ಈ ಧನ್ವಂತರಿ ಮುಟ್ಟಿದರೆ ಸಾಕು, ಮಾರಿಯಂಥಾ ರೋಗವೂ ಮಾಯ!
*ಸಿ.ಎಸ್.ಚರಣ್
‘ದೈವೀಶಕ್ತಿ ನನ್ನ ಬೆರಳುಗಳ ಮೂಲಕ ಸಂಚರಿಸಿ ರೋಗಿಗಳ ದೇಹ ತಲುಪಿ, ಆಗಿರುವ ತೊಂದರೆಯನ್ನು ಸರಿಪಡಿಸುತ್ತೆ....’
ಹಾಗಂತ ಫಿಲಿಫೈನ್ಸ್ನ ಅಲೆಕ್ಸ್ ಎಲ್.ಆರ್ಬಿಟೋ ಎಂಬಾತ ಜೀರ್ಣಿಸಿಕೊಳ್ಳಲಾರದಂತಹ ಇಂಗ್ಲಿಷಿನಲ್ಲಿ ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಭಾಷಣ ಹೊಡೆಯುತ್ತಿದ್ದರೆ ನಮ್ಮ ಮಂತ್ರಿ ಮಹೋದಯರು ಬಾಯಿಬಿಟ್ಟುಕೊಂಡು ಕೇಳುತ್ತಿದ್ದರು. ಅದಕ್ಕೂ ಒಂದು ದಿನ ಮುಂಚೆ ಚೌಡಯ್ಯ ಸ್ಮಾರಕ ಭವನದಲ್ಲೂ ಈ ಖ್ಯಾತ ‘ವೈದ್ಯ’ನ ಆಶೀರ್ವಾದ ಪಡೆಯಲು ನೂಕುನುಗ್ಗಲು. ಈತ ಎಷ್ಟರ ಮಟ್ಟಿಗೆ ವರ್ಲ್ಡ್ ಫೇಮಸ್ಸೆಂದರೆ, ಈತನ ಆಶೀರ್ವಾದದಿಂದಲೇ ಅದೆಷ್ಟೋ ಕಾಯಿಲೆಗಳು ಓಡೋಡಿಹೋಗುತ್ತವಂತೆ.
ಅದಕ್ಕೇ ನಮ್ಮ ವಿಧಾನಸಭಾಧ್ಯಕ್ಷ ವೆಂಕಟಪ್ಪ ಘೋಷಿಸಿದ್ದು- ಈಗ ಎಲ್ಲರೂ ಗುರುಗಳ ಆಶೀರ್ವಾದ ಪಡೆಯಬಹುದು’. ಮಂತ್ರಿ ಮಹೋದಯರಿಗೆ ವೆಂಕಟಪ್ಪನವರ ಕೊಠಡಿಯಲ್ಲಿ ವಿಶೇಷ ಆಶೀರ್ವಾದ. ಆಶೀರ್ವಾದ ಪಡೆದ ಮಹಿಳಾ ಮತ್ತು ಮಕ್ಕಳ ಸಚಿವೆ ಮೋಟಮ್ಮ ಆನಂದತುಂದಿಲರಾಗಿದ್ದರು. ಬಿ.ಬಿ.ಚಿಮ್ಮನಕಟ್ಟಿ ಉತ್ಸಾಹದಿಂದ ಚಿಮ್ಮುತ್ತಿದ್ದರು. ಇನ್ನು ಕೆಲವರು ‘ಏನೂ ಆಗಲೇ ಇಲ್ಲ’ ಅಂತ ಗೊಣಗುತ್ತಿದ್ದರು.
ಒಟ್ಟಿನಲ್ಲೀಗ ಬೆಂಗಳೂರಿನ ತುಂಬಾ ಮೋಡಿ ಕೈಗಳ ಆರ್ಬಿಟೋದೇ ಸುದ್ದಿ, ಸದ್ದು !
