ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿ ಸಾವು : ನಿಜಕ್ಕೂ ಅನ್ಯಾಯ...

By * ಮೃತ್ಯುಂಜಯ ಕಲ್ಮಠ
|
Google Oneindia Kannada News

ಬೆಂಗಳೂರು, ಸೆ. 3 : ಯದುಗಿರಿ ಸಂದಿಂತಿ ರಾಜಶೇಖರರೆಡ್ಡಿ ಅವರ ಅಕಾಲಿಕ ಮರಣ ಜನತೆಗೆ ಬರಸಿಡಿಲಿನಂತೆ ಬಡಿದಿದ್ದು, ಆಂಧ್ರಪ್ರದೇಶ ಶೋಕ ಸಾಗರದಲ್ಲಿ ಮುಳುಗಿದೆ. ತಮ್ಮ ನೆಚ್ಚಿನ ನಾಯಕ ದುರ್ಮರಣ ಅಲ್ಲಿನ ಜನತೆಗೆ ಅರಗಿಸಿಕೊಳ್ಳುವುದೇ ಸಾಧ್ಯವಾಗುತ್ತಿಲ್ಲ. ಕಳೆದ 20 ಗಂಟೆಯಿಂದ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಸಿಎಂ ಮರಳಿ ಬರಲಿ ಎಂಬ ಪೂಜೆ ಪುನಸ್ಕಾರಗಳು ಫಲಕೊಡಲಿಲ್ಲ. ಸಿಎಂ ಸಾವಿನ ಸುದ್ದಿ ತಲಪುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು ಜನಸಾಮಾನ್ಯರು, ಅಭಿಮಾನಿಗಳು ಅಂಕ್ರದನ ಹೇಳತೀರದಾಗಿದೆ.

ರಾಜಶೇಖರರೆಡ್ಡಿ ಆಂಧ್ರಪ್ರದೇಶ ರಾಜಕೀಯ ಇತಿಹಾಸದಲ್ಲಿ ಬಹುದೊಡ್ಡ ಹೆಸರು ಮಾಡಿದ ವ್ಯಕ್ತಿತ್ವ. ಐದು ವರ್ಷಗಳ ಕಾಲ ಸಮರ್ಥ ಆಡಳಿತ ನಡೆಸಿದ್ದ ವೈಎಸ್ ಆರ್, ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದರು. ಐದು ವರ್ಷಗಳ ಉತ್ತಮ ಆಡಳಿತದ ಫಲವಾಗಿ ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಚಂಡ ಬಹುಮತದಿಂದ ಆರಿಸಿ ಬರುವ ಮೂಲಕ ಮತ್ತೆ ಆಂಧ್ರಪ್ರದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು.

ಆಂಧ್ರಪ್ರದೇಶದ 42 ಲೋಕಸಭೆ ಚುನಾವಣೆಯಲ್ಲಿ 32 ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಲು ರೆಡ್ಡಿ ಅವರ ಪಾತ್ರ ಮುಖ್ಯವಾದದ್ದು, ಆಂಧ್ರದಲ್ಲಿ ಈ ಮಟ್ಟಿಗೆ ಕಾಂಗ್ರೆಸ್ ಸಂಸದರು ಆಯ್ಕೆಯಾಗಲಿದ್ದಾರೆ ಎಂಬುದನ್ನು ಸ್ವತಃ ಸೋನಿಯಾ ಗಾಂಧಿ ಕೂಡಾ ನಿರೀಕ್ಷಿಸಿರಲಿಲ್ಲ. ಆದರೆ, ರೆಡ್ಡಿ ಅವರ ಜನಪರ ಆಳ್ವಿಕೆ ನೋಡಿದ ಅಲ್ಲಿನ ಜನತೆ ಮತ್ತೆ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿತು. ಯುಪಿಎ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಆಂಧ್ರಪ್ರದೇಶದ ರೆಡ್ಡಿಗೆ ಪ್ರಮುಖ ಸ್ಥಾನ ಎಂದರೆ ತಪ್ಪಿಲ್ಲ.

