ಬಿಷಪ್ಕಾಟನ್ ಚಿನಕುರಳಿಗಳಿಗೆ ಪ್ರಶಸ್ತಿ
ಬೆಂಗಳೂರು : ಜುಲೈ 15, ಶನಿವಾರ, ನಗರದ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಚಿನುಕುರಳಿ ಚಿಣ್ಣರ ಉತ್ಸವ. ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ ಏರ್ಪಡಿಸಿದ್ದ ಕ್ವಿಜ್ ಐಟಿ.ಕಾಂ- 2000 ಸ್ಪರ್ಧೆಯಲ್ಲಿ ಭಾಗವಹಿಸುವ ಸಂಭ್ರಮ ಅವರೆಲ್ಲರದು.
ಸ್ಪರ್ಧೆಗೆ ಹೆಸರು ನಮೂದಿಸಿದ್ದುದು 820 ತಂಡಗಳು, ಅಂದರೆ 1640 ಸ್ಪರ್ಧಿಗಳು. ಮುಖ್ಯಮಂತ್ರಿ ಕೃಷ್ಣ ಚಿನಕುರಳಿಗಳಿಗೆ ಶುಭಕೋರಿ ದೆಲ್ಲಿಯಿಂದಲೇ ಗ್ರೀಟಿಂಗ್ಸ್ ಕಳಿಸಿದ್ದರು. ಇಂಡಿಯಾ ಇನ್ಫೋ. ಕಾಂನ ಸಹ ಸ್ಥಾಪಕರು ಹಾಗೂ ಮುಖ್ಯ ತಾಂತ್ರಿಕ ಅಧಿಕಾರಿಗಳಾದ ಬಿ.ಜಿ.ಮಹೇಶ್ ಹಾಗೂ ಚೆನ್ನೈನ ಟಿಸಿಎಸ್ ಮುಖ್ಯಸ್ಥ ಜಯರಾಮಕೃಷ್ಣನ್ ಸ್ಪರ್ಧೆ ನಡೆಯುವಾಗ ಹಾಜರಿದ್ದರು.
ಕ್ವಿಜ್ ನಡೆಸಿಕೊಟ್ಟಿದ್ದು ಕ್ವಿಜ್ ಬ್ರೆೃನ್.ಕಾಂನ ಗಿರಿ ಬಾಲ ಸುಬ್ರಮಣ್ಯಂ. ಇಂಟರ್ನೆಟ್, ಈ- ಕಾಮರ್ಸ್, ಬ್ಯಾಂಕಿಂಗ್, ಸಿನಿಮಾ, ಸಾಹಿತ್ಯ, ಸಂಗೀತ, ಸಂಸ್ಕೃತಿ ಮುಂತಾಗಿ ಎಲ್ಲಾ ಕ್ಷೇತ್ರಗಳ ಪ್ರಶ್ನೆಗಳು ಚಟಚಟನೆ ಸಿಡಿದವು ಕ್ವಿಜ್ ಮಾಸ್ಟರ್ ಬತ್ತಳಿಕೆಯಿಂದ. ಕ್ವಿಜ್ ಮಾಸ್ಟರ್ ಎಷ್ಟು ಕೆಣಕಿದರೂ ಸ್ಫರ್ಧಿಗಳು ಕಿಂಚಿತ್ತೂ ತಿಣುಕಲಿಲ್ಲ . ಕೆಲವೊಮ್ಮೆ ಕ್ವಿಜ್ ಮಾಸ್ಟರ್ ಮೂಗಿನ ಮೇಲೆ ಬೆರಳಿಟ್ಟಿದ್ದೂ ಉಂಟು.
ಪೂರ್ವಭಾವಿ ಸುತ್ತುಗಳು ಶುರುವಾದದ್ದು ಮಧ್ಯಾಹ್ನ 1.30 ರ ಹೊತ್ತಿಗೆ. ಇಳಿ ಮಧ್ಯಾಹ್ನ 3.30 ರ ಸುಮಾರಿಗೆ ಫೈನಲ್ಸ್ ತುರುಸು ಮೊದಲಾಯಿತು. ಇಂದಿರಾನಗರದ ಎನ್ಪಿಎಸ್ ಶಾಲೆಯ ಎರಡು ತಂಡಗಳು, ಬಿಷಪ್ ಕಾಟನ್ ಬಾಲಕರ ಶಾಲೆಯ ಎರಡು ತಂಡಗಳು ಹಾಗೂ ರಾಜಾಜಿ ನಗರದ ಎನ್ಪಿಎಸ್ ಮತ್ತು ಮಲ್ಯ ಅದಿತಿ ಶಾಲೆಯ ತಲಾ ಒಂದು ತಂಡ ಫೈನಲ್ಗೆ ಅರ್ಹತೆ ಪಡೆದಿದ್ದವು.
