ಬ್ಯಾಂಕಿಂಗ್ ಲೋಕದ ದಿಗ್ಗಜ ಕೆಕೆ ಪೈ ನಿಧನ
ಕೆ ಕೆ ಪೈ ಅವರ ಆರೋಗ್ಯ ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಹದಗೆಟ್ಟಿತ್ತು. ಆಧುನಿಕ ಮಣಿಪಾಲ್ ದ ಬ್ರಹ್ಮ ಡಾ ಟಿ ಎಂ ಎ ಪೈ, ಕೇಂದ್ರ ಸರ್ಕಾರದ ಮಾಜಿ ಸಚಿವ ಟಿ ಎಂ ಪೈ ಅವರ ಬಳಿಕ ಮಣಿಪಾಲ್ ಸಂಸ್ಥೆಗಳ ಚುಕ್ಕಾಣಿ ಹಿಡಿದು ಮುನ್ನೆಡೆಸಿದ ಕೆಕೆ ಪೈ ಅವರು ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ಮುಪ್ಪಿಲ್ಲ ಎಂಬಂತೆ ತೀರಾ ಇತ್ತೀಚಿನವರೆಗೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಕೆಕೆ ಪೈ ಉಡುಪಿಯ ಪುರಸಭೆ ಅಧ್ಯಕ್ಷರಾಗಿ, ಸಿಂಡಿಕೇಟ್ ಬ್ಯಾಂಕ್ ಅಧ್ಯಕ್ಷ, ಮಣಿಪಾಲ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾಗಿ ಹೀಗೆ ಅನೇಕ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಅವರ ಪ್ರಮುಖ ಕ್ಷೇತ್ರ ಬ್ಯಾಂಕಿಂಗ್ ಆಗಿದ್ದರೂ ಕೃಷಿ, ಹೈನುಗಾರಿಕೆಯಿಂದ ಕಲೆ, ಸಾಹಿತ್ಯ, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳೆಲ್ಲದರಲ್ಲೂ ಅಧಿಕಾರವಾಣಿಯಿಂದ ಮಾತನಾಡಬಲ್ಲ ಪ್ರಾಜ್ಞರಾಗಿದ್ದರು. ಕೆಕೆ ಪೈ ಅವರ ಪತ್ನಿ ಸುಗುಣ ಪೈ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದರು. ಕೆಕೆ ಪೈ ಅವರ ಪುತ್ರರಾದ ಡಾ ಅರವಿಂದ ಪೈ, ಸುರೇಶ್ ಪೈ, ಮತ್ತು ಪುತ್ರಿಯರಾದ ಗೀತಾ, ಡಾ ಸುಧಾ ಪ್ರಭು ಅವರನ್ನು ಅಗಲಿದ್ದಾರೆ.
ಗುರುವಾರ ಮಧ್ಯಾಹ್ನದವರೆಗೆ ಎಂಜಿಎಂ ಕಾಲೇಜಿನ ಆವರಣದಲ್ಲಿ ಕೆಕೆ ಪೈ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ನಮನಕ್ಕಾಗಿ ಇಡಲಾಗುತ್ತಿದೆ. ಬಳಿಕ ಇಂದ್ರಾಳಿ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ಕೆಕೆ ಪೈ ನಿಧನಾರ್ಥ ಮಣಿಪಾಲ್ ಶಿಕ್ಷಣ ಸಮೂಹ ಸಂಸ್ಥೆಗಳ ಶಾಲಾ ಕಾಲೇಜುಗಳಿಗೆ ಜನವರಿ 15 ರಂದು ರಜೆ ಘೋಷಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)