ಕತ್ತರಿಯಿಲ್ಲ, ಮಾತ್ರೆಯಿಲ್ಲ. ಇಂಜೆಕ್ಷನ್ನಂತೂ ಇಲ್ಲವೇ ಇಲ್ಲ. ಅದು ಹೇಗಪ್ಪಾ ಆರೋಗ್ಯ ಸರಿ ಹೋಗುತ್ತೆ? ಇದಕ್ಕೆ ಆರ್ಬಿಟೋ ಕೊಡುವ ಉತ್ತರ ಕೇಳಿ-
‘ನನ್ನ ಹಸ್ತ ಒಂದು ಅಯಸ್ಕಾಂತದಂತೆ. ಅದನ್ನು ತೊಂದರೆ ಈಡಾಗೀರುವ ಜಾಗದಲ್ಲಿ ಆಡಿಸಿದಾಗ, ರೋಗದ ಸಾರವನ್ನು ಹೀರಿಕೊಳ್ಳುತ್ತದೆ. ರೋಗಿಗಳು ರೋಗಮುಕ್ತರಾದಾಗ, ಅನುಭವಿಸುವ ನಿಸೂರು ಭಾವನೆಯ ಅರಿವೂ ಚಿಕಿತ್ಸೆ ನೀಡುವ ನನಗಾಗುತ್ತದೆ. ಈ ಹೀಲಿಂಗ್ ಎನರ್ಜಿಗೂ ಮಿತಿಯಿದ್ದೇ ಇರುತ್ತದೆ.
‘ಈ ರೀತಿಯ ಚಿಕಿತ್ಸೆಗೆ ಹಲವು ಆಯಾಮಗಳಿರುತ್ತವೆ. ಇದು ಪವಾಡ ಅಥವಾ ಮ್ಯಾಜಿಕ್ ಅಲ್ಲ. ಭಗವಂತ ದಯಪಾಲಿಸಿರುವ ಶಕ್ತಿಯ ಮೋಡಿ. ರೋಗಿಗಳನ್ನು ನೋಡಿದಾಗ ಅವರ ಬಗ್ಗೆ ಪ್ರೀತಿ, ಕರುಣೆ ಮತ್ತು ದಯೆ ಉಕ್ಕುತ್ತದೆ. ಆಗ ದೇವರನ್ನು ತುಂಬು ಹೃದಯದಿಂದ ಪ್ರಾರ್ಥಿಸುತ್ತೇನೆ. ದೈವೀ ಶಕ್ತಿಯ ಆವಾಹನೆಯಾಗುತ್ತದೆ. ಮಾನವ ಜೀವಕೋಶಗಳು ದೈವೀ ಮಿದುಳಿನ ಮಾತನ್ನು ಕೇಳುವುದರಿಂದ ರೋಗ ನಿವಾರಣೆ ಸಾಧ್ಯವೇ ಹೊರತು ನನ್ನ ಕೈವಾಡ ಇದರಲ್ಲಿ ಏನೇನೂ ಇಲ್ಲ’.
ಚೆಂದದ
ಆರೋಗ್ಯಕ್ಕೆ
ಆರ್ಬಿಟೊ
ಹೇಳುವ
ಮಂತ್ರಗಳು-
ದಿನಾ
ಬೆಳಗ್ಗೆ
ಎದ್ದು,
ಕನ್ನಡಿ
ಮುಂದೆ
ನಿಂತು
ನಿಮಗೆ
ನೀವೇ
ಹೇಳಿಕೊಳ್ಳಿ...
- ನಾನು ಸುಂದರವಾಗಿದ್ದೇನೆ
- ನಾನು ಆಕರ್ಷಕವಾಗಿದ್ದೇನೆ
- ನಾನು ಸೆಕ್ಸಿ ಆಗಿದ್ದೇನೆ
ಲ್ಯುಕೇಮಿಯಾದಿಂದ ಕ್ಯಾನ್ಸರ್ವರೆಗೆ, ಅಸ್ತಮಾದಿಂದ ಕಾಲರಾವರೆಗೆ ಸಕಲ ರೋಗಗಳಿಗೂ ಚಿಕಿತ್ಸೆ ಕೊಡುತ್ತಾರೆ ಆರ್ಬಿಟೊ.