ಅವರು ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ ಆರೋಗ್ಯಶ್ರೀ ಯೋಜನೆ ಅತ್ಯಂತ ಜನಪರ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಸ್ವತಃ ಒಬ್ಬ ವೈದ್ಯರಾಗಿದ್ದ ರೆಡ್ಡಿ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜಾರಿಗೆ ತಂದ ಆರೋಗ್ಯಶ್ರೀ ಯೋಜನೆ ಅವರ ರಾಜಕೀಯ ಜೀವನದ ಮಹತ್ವಾಕಾಂಕ್ಷೆ ಯೋಜನೆ ಕೂಡಾ ಹೌದು. ಜೊತೆಗೆ ರೈತರಿಗೆ ಶೇ. 3 ದರದಲ್ಲಿ ಸಾಲ. 2 ರುಪಾಯಿಗೆ ಕೆಜಿ ಅಕ್ಕಿ ಯೋಜನೆಗಳು ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದು ನಿಲ್ಲಿಸಿತು.

1949 ಜುಲೈ 8 ರಲ್ಲಿ ಕಡಪಾದ ಬಳಿಯ ಪುಲಿವೆಂದುಲ ಎಂಬಲ್ಲಿ ವೈಎಸ್ ರಾಜಾರೆಡ್ಡಿ ಮತ್ತು ಜಯಮ್ಮ ದಂಪತಿಗಳ ಉದರದಲ್ಲಿ ಜನನ. ಶಾಲಾ ದಿನಗಳ ಆಂಧ್ರಪ್ರದೇಶದಲ್ಲಿ ಮುಗಿಸಿ, ಕರ್ನಾಟಕದ ಗುಲ್ಬರ್ಗಾದಲ್ಲಿ ವೈದ್ಯಕೀಯ ಶಿಕ್ಷಣ ಪೂರೈಕೆ, ಕೆಲ ದಿನಗಳ ಕಾಲ ವೈದ್ಯಕೀಯ ಸೇವೆ. ವಿಜಯಲಕ್ಷ್ಮಿ ಎಂಬುವವರನ್ನು ಮದುವೆ. ವಿದ್ಯಾರ್ಥಿ ದಿನದಿಂದಲೇ ರಾಜಕೀಯ ಪ್ರೇರಿತರಾಗಿದ್ದ ರೆಡ್ಡಿ, ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡು ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು. 1980ರಲ್ಲಿ ವಿಧಾನಸಭೆ ಆಯ್ಕೆಯಾಗಿ ಗ್ರಾಮೀಣಾಭಿವೃದ್ಧಿ ಹಾಗೂ ವೈದ್ಯಕೀಯ ಸಚಿವರಾಗಿ ಸೇವೆ ಸಲ್ಲಿಕೆ. 9, 10, 11 ಮತ್ತು 12 ಲೋಕಸಭೆ ಚುನಾವಣೆಯಲ್ಲಿ ಕಡಪಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆ. ಆರು ಬಾರಿ ವಿಧಾನಸಭೆಗೆ ಆಯ್ಕೆ. ಆಂಧ್ರಪ್ರದೇಶ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ. ಅತ್ಯಂತ ಹಿನಾಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರಬಲವಾಗಿ ಸಂಘಟಿಸಿ, ಅಧಿಕಾರಕ್ಕೆ ತಂದ ಕೀರ್ತಿ ರೆಡ್ಡಿಗೆ ಸಲ್ಲಿಬೇಕು.

