲಿ ಬಂಡವಾಳ ಹೂಡಿಕೆ ಆಯೋಗದ ನೇತೃತ್ವವಹಿಸಲು ಕೋರಿದ್ದರು. ಆದರೆ, ಅಂತಾರಾಷ್ಟ್ರೀಯ ಹಣಹೂಡಿಕೆದಾರರಿಗೆ ಭಾಷೆ ನೀಡಿದಂತೆ ನಡೆದುಕೊಳ್ಳಲು ಭಾರತಕ್ಕೆ ಸಾಧ್ಯವಾಗುವ ಬಗ್ಗೆ ಶಂಕೆಯಿದೆ ಎಂಬ ಮಾತು ಹೇಳಿ ಮೂರ್ತಿ ಜಾರಿಕೊಂಡಿದ್ದರು.
ಅವರಿಗೆ ಭಾರತದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿಯಾಗಲು ಆಮಂತ್ರಣವೀಯಲಾಗಿತ್ತು. ನೇರ ನುಡಿಯ ನಾರಾಯಣ ಮೂರ್ತಿ ಅವರು, ಕಡ್ಡಿ ಮುರಿದಂತೆ ಅದನ್ನು ನಿರಾಕರಿಸಿದ್ದರು.
ಅನೇಕ ಕಂಪನಿಗಳ ಗೌರವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಮೂರ್ತಿ ಕ್ರಮೇಣ ಅವುಗಳಿಂದಲೂ ದೂರಸರಿಯಲು ನಿರ್ಧಸಿರಿದ್ದಾರೆ. ಎನ್ಡಿಟಿವಿ ಮತ್ತು ಯುನಿಲೀವರ್ ಬೋರ್ಡ್ ನಿಂದಲೂ ನಿವೃತ್ತರಾಗಿದ್ದಾರೆ. ವಿವಿಧ ಜಾಗತಿಕ ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿರುವ ಮೂರ್ತಿ ಅದರಿಂದಲೂ ದೂರ ಸರಿಯಲು ನಿರ್ಧರಿಸಿದ್ದಾರೆ.
ಸದ್ಯಕ್ಕೆ ಅವರ ಗಮನವೇನಿದ್ದರೂ ತಾವು ಮತ್ತು ತಮ್ಮ ಪತ್ನಿ ಸುಧಾ ಮೂರ್ತಿ ಸೇರಿ 600 ಕೋಟಿ ರು.ನಷ್ಟು ಬಂಡವಾಳ ಹೂಡಿ ಆರಂಭಿಸಿರುವ ಕ್ಯಾಟಮರನ್, ವೆಂಚರ್ ಕ್ಯಾಪಿಟಲ್ ಫಂಡ್ ಅಭಿವೃದ್ಧಿ ಕಡೆಗೆ ಮಾತ್ರ. ಭಾರತದಲ್ಲಿ ತಮ್ಮದೇ ಛಾಪು ಒತ್ತಲು ಸಿದ್ಧರಿರುವ ಯುವ ಉದ್ಯಮಿಗಳನ್ನು ಬೆಳೆಸಲು ಈ ಬಂಡವಾಳವನ್ನು ಬಳಸಲು ಮೂರ್ತಿ ಕುಟುಂಬ ನಿರ್ಧರಿಸಿದೆ. ಮೂರ್ತಿ ಅವರ ಹೊಸ ಸಾಹಸಕ್ಕೆ ಅಭಿನಂದನೆಗಳು.