ಆರ್ಬಿಟೊ ಉತ್ಸಾಹಕ್ಕೆ ಕೋರ್ಟಿನ ಅಡ್ಡಗೋಡೆ
ಇದು ಜನರಿಗೆ ಮಾಡುತ್ತಿರುವ ಮೋಸ. ಈ ಸೈಕಿಕ್ ಸರ್ಜರಿಯನ್ನು ನಿಷೇಧಿಸಿ ಅಂತ ನ್ಯಾಯವಾದಿ ದೊರೈರಾಜು ಎಸ್. ಶುಕ್ರವಾರ ನಗರ ಸಿವಿಲ್ ಕೋರ್ಟಿಗೆ ಹಾಕಿದ್ದ ಅರ್ಜಿಗೆ ಮನ್ನಣೆ ಸಿಕ್ಕಿದೆ. ನಗರ ಸಿವಿಲ್ ಕೋರ್ಟ್ ಇದೀಗ ಸೈಕಿಕ್ ಸರ್ಜರಿಗೆ ತಡೆಯಾಜ್ಞೆ ನೀಡಿದೆ. ಇದರನ್ವಯ ಲೀ ಮೆರಿಡಿಯನ್ನಲ್ಲಿ ಶನಿವಾರ ಈ ಸೈಕಿಕ್ ಸರ್ಜರಿಯ ವಿಚಾರ ಸಂಚಿರಣ ನಡೆಯಬೇಕಿತ್ತು. ಅದೀಗ ನಡೆಯುವಂತಿಲ್ಲ. ಅಷ್ಟೇ ಅಲ್ಲ, ಬೆಂಗಳೂರಲ್ಲಿ ಎಲ್ಲೂ ಆರ್ಬಿಟೊ ವಿಚಾರ ಸಂಕಿರಣ ನಡೆಸುವುದಾಗಲೀ, ಚಿಕಿತ್ಸೆ ಮಾಡುವುದಾಗಲೀ ಕೂಡದು.
ಅಷ್ಟೇ ಅಲ್ಲ, ಶಸ್ತ್ರ ಚಿಕಿತ್ಸೆಯ ಪ್ರದರ್ಶನ ವೀಕ್ಷಿಸಿ ವರದಿ ಕೊಡುವಂತೆ ಆರೋಗ್ಯ ಇಲಾಖೆ ಕಾರ್ಯದರ್ಶಿಗಳಿಗೆ ಹೈಕೋರ್ಟು ಆದೇಶ ಕೊಟ್ಟಿದೆ.
ಬರಿಗೈ ಸೈಕಿಕ್ ಸರ್ಜರಿ ಬೋಗಸ್ಸು. ಇದೊಂದು ವಂಚನೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ.ಎ.ಸಿ.ಸೀತಾರಾಂ ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ದೈವಿಕ ಚಿಕಿತ್ಸೆ ಅನ್ನೋದು ಶುದ್ಧ ಸುಳ್ಳು ಎಂಬುದು ಅವರ ಅಭಿಪ್ರಾಯ.
ಇಷ್ಟೆಲ್ಲಾ ವಿಘ್ನಗಳಿದ್ದರೂ ಆರ್ಬಿಟೊ ಇನ್ನೂ ವಿಶ್ವಾಸಗೆಟ್ಟಿಲ್ಲ. ಅವರಿನ್ನೂ ಗಂಟುಮೂಟೆ ಕಟ್ಟಿಲ್ಲ. ಬೆಂಗಳೂರಲ್ಲೇ ಇದ್ದಾರೆ. ಮುಂದಿನ ಅವರ ಚಿಕಿತ್ಸೆ ಎಲ್ಲಿ ಲಭ್ಯ ಅನ್ನುವುದು ಮಾತ್ರ ಸದ್ಯಕ್ಕೆ ಯಾರೂ ಹೇಳಲಾಗದು !