ನಮಗಿದ್ದದ್ದೇ ಒಬ್ಬ ಕರೀಮಜ್ಜ.. ಅವನೂ ಹೋದನಲ್ಲ!
ಹಿರಿಯ ಗಾಂಧೀವಾದಿ, ಕವಿ, ಜಾನಪದ ಗಾರುಡಿಗ ಡಾ. ಎಸ್. ಕೆ. ಕರೀಂಖಾನ್(98) ಇನ್ನಿಲ್ಲ. ನೂರು ಸಮೀಪಿಸುವ ಮೊದಲೇ, ಅವರು ಸಾವನ್ನು ಸಮೀಪಿಸಿದ್ದಾರೆ. ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದ ಅವರು ಶನಿವಾರ(ಜು.29) ಕೊನೆ ಉಸಿರೆಳೆದರು.
ನಿಮೋನಿಯಾ ಮತ್ತು ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಅವರು, ನಗರದ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಬೆಳಗ್ಗೆ 11.50ರ ಸುಮಾರಿನಲ್ಲಿ ನಿಧನರಾದರು. ಜು.18ರಿಂದ ತುರ್ತು ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚೆಗೆ ಮೆದುಳಿನಲ್ಲಿ ಏನೋ ಸಮಸ್ಯೆಉಂಟಾಗಿ, ಅವರಿಗೆ ಬಾಹ್ಯ ಪ್ರಪಂಚದ ಅರಿವಿರಲಿಲ್ಲ.
ಕರೀಂಖಾನ್ ಅಂತ್ಯಕ್ರಿಯೆ ಇಂದು ಸಂಜೆ ನಡೆಯುವ ಸಾಧ್ಯತೆಗಳಿವೆ. ಅವರ ನಿಧನಕ್ಕೆ ನಾಡಿನ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕರೀಂಖಾನ್ ಬದುಕಿನ ಪುಟಗಳು
ಜನನ : 1908
ಜನ್ಮ ಸ್ಥಳ : ಸಕಲೇಶಪುರ(ಹಾಸನ ಜಿಲ್ಲೆ)
ತಂದೆ : ಆಫ್ಘಾನ್ನ ಸೈನಿಕ ಅಬ್ದರ್ ರೆಹಮನ್ ಖಾನ್
ತಾಯಿ : ಜೈನಬಿ(ಸೌದಿ ಅರೇಬಿಯಾ)
ವಿದ್ಯಾಭ್ಯಾಸ : 5ನೇ ತರಗತಿ
ವೈಶಿಷ್ಟ್ಯ : ಮದುವೆ-ಸಂಸಾರದ ಬಂಧನಗಳ ಬಿಟ್ಟು, ನಾಡಿಗಾಗಿ ನಿಂತವರು. ಈ ಬ್ರಹ್ಮಚಾರಿ ಹಳ್ಳಿಹಳ್ಳಿ ತಿರುಗಿ, ಮನೆಮನೆಗೆ ಭೇಟಿ ನೀಡಿ, ಜಾನಪದ ಸಂಪತ್ತನ್ನು ಕಲೆಹಾಕಿದವರು. ಭಗವದ್ಗೀತೆ, ಭಾಗವತ, ಭಜನೆ ಪದಗಳು, ಜಾನಪದ ಗೀತೆಗಳನ್ನು ಹಾಡುವಲ್ಲಿ ಎತ್ತಿದ ಕೈ.
ಹುದ್ದೆ-ಜವಾಬ್ದಾರಿ : ರಾಯಲ್ ಇಂಡಿಯನ್ ನೇವಿಯಲ್ಲಿ ಸ್ವಲ್ಪ ಕಾಲ ಸೇವೆ. ಜಾನಪದ ಮತ್ತು ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಸೇವೆ.
ಪತ್ರಿಕಾರಂಗ : ಲೋಕಮಿತ್ರ ಮತ್ತು ಅಂತರಂಗ ಪತ್ರಿಕೆಗಳ ಸಂಪಾದಕರಾಗಿ ಸೇವೆ.
ಸಾಹಿತ್ಯ : ಕವಿ, ಸಾಹಿತಿ, ನಾಟಕಕಾರ. ಶ್ರೀಕೃಷ್ಣ ಲೀಲೆ, ಹುಮಾಯುನ್, ಲೈಲಾ ಮಜ್ನು ಸೇರಿದಂತೆ ಎಂಭತ್ತಕ್ಕೂ ಅಧಿಕ ನಾಟಕಗಳ ರಚನೆ.
ದೇಶ ಪ್ರೇಮ : ಗಾಂಧಿ ಲೇಖನದಿಂದ ಪ್ರೇರಣೆ, ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯ ಪಾತ್ರ. ಆ ಪರಿಣಾಮ ಏಳು ಸಲ ಸೆರೆವಾಸ.
ಸಿನಿಮಾ ನಂಟು : ಸಿನಿಮಾ ಬಂಧ ದೊಡ್ಡದು. ಅದರಲ್ಲೂ ಪೌರಾಣಿಕ ಸಿನಿಮಾಗಳಿಗೆ ಅವರ ಹಾಡುಗಳು ನಿಜಕ್ಕೂ ಶೋಭೆ. ನಟವರ ಗಂಗಾಧರ, ವನಮಾಲಿ ವೈಕುಂಠಪತಿ, ನುಡಿಮನ ಶಿವಗುಣ, ಜಯಗೌರಿ ಜಗದೀಶ್ವರಿ.. ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಡರೆ, ಸತ್ಯಮೇವ ಜಯತೇ... ಗೀತೆಗಳು ಕರೀಂ ಖಾನ್ರನ್ನು ಜನಮಾನಸದಲ್ಲಿ ಶಾಶ್ವತವಾಗಿ ಉಳಿಸಿವೆ. ಸಂಭಾಷಣೆಕಾರರಾಗಿಯೂ ಗಮನಸೆಳೆದವರು.
ಪ್ರಶಸ್ತಿಗಳು : ನಾಡೋಜ, ಜನಪದ ಶ್ರೀ, ರಾಜ್ಯೋತ್ಸವ ಪ್ರಶಸ್ತಿ. ಗುಲ್ಬರ್ಗ ಮತ್ತು ಹಂಪಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಇತ್ಯಾದಿ.
ಹೆಗ್ಗಳಿಕೆ : ಧರ್ಮಕ್ಕಿಂತ ದೇಶ ದೊಡ್ಡದು ಎಂಬಂತೆ ಬದುಕಿದರು. ಮುಸ್ಲಿಂ ಆದರೂ ಹೆಮ್ಮೆಯ ಕನ್ನಡಿಗನಾಗಿ, ಭಾರತೀಯರಾಗಿ ಮೆರೆದವರು.
ವಿಪರ್ಯಾಸ : ನಾಡಿನ ಹೆಮ್ಮೆಯ ಅಜ್ಜನಿಗೆ ನಮ್ಮ ಸರ್ಕಾರ ಸ್ವಂತದ್ದೊಂದು ಸೂರು ನೀಡಲಿಲ್ಲ. ಅವರನ್ನು ನೋಡಿಕೊಳ್ಳಲು ನೇಮಕಮಾಡಲಾಗಿರುವ ನೌಕರನಿಗೆ, ಕಳೆದ 14ತಿಂಗಳಿಂದ ವೇತನ ನೀಡಿಲ್ಲ. ಸರ್ಕಾರದ ಅಸಡ್ಡೆಗಳಿಗೆ ಲೆಕ್ಕವಿಲ್ಲ.