ನಿಸ್ವಾರ್ಥ ಸಮಾಜ ಸೇವಾಕರ್ತ ಎಂ.ಎಸ್. ಜನಾರ್ದನ ಕಾರಂತ
ಉಡುಪಿ ತಾಲೂಕಿನ ಮಣೂರು ಗ್ರಾಮದಲ್ಲಿ 18-9-1937ರಲ್ಲಿ ಜನಿಸಿದ ಎಂ.ಎಸ್. ಜನಾರ್ದನ ಕಾರಂತರು ಓದಿದ್ದು ಇಂಟರ್ ಮೀಡಿಯಟ್ (ಸೀ) ವರೆಗೆ ಆದರೂ ಬದುಕಿನುದ್ದಕ್ಕೂ ಪರೋಪಕಾರದ ವ್ಯಕ್ತಿತ್ವ ರೂಢಿಸಿಕೊಂಡವರು.
ಬೆಂಗಳೂರಿನ ದಕ್ಷಿಣ ಕನ್ನಡಿಗರ ಅನೇಕ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿ ದುಡಿಯುತ್ತಿರುವ ಜನಾರ್ದನ ಕಾರಂತರು ಬೆಂಗಳೂರು ಬುಲ್ಟೆಂಪಲ್ ರಸ್ತೆಯಲ್ಲಿರುವ ದಕ್ಷಿಣ ಕನ್ನಡ ಕೂಟ ಬ್ರಾಹ್ಮಣರ ಮಿತ್ರ ಮಂಡಳಿ (ಶ್ರೀ ಗುರು ನರಸಿಂಹ ಕಲ್ಯಾಣ ಮಂದಿರ)ಯ ಅಧ್ಯಕ್ಷರು. ಹೊಟೆಲ್ ಉದ್ದಿಮೆದಾರರ ಸಹಕಾರ ಬ್ಯಾಂಕಿನ ನಿರ್ದೇಶಕರು.
ಬ್ಯಾಂಕಿನ ಅಧ್ಯಕ್ಷರಾಗಿ, ಸಾಲ ವಸೂಲಾತಿ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಇವರು ಈ ಇಳಿ ವಯಸ್ಸಿನಲ್ಲೂ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೂಲತಃ ಹೊಟೆಲ್ ಉದ್ಯಮಿಯಾದ ಕಾರಂತರು, ಬೆಂಗಳೂರು ಹೊಟೆಲ್ಗಳ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರಾಗಿ, ಕೂಟ ಮಹಾ ಜಗತ್ತಿನ ಕೇಂದ್ರ ಸಮಿತಿ ಸದಸ್ಯರಾಗಿಯೂ ದುಡಿದಿದ್ದಾರೆ. ದಕ್ಷಿಣ ಕನ್ನಡದ ಹಿರಿಯ - ಕಿರಿಯರ ನಡುವಿನ ಸೇತುವಾಗಿರುವ ಕಾರಂತರು ವೈದ್ಯಕೀಯ ಶಿಬಿರ, ಪ್ರತಿಭಾ ಪುರಸ್ಕಾರ ಮೊದಲಾದ ಕಾರ್ಯಕ್ರಮಗಳನ್ನೂ ಏರ್ಪಡಿಸಿದ್ದಾರೆ.
ಯಾವುದೇ ಸದ್ದು ಗದ್ದಲವಿಲ್ಲದೇ, ನಿಸ್ವಾರ್ಥವಾಗಿ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕಾರಂತರು ಎಲೆ ಮರೆಯ ಕಾಯಿ ಇದ್ದಂತೆ. ಇವರ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿ ದಕ್ಷಿಣ ಕನ್ನಡ ಕನ್ನಡಿಗರ ವೇದಿಕೆ (ಸಮಾಜ ಸೇವಾ ವಿಭಾಗ) ಭಾರ್ಗವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.