ನೀರು ಏರುತ್ತಲೇ ಇತ್ತು
ಸೋಮಯಾಜಿಗಳಿಗೆ ಒಂದು ಹೊತ್ತಲ್ಲಿ ಥಟ್ಟನೆ ಎಚ್ಚರವಾಯಿತು. ಯಾಕೆ ಹೀಗೆ ಎಚ್ಚರವಾಯಿತು ಅನ್ನುವುದು ಗೊತ್ತಾಗದೇ ಅವರು ಎದ್ದು ಕೂತರು. ಮತ್ತೆ ನಿದ್ದೆ ಹತ್ತಿರ ಸುಳಿಯಲಾರದು ಅನ್ನಿಸಿತು. ಸಿಕ್ಕಾಪಟ್ಟೆ ಬಾಯಾರಿಕೆ ಆದಂತಾಗಿ ಕುಳಿತಲ್ಲಿಂದಲೇ ಚೊಂಬಿಗೆ ಕೈಚಾಚಿದರು. ಸಿಗಲಿಲ್ಲ. ಮನಸ್ಸು ಯಾಕೋ ವಿಹ್ವಲಗೊಂಡಿದೆ ಅನ್ನಿಸಿತು. ಒಂದು ಕ್ಷಣ ಆನಂದನನ್ನು ನೋಡಿಬರಬೇಕು ಅಂತ ಗಾಢವಾಗಿ ಅನ್ನಿಸತೊಡಗಿತು. ಹಾಗೆ ಅನ್ನಿಸುತ್ತಿರುವುದಾದರೂ ಯಾಕೆ ಅಂತ ಪ್ರಶ್ನಿಸಿಕೊಂಡರು. ಉತ್ತರ ಹೊಳೆಯಲಿಲ್ಲ. ಮಲಗಿದಲ್ಲಿಂದ ಹೊರಗೆ ಬಂದು ದೇವಾಲಯದ ಅಂಗಳದಲ್ಲಿ ನಿಂತರು. ಬಾಗಿಲು ಮುಚ್ಚಿದ್ದ ಗರ್ಭಗುಡಿಯಾಳಗೆ ನೀಲಾಂಜನದ ಮಂದ ಬೆಳಕಿತ್ತು. ಆ ಬೆಳಕಿನಲ್ಲಿ ಒಂದೆರಡು ಇಲಿಗಳು ಗರ್ಭಗುಡಿಯಾಳಗೆ ಅತ್ತಿತ್ತ ಓಡಾಡುವುದು ಕಾಣಿಸಿತು. ಸೋಮಯಾಜಿಗಳು ಮೊದಲಾದರೆ ಬಾಗಿಲು ತೆರೆದು ಅವುಗಳನ್ನು ಹೊರಗೆ ಓಡಿಸುತ್ತಿದ್ದರೋ ಏನೋ? ಆ ರಾತ್ರಿ ಅದಕ್ಕೂ ಮನಸ್ಸಾಗಲಿಲ್ಲ.
ಹಾಗೆ
ಎದ್ದು
ನೇತ್ರಾವತಿಯತ್ತ
ನಡೆದರು.
ರಾತ್ರಿಯ
ಮಂದಬೆಳಕಿನಲ್ಲಿ
ನೇತ್ರಾವತಿ
ಇದ್ದಕ್ಕಿದ್ದಂತೆ
ಉಬ್ಬಿಕೊಂಡಂತೆ
ಕಾಣಿಸಿತು.
ಇದೆಂಥಾ
ಭ್ರಮೆ
ಅಂದುಕೊಂಡು
ಕಣ್ಣು
ಹೊಸಕಿಕೊಂಡು
ನೋಡಿದರು.
ಕಂಡದ್ದು
ಸುಳ್ಳಾಗಿರಲಿಲ್ಲ.
ನೇತ್ರಾವತಿಯಲ್ಲಿ
ಮಹಾಪೂರ
ಬಂದಿತ್ತು.
