ರಂಗಭೂಮಿಗೆ ರಂಗುತಂದ ಕೆ. ಆನಂದ ಗಾಣಿಗ
ಅರ್ಧ ಶತಮಾನಗಳ ಕಾಲ ಹವ್ಯಾಸಿ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕೆ. ಆನಂದ ಗಾಣಿಗರು ಉಡುಪಿ ಜಿಲ್ಲೆಯ ಕುತ್ಪಾಡಿಯವರು. 1-7-1936ರಲ್ಲಿ ಹುಟ್ಟಿದ ಗಾಣಿಗರು ಜೀವವಿಮಾ ನಿಗಮದಲ್ಲಿ 42 ವರ್ಷಗಳ ಕಾಲ ಸೇವೆ ಸಲ್ಲಿಸಿ. ಹಾಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
ಬಹುಮುಖ ಪ್ರತಿಭೆಯ ಗಾಣಿಗರು, ನಟ, ನಿರ್ದೇಶಕ, ನಾಟಕಕಾರರಷ್ಟೇ ಅಲ್ಲದೆ ಸಂಘಟನ ಕಾರರೂ ಹೌದು. ನೂರಾರು ನಾಟಕಗಳಲ್ಲಿ 600ಕ್ಕೂ ಹೆಚ್ಚು ಪ್ರಯೋಗಗಳಲ್ಲಿ ಅಭಿನಯಿಸಿರುವ ಗಾಣಿಗರು, ಎರಡು ಕನ್ನಡ ಹಾಗೂ 3 ತುಳು ನಾಟಕಗಳನ್ನೂ ರಚಿಸಿದ್ದಾರೆ. 25ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಹಲವಾರು ಪತ್ರಿಕೆಗಳಲ್ಲಿ ಅಂಕಣಕಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಹವ್ಯಾಸಿ ಯಕ್ಷಗಾನ ರಂಗದಲ್ಲಿ ವೇಷಧಾರಿಯಾಗಿ, ಅರ್ಥಧಾರಿಯಾಗಿ, ಕೌರವ, ಕರ್ಣ, ಭೀಮ, ಭೀಷ್ಮ, ಈಶ್ವರ, ಹಿರಣ್ಯ ಕಶಿಪು, ಅರ್ಜುನ, ಹರಿಶ್ಚಂದ್ರ ಮೊದಲಾದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಕೋಟಿ ಚೆನ್ನಯ್ಯ, ಪಗೆತ ಪುಗೆ ಎಂಬ ತುಳು ಚಿತ್ರಗಳಲ್ಲೂ ನಟಿಸಿದ್ದಾರೆ. ಆಕಾಶವಾಣಿಯಲ್ಲಿ ನಾಟಕ ಕಲಾವಿದರಾಗಿಯೂ ಧ್ವನಿ ನೀಡಿದ್ದಾರೆ.
ಉಡುಪಿಯ ಜೀವವಿಮಾ ನಿಗಮದಲ್ಲಿ ನಾಟಕ ತಂಡ ಕಟ್ಟಿದ್ದೇ ಅಲ್ಲದೆ, ಅಂಬಲಪಾಡಿಯಲ್ಲಿ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿ, ಬಾರಕೂರಿನಲ್ಲಿ ಸೋಮಕ್ಷತ್ರಿಯ ಸಮಾಜ, ನಿಡಂಬೂರು ಯುವಕ ಮಂಡಳ, ಹವ್ಯಾಸಿ ನಾಟಕ ಸಂಸ್ಥೆ - ರಂಗಭೂಮಿ ಮೊದಲಾದ ಸಂಸ್ಥೆಗಳನ್ನೂ ಕಟ್ಟಿ ಬೆಳೆಸಿದ್ದಾರೆ. ಹಲವಾರು ನಾಟಕ ಸ್ಪರ್ಧೆಗಳನ್ನೂ ನಡೆಸಿ, ಯುವ ಕಲಾವಿದರನ್ನು ಪ್ರೋತ್ಸಾಹಿಸಿದ್ದಾರೆ.
ವರ್ಧಮಾನ ಪ್ರಶಸ್ತಿ, ಜೆ.ಸಿ. ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಪಡೆದಿರುವ ಗಾಣಿಗರನ್ನು ಬಹರೇನ್ ಕನ್ನಡ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸನ್ಮಾನಿಸಲಾಗಿದೆ. 2001ನೇ ಸಾಲಿನ ಭಾರ್ಗವ ಪ್ರಶಸ್ತಿಯನ್ನು ನೀಡಿ ದಕ್ಷಿಣ ಕನ್ನಡ ಕನ್ನಡಿಗರ ವೇದಿಕೆ ಇವರನ್ನು ಪುರಸ್ಕರಿಸಿದೆ.