ಒಳ್ಳೇ ಹಸ್ತಗುಣವುಳ್ಳ ವೈದ್ಯ : ಡಾ. ಎಚ್.ಎಸ್. ಹಂದೆ
ವೈದ್ಯರಿಗೆ ಹಸ್ತಗುಣ ಮುಖ್ಯ. ಕೆಲವು ವೈದ್ಯರು ಔಷಧಿ ನೀಡುವುದೇ ಬೇಡ, ಮುಟ್ಟಿ ಪರೀಕ್ಷಿಸಿದರೇ, ರೋಗ ವಾಸಿಯಾಗುತ್ತದೆ ಎನ್ನುವುದು ಕೆಲವು ರೋಗಿಗಳ ನಂಬಿಕೆ. ಇಂತಹ ನಂಬಿಕೆ ಉಳಿಸಿಕೊಂಡ ವೈದ್ಯಶ್ರೇಷ್ಠರಲ್ಲಿ ಡಾ. ಎಚ್.ಎಸ್. ಹಂದೆ ಅವರ ಹೆಸರೂ ಸೇರಿದೆ.
ಉಡುಪಿ ತಾಲೂಕಿನ ಹಂದಟ್ಟು ಗ್ರಾಮದಲ್ಲಿ 4-7-1933ರಲ್ಲಿ ಜನಿಸಿದ ಹಂದೆ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದು ಕೋಟ ಮತ್ತು ಕುಂದಾಪುರದಲ್ಲಿ. ಮೈಸೂರು ವಿ.ವಿ.ಯಲ್ಲಿ ಎಂ.ಬಿ.ಬಿ.ಎಸ್. ಪದವಿ ಪಡೆದ ಹಂದೆ ಅವರು, ಆಂಧ್ರ ವಿಶ್ವವಿದ್ಯಾಲಯದಿಂದ ಎಂ.ಡಿ. ಪದವಿ ಪಡೆದರು. 1962ರಿಂದ 1991ರವರೆಗೆ ಕರ್ನಾಟಕ ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಹಾಗೂ ರಾಜ್ಯದ ನಾಲ್ಕು ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ ಇವರು, 1991ರಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜ್ ಪ್ರಾಂಶುಪಾಲರಾಗಿ ನಿವೃತ್ತರಾದರು.
ಅದೇ ವರ್ಷ ಬ್ಯಾಂಕಾಕ್ನಲ್ಲಿ ಜರುಗಿದ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಏಡ್ಸ್ ಬಗೆಗಿನ ಕಾರ್ಯಾಗಾರದಲ್ಲಿ ಭಾರತವನ್ನು ಪ್ರತಿನಿಧಿಸಿದರು. ಪ್ರಸ್ತುತ ಎಚ್.ಎ.ಎಲ್. ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಪದವಿಗೆ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೂಟ ಮಹಾ ಜಗತ್ತು ಇವರಿಗೆ ನರಸಿಂಹ ಪ್ರಶಸ್ತಿ ನೀಡಿ ಗೌರವಿಸಿತ್ತು. ಈ ಸಾಲಿನ ಭಾರ್ಗವ ಪ್ರಶಸ್ತಿ (ವೈದ್ಯಕೀಯ ವಿಜ್ಞಾನ ವಿಭಾಗ) ನೀಡಿ ದಕ್ಷಿಣ ಕನ್ನಡ ಕನ್ನಡಿಗರ ವೇದಿಕೆ ಇವರನ್ನು ಸನ್ಮಾನಿಸಿದೆ. ಕೂಟ ಮಹಾ ಜಗತ್ತು ಪ್ರತಿವರ್ಷ ಏರ್ಪಡಿಸುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಜ್ಞ ವೈದ್ಯರಾಗಿ ಪಾಲ್ಗೊಳ್ಳುವ ಹಂದೆ ಅವರು, ಜನಪ್ರಿಯ ವೈದ್ಯರು.
ರೋಗಿಗಳನ್ನು ನಗುನಗುತ್ತಾ ಮಾತಾಡಿಸುತ್ತಲೇ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಹಂದೆ ಅವರು ತಮ್ಮ ಸರಳ ಹಾಗೂ ಸಜ್ಜನಿಕೆಯ ನಡೆವಳಿಕೆಯಿಂದಲೇ ರೋಗಿಯ ಮಾನಸಿಕ ತಳಮಳವನ್ನು ಗುರುತಿಸಿ, ನಿವಾರಿಸುತ್ತಾರೆ. ಪ್ರಶಸ್ತಿ, ಸನ್ಮಾನಗಳಿಂದ ಮಾರು ದೂರು ಸರಿಯುವ ಹಂದೆಯವರನ್ನು ಪ್ರಶಸ್ತಿಗಳು ಹುಡುಕಿಕೊಂಡೇ ಬಂದಿವೆ.