ಕತ್ತೆತ್ತಿ
ನೋಡಿದರು.
ಆಕಾಶದಲ್ಲಿ
ಮೋಡದ
ತುಣುಕೂ
ಇರಲಿಲ್ಲ.
ಘಟ್ಟದ
ಮೇಲೆ
ಈ
ಪಾಟಿ
ಮಳೆಯಾಗಿದೆಯಾ
ಅಂತ
ಆಶ್ಚರ್ಯವಾಯಿತು.
ಮೆಟ್ಟಿಲ
ಬದಿಗೆ
ಬಂದು
ನಿಂತು
ನದಿಯನ್ನೇ
ದಿಟ್ಟಿಸಿದರು.
ಯಾವ
ಸ್ಮರಣೆಯೂ
ಇಲ್ಲದಂತೆ
ನೀರು
ಹರಿಯುತ್ತಿತ್ತು.
ಹರಿಯುತ್ತಾ
ಹರಿಯುತ್ತಾ
ಒಳಗೊಂಡದ್ದರ
ಅರಿವೂ
ಈಕೆಗಿಲ್ಲವಲ್ಲ,
ಹುಚ್ಚು
ಮೂಳಿ
ಅಂತ
ಮನಸ್ಸಿನಲ್ಲೇ
ಬೈದರು.
ಮತ್ತೆ
ಒಳಗೆ
ಹೋಗಿ
ಮಲಗುವ
ಮನಸ್ಸಾಗದೆ
ಅಲ್ಲೇ
ಕಲ್ಲು
ಕಟ್ಟೆಯ
ಮೇಲೆ
ಕುಳಿತರು.
ನೆತ್ತಿಯ ಮೇಲೆ ಒಂದು ಹನಿ ಬಿದ್ದಂತಾಯಿತು. ತಲೆಯೆತ್ತಿ ನೋಡಿದರು. ಆಕಾಶ ನಿರ್ಮಲವಾಗಿತ್ತು. ಸೋಮಯಾಜಿಗಳು ಹೀಗೆ ವಿಹ್ವಲರಾಗಿ ಹೊರಬರುವುದಕ್ಕೆ ಹತ್ತು ನಿಮಿಷದ ಹಿಂದೆ ಆನಂದ ಭಯವಿಹ್ವಲನಾಗಿ ಕಿರುಚಿಕೊಂಡದ್ದನ್ನು ಕೇಳಿದವರ್ಯಾರೂ ಇರಲಿಲ್ಲ. ಎಂದಿನಂತೆ ಆ ಪರಿಶುಭ್ರ ಆಕಾಶದ ರಾತ್ರಿ ಆನಂದ ನೇತ್ರಾವತಿಯ ನಡುವಿನ ಬಂಡೆಯ ಮೇಲೆ ಮಲಗಿಕೊಂಡಿದ್ದ. ಆಕಾಶದಲ್ಲಿ ಎಣಿಕೆಗೆ ಸಿಗುವಷ್ಟು ನಕ್ಷತ್ರಗಳಷ್ಟೇ ಇದ್ದವು. ಆಕಾಶ ನೋಡುತ್ತಾ ನೋಡುತ್ತಾ ಆನಂದನಿಗೆ ಇದ್ದಕ್ಕಿದ್ದಂತೆ ರಘುನಂದನ ನೆನಪಾಗಿದ್ದ. ಅವನ ನೆನಪಾಗುತ್ತಲೇ ಆನಂದನಿಗೆ ಗಂಟಲು ತುಂಬಿಬಂತು. ಅವನ ಬಗ್ಗೆ ಯಾಕೋ ಪ್ರೀತಿ ಉಕ್ಕಿಬಂದಂತಾಯಿತು.
