ಕನ್ನಡ ರಂಗಭೂಮಿ ಇನ್ನೂ ಜೀವಂತಿಕೆಯಿಂದ ಕೂಡಿದೆ - ಲಕ್ಷ್ಮೀ ಚಂದ್ರಶೇಖರ್
*ಸಂದರ್ಶನ : ಎಂ. ಆರ್. ದತ್ತಾತ್ರಿ, ಕ್ಯಾಲಿಫೋರ್ನಿಯಾ
ಮಾಯಾಮೃಗದ ವಿಶಿಷ್ಟ ಪಾತ್ರದಿಂದ ಕರ್ನಾಟಕದಲ್ಲಿ ಮನೆಮಾತಾಗಿರುವ ಹಾಗೂ ಸುಮಾರು ಮೂರು ದಶಕಗಳಿಂದ ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿರುವ ಕ್ರಿಯಾಶೀಲ ಪ್ರತಿಭೆ- ಲಕ್ಷ್ಮೀ ಚಂದ್ರಶೇಖರ್. ಹೆಸರಾಂತ ‘ಸಮುದಾಯ’ ದಲ್ಲಿ ಸಕ್ರಿಯ ಪಾತ್ರವಹಿಸಿದ ಅನುಭವವೂ ಅವರ ಬೆನ್ನಿಗೆದೆ.
ಮೈಸೂರು ವಿಶ್ವ ವಿದ್ಯಾಲಯ ಹಾಗೂ ಇಂಗ್ಲೆಂಡಿನ ಲೀಡ್ಸ್ ವಿವಿಯಲ್ಲಿ ಇಂಗ್ಲಿಷ್ ಭಾಷಾ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಲಕ್ಷ್ಮಿ ಚಂದ್ರಶೇಖರ್ ರಂಗಭೂಮಿಯ ನಂಟಿನೊಂದಿಗೆ ಬರವಣಿಗೆಯನ್ನೂ ಕೈಗೂಡಿಸಿಕೊಂಡವರು. ಹಿಂದೂ ಪತ್ರಿಕೆಗೆ ರಂಗಭೂಮಿಯ ಬಗ್ಗೆ ಅಂಕಣಕಾರರೂ ಹೌದು. ಇತ್ತೀಚೆಗೆ ಕ್ಯಾಲಿಫೋರ್ನಿಯಾದ ಸನ್ನಿವೇಲ್ನಲ್ಲಿ ನಡೆದ ವಸಂತೋತ್ಸವದಲ್ಲಿ ‘ಇವಳೊಬ್ಬ ಹೆಂಗಸು’ ಎಂಬ ರೂಪಕವನ್ನು ಪ್ರದರ್ಶಿಸಿ, ಪ್ರೇಕ್ಷಕರ ಮನ ಸೂರೆಗೊಂಡರು. ಅದೇ ಸಂದರ್ಭದಲ್ಲಿ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.
- ಕನ್ನಡ ರಂಗಭೂಮಿಯ ಸದ್ಯದ ಸ್ಥಿತಿಗತಿಗಳ ಬಗ್ಗೆ ತಿಳಿಸುತ್ತೀರಾ ?
ಅತ್ಯುತ್ತಮ ನಾಟಕಕಾರರು ಕನ್ನಡದಲ್ಲಿ ಮೂಡಿ ಬರುತ್ತಿದ್ದಾರೆ. ಬೇಸರದ ಸಂಗತಿಯೆಂದರೆ ಪ್ರಾಯೋಜಕರ ಸಂಖ್ಯೆ ಕಡಿಮೆಯಾಗುತ್ತಿರುವುದು. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿಯೂ ನಾವು ಹಿಂದೆ ಬಿದ್ದಿದ್ದು, ನಮ್ಮ ಆರ್ಥಿಕ ಸ್ವಾವಲಂಬನೆಯ ಸಮಸ್ಯೆಯಲ್ಲಿ ಬಿದ್ದಿದ್ದೇವೆ. ಪ್ರಾಯೋಜಕರಿಗೆ ದೂರದರ್ಶನ ಬಹು ಜನರನ್ನು ತಲುಪುವ ಅತ್ಯುತ್ತಮ ಮಾಧ್ಯಮವಾಗಿ ನಿರ್ಧಾರಿತವಾಗಿಯೇ ನಾಟಕರಂಗ ಹಿಂದೆ ಬಿದ್ದಿದೆ.
ಮರಾಠಿಯಿಂದ ಬಂದ ಕೆಲವು ಅತ್ಯುತ್ತಮ ನಾಟಕಗಳನ್ನು ನಮ್ಮೊಂದಿಗೆ ಹೋಲಿಸಿದಾಗ ಅವು ಬಹಳ ಸಾಮಾನ್ಯವಾದವು ಎನಿಸುತ್ತವೆ. ನಾಟಕದ ಸಂಖ್ಯೆ ಮತ್ತು ಪ್ರೇಕ್ಷಕರ ಸಂಖ್ಯೆ ಮರಾಠಿಗೆ ಹೋಲಿಸಿದಲ್ಲಿ ನಮ್ಮಲ್ಲಿ ಕಡಿಮೆಯಾದರೂ ಗುಣಮಟ್ಟದಲ್ಲಿ ಕನ್ನಡ ರಂಗಭೂಮಿ ಖಂಡಿತಾ ಮರಾಠಿಗಿಂತ ಮೇಲ್ಮಟ್ಟದಲ್ಲಿದೆ. ಪ್ರಸನ್ನ , ಇಕ್ಬಾಲ್ , ಬಸವಲಿಂಗಯ್ಯ ಮುಂತಾದ ನಿರ್ದೇಶಕರ ನಾಟಕಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವಂತಹವು.
‘ಶಿವಸಂಚಾರ್’ ಎಂದು ಸಿದ್ಧಗಂಗಾ ಮಠದವರ ಒಂದು ತಂಡ ಇದೇ ಉದ್ದೇಶ ಹೊಂದಿದ್ದು ಬಹಳ ಪ್ರಗತಿಯನ್ನು ಸಾಧಿಸುತ್ತಿದೆ. ರಂಗಾಯಣ, ಸೃಷ್ಟಿ ನೀನಾಸಂ ತಂಡಗಳು ಊರಿಂದ ಊರಿಗೆ ಸಂಚರಿಸಿ ನಾಟಕ ಪ್ರದರ್ಶನಗಳ ಮೂಲಕ ಬಹಳಷ್ಟು ಪ್ರೇಕ್ಷಕರನ್ನು ತಲುಪುತ್ತಿವೆ. ದೂರದರ್ಶನದ ಪ್ರಾರಂಭಿಕ ದಿನಗಳ ಆಕರ್ಷಣೆಗಳು ಕಳೆದು ಜನ ಬದಲಾವಣೆ ಬಯಸುತ್ತಿರುವುದು ಸ್ಪಷ್ಟವಾಗಿ ವ್ಯಕ್ತವಾಗುತ್ತಿದೆ ಹಾಗೂ ಜನರನ್ನು ಮತ್ತೆ ಆಕರ್ಷಿಸಲು ಇದು ನಾಟಕರಂಗಕ್ಕೆ ಸುವರ್ಣಾವಕಾಶವಾಗಿ ಒದಗಿ ಬರುತ್ತಿದೆ.
ಮುಖಪುಟ / ಸಾಹಿತ್ಯ ಸೊಗಡು