ರಾಜಶೇಖರರೆಡ್ಡಿ ಅವರಿಗೆ ಅನೇಕ ಹಗರಣಗಳು ಸುತ್ತಿಕೊಂಡಿದ್ದವು. ರಾಮಲಿಂಗರಾಜರೆಡ್ಡಿ ಮಾಲೀಕತ್ವದ ಸತ್ಯಂ ಕಂಪನಿ ದಿವಾಳಿಯಲ್ಲಿ ಮುಖ್ಯಮಂತ್ರಿ ರೆಡ್ಡಿ ಅವರ ಕೈವಾಡವಿದೆ ಎಂಬ ಆರೋಪ. ತೆಲುಗು ದೇಶಂ ನಾಯಕ ಚಂದ್ರಬಾಬು ನಾಯ್ಡು ಹಾಗೂ ಅವರ ಮಧ್ಯೆ ನಿತ್ಯ ಆರೋಪ, ಪ್ರತ್ಯಾರೋಪ. ಇದೇ ಕಾರಣಕ್ಕೆ ರಾಜ್ಯಾದ್ಯಂತ ಅವರ ವಿರುದ್ದ ಟಿಡಿಪಿ ಆಂದೋಲನ ನಡೆಸಿತು. ಅಲ್ಲದೆ ಕರ್ನಾಟಕದ ಪ್ರವಾಸೋಧ್ಯಮ ಸಚಿವ ಜಿ ಜನಾರ್ದನರೆಡ್ಡಿ ಮತ್ತು ರಾಜಶೇಖರರೆಡ್ಡಿ ಮಗ ಜಗನ್ಮೋಹನ್ ರೆಡ್ಡಿ ಪಾಲುಗಾರಿಕೆಯ ಬ್ರಾಹ್ಮಿಣಿ ಕಂಪನಿ ಹಾಗೂ ಕರ್ನಾಟಕದ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿಗೆ ಸಂಬಂಧಿಸಿದಂತೆ ಟಿಡಿಪಿ ಮತ್ತು ಕಾಂಗ್ರೆಸ್ ನಡುವೆ ಜಟಾಪಟಿ ಮುಂದುವರಿದೆ ಇತ್ತು.

ರೆಡ್ಡಿ ಜನಪ್ರಿಯ ಜನನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಸೋನಿಯಾ ಗಾಂಧಿ ಅವರ ಪರಮಾಪ್ತ ಆಗಿದ್ದ ರೆಡ್ಡಿ, ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಪ್ರಭಾವಿಗಳ ಸಾಲಿನಲ್ಲಿ ಇವರೂ ಕೂಡಾ ಒಬ್ಬರಾಗಿದ್ದರು. ಏನೇ ಆದರೂ ರೆಡ್ಡಿ ಸಾವು ಆಂದ್ರಪ್ರದೇಶಕ್ಕೆ ಮಾತ್ರವಲ್ಲ. ಇಡೀ ದೇಶಕ್ಕೆ ತುಂಬಲಾರದ ನಷ್ಟ. ಜನರ ಹಿತ ಬಯಸುವ ನಾಯಕನೊಬ್ಬನ ವಿಷಯದಲ್ಲಿ ದೇವರು ಇಷ್ಟೊಂದು ಕಟುಕನಾಗಬಾರದಿತ್ತು. ರೆಡ್ಡಿ ನಮ್ಮೊಂದಿಗಿಲ್ಲ, ಅವರ ಮಾಡಿದ ಕೆಲಸಗಳು ಮಾತ್ರ ಅಜರಾಮರ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ. ನೆಚ್ಚಿನ ನಾಯಕನನ್ನು ಕಳೆದುಕೊಂಡ ಜನತೆ ಶಾಂತಿಯಿಂದ ವರ್ತಿಸಬೇಕು. ಹುಟ್ಟು ಸಹಜ. ಸಾವು ನಿಶ್ಚಿತ. ಆದರೆ, ರೆಡ್ಡಿ ಅವರಿಗೆ ಸಾಯುವ ವಯಸ್ಸಂತೂ ಅಲ್ಲ. ಅಕಾಲಿಕ ಮರಣದಿಂದ ನಮ್ಮನ್ನಗಲಿದ್ದಾರೆ. ಅವರು ಆತ್ಮಕ್ಕೆ ಶಾಂತಿ ಕೋರಬೇಕಾಗಿರುವುದು ನಮ್ಮ ಕರ್ತವ್ಯ. ನಮ್ಮಿಂದಾಗುವುದು ಅಷ್ಟು ಮಾತ್ರ.

ವಿಡಿಯೋ:
ಡಾ. ವೈಎಸ್ಆರ್ ಇನ್ನಿಲ್ಲ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X