ಎಷ್ಟು ಸರಳ ವ್ಯಕ್ತಿ ನಮ್ಮ ರಘು. ನನ್ನ ಮತ್ತು ಸುಗಂಧಿಯ ಸಂಬಂಧದಂತೆ ಬಹುಶಃ ರಘು-ನರ್ಮದೆಯರ ಸಂಬಂಧದಲ್ಲಿ ಕೇವಲ ಕಾಮವಷ್ಟೇ ಇದ್ದಿರಲಿಕ್ಕಿಲ್ಲ. ನರ್ಮದೆಯ ಸೌಂದರ್ಯಕ್ಕೆ ಸಮನಾದ ಒಂದು ದೈವಿಕ ಗುಣ ಕೂಡ ಅವಳಲ್ಲಿತ್ತೋ ಏನೋ? ಆದರೂ ಅವರಿಬ್ಬರೂ ಮದುವೆಗೆ ಮೊದಲೇ ಕೂಡಿದ್ದರು ಅನ್ನುವುದನ್ನು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲವಲ್ಲ. ಅಷ್ಟಕ್ಕೂ ನರ್ಮದೆಯಂಥ ದೇವತೆಯಂಥ ಹೆಣ್ಣಲ್ಲೂ ಕಾಮಾಸಕ್ತಿ ಇತ್ತಾ ? ಅದು ಎಲ್ಲ ಹೆಣ್ಣಲ್ಲೂ ಇರುತ್ತಾ ? ನನ್ನ ಸುಗಂಧಿಯಲ್ಲಿದ್ದ ಸುಖಕೊಡುವ ಶಕ್ತಿ ಬೇರೆ ಎಲ್ಲ ಹುಡುಗಿಯರಲ್ಲೂ ಇರೋಕೆ ಸಾಧ್ಯವಾ ? ನಾನು ಸುಖಿಸಿದಷ್ಟೇ ರಘುವೂ ಸುಖಿಸಿರಬಹುದೇ? ಸುಖಿಸುವ ಹೊತ್ತಿಗೆ ರಘುವಿಗೆ ಯಾರು ನೆನಪಿಗೆ ಬಂದಿರಬಹುದು? ನನಗೆ ಸುಗಂಧಿಯನ್ನು ಕೂಡುವ ಹೊತ್ತಿಗೆ ಅಪ್ಪ ನೆನಪಾಗುತ್ತಿದ್ದರಲ್ಲ ? ಆಗ ಆ ಸುಖದಲ್ಲಿ ಅವರೂ ಪಾಲು ತಗೊಂಡಂತೆ ಅನ್ನಿಸಿ ಅಪ್ಪನ ಮೇಲೆ ಸಿಟ್ಟು ಬರುತ್ತಿತ್ತಲ್ಲ ? ಆ ಸಿಟ್ಟಿನ ಮೂಲಕವೇ ಅಪ್ಪ ಯಾಕೆ ಪ್ರಕಟವಾಗುತ್ತಿದ್ದರು?
ಹೀಗೆ ಯೋಚಿಸುತ್ತಾ ಮಲಗಿದ್ದ ಆನಂದನಿಗೆ ಅಲ್ಲೇ ನಿದ್ದೆ ಬಂತು. ನಂತರ ಎಚ್ಚರವಾದದ್ದು ಮೈಮೇಲೆ ತಣ್ಣಗೆ ಏನೋ ಸಿಡಿದಂತಾದಾಗಲೇ. ಮಳೆ ಬಂದಿರಬೇಕು ಅಂದುಕೊಳ್ಳುತ್ತಾ ನಿಧಾನವಾಗಿ ಕಣ್ತೆರೆದಾಗ ಕಂಡಿದ್ದು ಅದೇ ನಿರಭ್ರ ಆಕಾಶ. ಆದರೆ ಕಿವಿಗೆ ರಾಚಿದ್ದು ಮಲಗುವ ಹೊತ್ತಿಗೆ ಕೇಳಿಸದೇ ಇದ್ದ ವಿಚಿತ್ರ ಸದ್ದು. ಆನಂದ ಥಟ್ಟನೆ ಎದ್ದು ಕುಳಿತು ಸುತ್ತಲೂ ನೋಡಿದ. ನೇತ್ರಾವತಿ, ಕೆಂಪಾಗಿ, ತುಂಬಿ ಹರಿಯುತ್ತಿದ್ದಳು. ಆನಂದ ಮಲಗಿದ್ದ ಕಲ್ಲು ಮುಳುಗುವುದಕ್ಕೆ ಒಂದು ಗೇಣಷ್ಟೇ ಬಾಕಿ ಉಳಿದಿತ್ತು.
