ಮನೆ ಮನೆ ಕಥೆಯಾದ ಕತೆಗಾರ್ತಿ ವೈದೇಹಿ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರಂತಹ ಕವಿಶ್ರೇಷ್ಠರನ್ನು ನೀಡಿದ ದಕ್ಷಿಣ ಕನ್ನಡ ಜಿಲ್ಲೆ ಹಲವು ಕವಯತ್ರಿಯರನ್ನೂ ನಾಡಿಗೆ ಕೊಡುಗೆಯಾಗಿ ಕೊಟ್ಟಿದೆ. ಇಂತಹ ಲೇಖಕಿಮಣಿಯರಲ್ಲಿ ವೈದೇಹಿ ಎಂಬ ಕಾವ್ಯನಾಮದಿಂದ ಖ್ಯಾತರಾದ ಜಾನಕಿ ಶ್ರೀನಿವಾಸ ಮೂರ್ತಿ ಅವರೂ ಒಬ್ಬರು.
12-2-1945ರಲ್ಲಿ ಕುಂದಾಪುರದಲ್ಲಿ ಜನಿಸಿದ ಇವರು ಸೇರಿದೂರು ಶಿವಮೊಗ್ಗ. ವೈದೇಹಿ ಅವರು ಕನ್ನಡ ಸಾಹಿತ್ಯದ ಬಹುತೇಕ ಎಲ್ಲ ಪ್ರಕಾರಗಳಲ್ಲೂ ಸಾಹಿತ್ಯ ರಚಿಸಿದ್ದಾರೆ. ಇವರ ಅನೇಕ ಕತೆ, ಕವಿತೆ, ಲೇಖನಗಳು ಇಂಗ್ಲಿಷ್ ಸೇರಿದಂತೆ ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ. ಸ್ವತಃ ವೈದೇಹಿಯವರು ಹಲವು ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ.
ಮರ ಗಿಡ ಬಳ್ಳಿ, ಗೋಲ, ಅಂತರಂಗದ ಪುಟವೇ ಮೊದಲಾದ ಕಥಾ ಸಂಕಲನ, ಬಿಂದು ಬಿಂದಿಗೆ, ಪಾರಿಜಾತ ಮೊದಲಾದ ಕವನ ಸಂಕಲನ, ಅಸ್ಪೃಶ್ಯರು ಮೊದಲಾದ ಕಾದಂಬರಿ, ಧಾಂ ಧೂಂ ಸುಂಟರಗಾಳಿ, ಮೂಕನ ಮಕ್ಕಳು, ನಾಯಿಮರಿ ನಾಟಕ ಮೊದಲಾದ ಮಕ್ಕಳ ನಾಟಕಗಳು, ಮಲ್ಲಿನಾಥನ ಧ್ಯಾನ, ಸೇಡಿಯಾಪು ನೆನಪುಗಳು ಮೊದಲಾದ ಲೇಖನ ಸಂಗ್ರಹ, ನೆನಪಿನಂಗಳದಲ್ಲಿ ಮುತ್ಸಂಜೆ ಹೊತ್ತು, ಭಾರತೀಯ ಮಹಿಳೆಯರ ಸ್ವಾತಂತ್ರ್ಯ ಹೋರಾಟ, ಸಂಗೀತ ಸಂವಾದ ಮೊದಲಾದ ಅನುವಾದ ಕೃತಿಗಳನ್ನು ಇವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
ಮೈಸೂರು ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವ ವಿದ್ಯಾಲಯ, ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯ ಪಠ್ಯಗಳಲ್ಲಿ ಇವರ ಕೃತಿಗಳು ಪಠ್ಯವಾಗಿವೆ. ಗೀತಾ ದೇಸಾಯಿ ದತ್ತಿನಿಧಿ ಪ್ರಶಸಿ, ಎಂ.ಕೆ. ಇಂದಿರಾ ಪ್ರಶಸ್ತಿ, ಕಥಾ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಯೇ ಮೊದಲಾದ ಹತ್ತು ಹಲವು ಪ್ರಶಸ್ತಿ ಗಳಿಸಿರುವ ವೈದೇಹಿ ಅವರನ್ನು ದಕ್ಷಿಣ ಕನ್ನಡ ಕನ್ನಡಿಗರ ಬಳಗ ಭಾರ್ಗವ ಪ್ರಶಸ್ತಿ ನೀಡಿ ಗೌರವಿಸಿದೆ.