ಅದೃಷ್ಟವೇ ಕೇರ್ ಮಾಡದ ಕೇರಂ ಚಾಂಪಿಯನ್
ದೊರೆಗಳಿಗೆ ಶಂಕರ್ ಮೊರೆಯೇಕೆ ಕೇಳುತ್ತಿಲ್ಲ?
ಶಂಕರ್ ಓದಿದ್ದು ಬರೀ ಎಂಟನೇ ಇಯತ್ತೆ. ಮನೆಯಲ್ಲಿದ್ದ ಬಡತನದಿಂದ ಮುಂದೆ ಓದುವುದಕ್ಕೆ ಬಿಡಲಿಲ್ಲ. ಸುಮಾರು ಹದಿನಾರು ವರ್ಷಗಳಿಂದ ಕೇರಂ ಟಕಟಕ ಶಬ್ದ ಕಿವಿಗೆ ಬೀಳದಿದ್ದರೆ ಶಂಕರ್ಗೆ ನಿದ್ದೆ ಹತ್ತುವುದಿಲ್ಲ. ವಿದ್ಯಾಭ್ಯಾಸ ನಿರ್ಲಕ್ಷಿಸಿದ್ದಕ್ಕೆ ಶಂಕರ್ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಕೇರಂ ಆಟ ಎಷ್ಟೇ ಜನಪ್ರಿಯವಾಗಿದ್ದರೂ ಜೀವಂತವಿರುವುದು ಕೆಳವರ್ಗದ ಜನರಲ್ಲಿ ಮಾತ್ರ. ಇವರಿಗೆ ದೊರೆಗಳನ್ನು ಯಾವ ರೀತಿಯಲ್ಲಿ ಸಹಾಯಕ್ಕಾಗಿ ಸಂಪರ್ಕಿಸಬೇಕು, ಯಾರಿಂದ ಶಿಫಾರಸು ಪತ್ರ ತರಬೇಕೆಂದೇ ಗೊತ್ತಿರುವುದಿಲ್ಲ. ಕೇರಂನಲ್ಲಿ ಎಷ್ಟೇ ಪ್ರಾವೀಣ್ಯತೆಯಿದ್ದರೂ ಸರಿಯಾದ ವಿದ್ಯಾಭ್ಯಾಸ, 'ಸರಿಯಾದವರ' ಶಿಫಾರಸು ಇಲ್ಲದಿದ್ದರೆ ಅದೃಷ್ಟವೆಂಬುದು ಹೆಗಲೆಂದೂ ಏರದು ಎಂಬುದು ತಡವಾಗಿಯಾದರೂ ಶಂಕರ್ಗೆ ಮನವರಿಕೆಯಾಗಿದೆ. ರಾಜ್ಯದಲ್ಲಿ ಕೇರಂ ಆಟಗಾರರ ಅಸೋಸಿಯೇಶನ್ ಮಾಡಬೇಕೆಂಬ ವಿಚಾರ ಇನ್ನೂ ಗರ್ಭಾವಸ್ಥೆಯಲ್ಲಿದೆ.
ಏನೇ ಆಗಲಿ, ತಡವಾಗಿಯಾದರೂ ಶಂಕರ್ ಅವರನ್ನು ರಾಜ್ಯ ಸರ್ಕಾರ ಸೂಕ್ತವಾಗಿ ಗೌರವಿಸಬೇಕು. ಈ ಪ್ರೋತ್ಸಾಹವೇ ಮುಂದೆ ಉಳಿದ ಆಟಗಾರರಿಗೂ ಉತ್ತೇಜನ ನೀಡಬಲ್ಲದು. ಕೇರಂ ಆಟ ಕ್ರಿಕೆಟ್ನಷ್ಟೇ ಜನಪ್ರಿಯವಾಗಬೇಕು, ಕ್ರಿಕೆಟ್ ಆಟಗಾರರಷ್ಟೇ ಹಣ ಪಡೆಯುವಂತಾಗಬೇಕು ಎಂಬ ಮಹದಾಸೆಯನ್ನು ಶಂಕರ್ ಹೊಂದಿದ್ದಾರೆ. ಯಾವುದೇ ರಾಜಕಾರಣಿಯ ಚಿಕ್ಕಪ್ಪನ ಮಗನೂ ಇದೇ ರೀತಿ ಸಾಧನೆ ಮಾಡಿದ್ದರೆ ರಾಜ್ಯ ಸರ್ಕಾರ ಇದೇ ರೀತಿ ಉದಾಸೀನ ಮಾಡುತ್ತಿತ್ತೇ?
ವಿಧಿಯ ಆಟವೆಂದರೆ ಇದೇ ಅಲ್ವೆ? ಅದೃಷ್ಟವೆಂಬುದು ಕೇರ್ ಕೂಡ ಮಾಡದೆ ಶಂಕರ್ರನ್ನು ಕೇರಂ ಕಾಯಿಯಾಗಿಸಿದೆ! ಶಂಕರ್ ಬದುಕಿನ ಜೀವಾಳವಾಗಿರುವ ಸೊನ್ನೆಯಂತೆ ಕಾಣುವ ಕೇರಂ ಕಾಯಿಗಳಿಗೂ ಒಂದು ಬೆಲೆ ಬರಲಿ.