ಆನಂದ ನೋಡನೋಡುತ್ತಿದ್ದಂತೆ ಗೇಣು ಅಂಗುಲವಾಗಿ ಅಂಗುಲ ಅರೆಯಂಗುಲವಾಗಿ ಆನಂದ ನಿಂತ ಕಲ್ಲು ಮುಳುಗಿತು. ಸುತ್ತಲೂ ನೀರು ತುಂಬಿ ಹರಿಯುತ್ತಿರುವಾಗ ನೇತ್ರಾವತಿಯ ನಡುಮಧ್ಯೆ ನಿಂತ ಆನಂದನನ್ನು ಸಾವಿನ ಭಯ ಕಾಡಲಿಲ್ಲ. ಒಂದು ಅನಂತ ನಿರಾತಂಕದಲ್ಲಿ ಆತ ಸುಮ್ಮನೆ ನಿಂತ. ಆನಂದನ ಮೊಣಕಾಲಿನೆತ್ತರಕ್ಕೆ ನೀರು ಏರುತ್ತಿದ್ದಂತೆ ಮಲಗಿದ್ದ ಸೋಮಯಾಜಿಗಳಿಗೆ ಥಟ್ಟನೆ ಎಚ್ಚರವಾಗಿತ್ತು.
ಅವರು ಎದ್ದು ನೇತ್ರಾವತಿಯ ದಂಡೆಗೆ ಬಂದು ನೋಡುವ ಹೊತ್ತಿಗೆ ನೇತ್ರಾವತಿಯ ನಾಲಗೆ ದೇವಾಲಯದ ಅಂಚಿನ ಕೊನೆಯ ಮೆಟ್ಟಿಲನ್ನು ನೆಕ್ಕುತ್ತಿತ್ತು. ಸೋಮಯಾಜಿಗಳು ತಿರುಗಿ ನೋಡಿದರು. ಕುಮಾರಧಾರೆಯಲ್ಲೂ ನೀರು ಏರುತ್ತಿತ್ತು. ‘ವಿಚಿತ್ರ’ ಅಂದುಕೊಂಡು ಹಿಂದಿರುಗಲು ತಿರುಗುತ್ತಿದ್ದಂತೆ ಮತ್ತೊಂದು ಹನಿ ಅವರ ನೆತ್ತಿಗೇ ಬಿತ್ತು. ಮೋಡವಿಲ್ಲದ ಆಕಾಶದಿಂದಲೇ ಬಿದ್ದ ಹನಿ ಅದು ಅಂದುಕೊಂಡು ಸೋಮಯಾಜಿಗಳು ಘಟ್ಟದತ್ತ ಕಣ್ಣು ಹಾಯಿಸಿದರು. ಒಂದಳತೆಗಿಂತ ದೂರಕ್ಕೆ ಏನೂ ಕಾಣಿಸಲಿಲ್ಲ. ಕತ್ತಲು ಮೆತ್ತಿಕೊಂಡು ಎಲ್ಲವೂ ಕಲಸಿಕೊಂಡಿತ್ತು. ಇದ್ದಕ್ಕಿದ್ದಂತೆ ಬರಬರ ಹನಿಗಳು ಬಿದ್ದವು.