ಹರಿಪ್ರಸಾದ್ ಚೌರಾಸಿಯಾ ಆತ್ಮ ವಿಶ್ವಾಸದ ಬಾನ್ಸುರಿ
*ಪಾರಿತೋಷ್ ಪರಾಶರ
ಸಿಡ್ನಿ : ಬಾನ್ಸುರಿ ವಾದಕ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಸಂಗೀತ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಹಲವು ಸಾರ್ವಜನಿಕ ಸಂಘಟನೆಗಳು ಅವರಿಗೆ ಪ್ರಶಸ್ತಿ, ಪುರಸ್ಕಾರ ಸಮ್ಮಾನಗಳ್ನು ನೀಡಿದ್ದು, ಇದಕ್ಕೆ ಮುಕುಟವಿಟ್ಟಂತೆ ಪದ್ಮ ವಿಭೂಷಣ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.
ಆದರೆ ಪದ್ಮ ವಿಭೂಷಣ ಮತ್ತು ಭಾರತ ರತ್ನ ಪ್ರಶಸ್ತಿಗಳು ಅಂತಿಮವಲ್ಲ. ಅವರ ಸಾಧನೆಯನ್ನು ಸರಿಯಾಗಿ ಗುರುತಿಸುವ ಕಾರ್ಯ ನಡೆದಿಲ್ಲ. ‘ಕೇವಲ ಭಾರತ ರತ್ನ ಅಷ್ಟೇ ಅಲ್ಲ, ನಾನು ನೊಬೆಲ್ ಪ್ರಶಸ್ತಿಗೇ ಅರ್ಹ’ ಎಂದು ಚೌರಾಸಿಯಾ ಎದೆ ತಟ್ಟಿ ಹೇಳುತ್ತಾರೆ.
ಶಾಸ್ತ್ರೀಯ ಸಂಗೀತ ಹಾಡುಗಾರನಾಗಿ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ಚೌರಾಸಿಯಾ, ಉಸ್ತಾದ್ ಅಲ್ಲಾವುದ್ದೀನ್ ಅವರ ಶಿಷ್ಯ. ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಮಂದಿ ಹಾಡುಗಾರರಿದ್ದಾರೆ. ಆದರೆ ಬಾನ್ಸುರಿ ವಾದಕರು ಕೆಲವೇ ಮಂದಿ ಇದ್ದುದರಿಂದ ನಾನು ಗಾಯಕನಾಗುವುದಕ್ಕಿಂತ ಬಾನ್ಸುರಿ ವಾದಕನಾಗಲು ಆಸೆ ಪಟ್ಟೆ ಎಂದು ಚೌ ರಾಸಿಯಾ ತಾನು ಬಾನ್ಸುರಿ ವಾದಕನಾದ್ದದ್ದರ ಬಗ್ಗೆ ನೆನೆಸಿಕೊಂಡು ಹೇಳುತ್ತಾರೆ.
ಚೌರಾಸಿಯಾ ಅವರದು ಸಂಗೀತ ಮನೆತನವಲ್ಲ. ನನ್ನ ಅಪ್ಪ ಕೂಡ ಸಂಗೀತ ಕಲಿಯುವುದನ್ನು ಇಷ್ಟಪಟ್ಟಿರಲಿಲ್ಲ ಎನ್ನುತ್ತಾ ಅವರು ತಾವು ಶುದ್ಧ ಸಂಗೀತ ಪರಂಪರೆಯ ಗಡಿ ದಾಟಿಲ್ಲ ಎನ್ನುತ್ತಾರೆ. ಜಾಗತಿಕ ಸಂಗೀತ ಸಂರಕ್ಷಣಾ ವೇದಿಕೆಯಲ್ಲಿ ಭಾರತೀಯ ಸಂಗೀತ ವಿಭಾಗದ ಮುಖ್ಯಸ್ಥರಾಗಿರುವ ಹರಿಪ್ರಸಾದ್ ಚೌರಾಸಿಯಾ ಯಹೂದಿ ಮೆನುಹಿನ್ ಮತ್ತು ಜೀನ್ ಪೀರ್ ರಾಂಪಾಲ್ ಅವರ ಜೊತೆಗೆ ವೇದಿಕೆಯಲ್ಲಿ ಕಚೇರಿ ನೀಡಿದ್ದಾರೆ. ವಿದೇಶಿಯರು ಕಲೆಯನ್ನೋ, ಕಲಾವಿದರನ್ನೋ ಗುರುತಿಸುವ ಮುಂಚೆ ಭಾರತೀಯರು ಅವುಗಳನ್ನು ಗುರುತಿಸುವುದೇ ಇಲ್ಲ ಎಂದು ಭಾರತೀಯರ ಪ್ರೋತ್ಸಾಹದ ಬಗ್ಗೆ ಮನನೊಂದು ನುಡಿಯುತ್ತಾರೆ.
(ಐಎಎನ್ಎಸ್)