ಕ್ವಿಜ್ ಐಟಿ.ಕಾಂ - 1999 ಸಾಲಿನ ಸ್ಪರ್ಧೆಯಲ್ಲಿ ಚಾಂಪಿಯನ್ಷಿಪ್ ಗಳಿಸಿದ್ದ ಬಿಷಪ್ ಕಾಟನ್ ಶಾಲೆಯ ಹುಡುಗರನ್ನು ಇಂದಿರಾನಗರ ಎನ್ಪಿಎಸ್ ಶಾಲೆಯ ಚಿನಕುರಳಿಗಳು ಮೊದಲ ಎರಡು ಸುತ್ತುಗಳಲ್ಲಿ ಹಿಂದಕ್ಕೆ ಹಾಕಿ, ಮುನ್ನಡೆ ಗಳಿಸಿದ್ದರು. ಮೂರು ಮತ್ತು ನಾಲ್ಕನೇ ಸುತ್ತುಗಳಲ್ಲಿ ಬಿಷಪ್ ಕಾಟನ್- ಎ ತಂಡ ಚೇತೋಹಾರಿ ಮುನ್ನಡೆ ಪಡೆಯುವುದರ ಜೊತೆಗೆ ಆರು ಸುತ್ತುಗಳ ಕ್ವಿಜ್ನಲ್ಲಿ ಮೊದಲಿಗರಾದರು. ಬಿಷಪ್ ಕಾಟನ್- ಬಿ ತಂಡ ಎರಡನೆಯವರಾದರು. ಇಂದಿರಾನಗರದ ಎನ್ಪಿಎಸ್ ವಿದ್ಯಾರ್ಥಿಗಳು ಮೂರನೇ ಸ್ಥಾನಕ್ಕೆ ತೃಪ್ತರಾದರು.
ಮೊದಲ ಬಹುಮಾನವಾದ 14 ಸಾವಿರ ರುಪಾಯಿಗಳ ನಗದು, 12 ಡಿಜಿಟ್ನ ಕ್ಯಾಲುಕ್ಯುಲೇಟರ್, ಟಿ ಷರ್ಟು, ಆಕರ್ಷಕ ಟ್ರೋಫಿ, ಟೈಟಾನ್ ಗಡಿಯಾರ, ವರ್ಲ್ಡ್ ಅಟ್ಲಾಸ್ನ ಸಿಡಿ- ರೋಮ್ ಹಾಗೂ 150 ತಾಸುಗಳ ಅವಧಿಯ ಬಿಪಿಎಲ್ ಇಂಟರ್ನೆಟ್ ಪ್ಯಾಕ್ಗಳನ್ನು ಬಿಷಪ್ ಕಾಟನ್- ಎ ತಂಡದ ಹುಡುಗರಾದ ಆದಿತ್ಯ ಮತ್ತು ಶ್ಯಾಮ್ ಬ್ಯಾಗ್ಗಿಳಿಸಿದರು. ಎರಡನೇ ಸ್ಥಾನ ಗಳಿಸಿದವರು ರುಪಾಯಿ 10 ಸಾವಿರ ಹಾಗೂ ಮೂರನೆ ಸ್ಥಾನದವರು 8 ಸಾವಿರ ರುಪಾಯಿ ನಗದನ್ನು ಪಡೆದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳೂ ಪ್ರಮಾಣ ಪತ್ರ ಪಡೆದರು.
ಕ್ವಿಜ್ ಐಟಿ. ಕಾಂ ಸ್ಪರ್ಧೆಯು ಚೆನ್ನೈ ಹಾಗೂ ತಿರುವನಂತಪುರದಲ್ಲೂ ನಡೆಯಲಿದೆ. ಆಗಸ್ಟ್ 23 ರೊಳಗೆ ಚೆನ್ನೈ ಸ್ಪರ್ಧಿಗಳು ಹೆಸರು ನೋಂದಾವಣೆ ಮಾಡಬೇಕು. ತಿರುವನಂತಪುರದ ಚಿನಕುರಳಿಗಳಿಗೆ ಹೆಸರು ನೋಂದಾವಣೆಗೆ ಸೆಪ್ಟಂಬರ್ 20 ರವರೆಗೂ ಅವಕಾಶವಿದೆ. ಹೆಚ್ಚಿನ ವಿವರಗಳು ಕೆಳಗಿನ ವಿಳಾಸಗಳಲ್ಲಿ -
ಚೆನ್ನೈನಲ್ಲಿ - ಉಮ ಅಥವಾ ನಿಷಾ, ಟಾಟಾ ಕನ್ಸಲ್ಟಿಂಗ್ ಸರ್ವೀಸಸ್, 185- 188 ಲಾಯ್ಡ್ಸ್ ರಸ್ತೆ , ಚೆನ್ನೈ- 600 086.
ತಿರುವನಂತಪುರದಲ್ಲಿ - ಬೃಂದಾ ರಾಣಿ, ಟಾಟಾ ಕನ್ಸಲ್ಟಿಂಗ್ ಸರ್ವೀಸಸ್, ಟೆಕ್ನೋಪಾರ್ಕ್ ಕ್ಯಾಂಪಸ್, ಕರಿಯ ವಟ್ಟಂ, ತಿರುವನಂತಪುರಂ- 695 581.
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications