ಗಾಂಧೀಪಾರ್ಕಿನಲ್ಲಿ ಇಳಿದವನು !
ಅಂದ್ರೆ ನಿನಗೆ ನಿರಂಜನ ಸಿಗಲೇ ಇಲ್ವಾ? ನಿನ್ನನ್ನು ಬೇಕಷ್ಟು ಸರ್ತಿ ನೋಡಿದ್ದೇನೆ ಅಂತ ಹೇಳುತ್ತಿದ್ದ" ಮೋಹನ ರಘುವನ್ನೇ ಅನುಮಾನದಿಂದ ನೋಡಿದ. ರಘು ಇಲ್ಲವೆಂಬಂತೆ ತಲೆಯಾಡಿಸಿದ. 'ಅವನು ಬೆಂಗಳೂರಿಗೆ ಬಂದಿದ್ದ ಅಂತ ಗೊತ್ತಾದದ್ದೇ ಈಗ. ಅವನು ನನ್ನನ್ನು ಸಂಪರ್ಕಿಸಲೇ ಇಲ್ಲ".
ಆ್ಯಂಟನಿ ಈಗಂತೂ ನಿಜಕ್ಕೂ ಗೊಂದಲದಲ್ಲಿ ಬಿದ್ದ. ಅವನಿಗೆ ಇದು ಅಷ್ಟು ಸುಲಭದಲ್ಲಿ ಬಗೆಹರಿಯುವ ಪ್ರಶ್ನೆಯಂತೆ ಕಾಣಿಸಲಿಲ್ಲ. ನಿರಂಜನ ಬೆಂಗಳೂರಿಗೆ ಹೋಗಿದ್ದು ನಿಜವೇ? ರಘುವನ್ನು ಸಂಪರ್ಕಿಸಲಿಲ್ಲ ಅಂದ ಮೇಲೆ ಯಾಕೆ ಸುಳ್ಳು ಹೇಳಬೇಕಿತ್ತು ? ಅವನ ಉದ್ದೇಶ ಏನಾಗಿದ್ದೀತು?
ಅಷ್ಟು ಹೊತ್ತಿಗೆ ದಿನೇಶ, ಸತ್ಯ ಕೂಡ ಫಾರೆಸ್ಟು ಗೆಸ್ಟು ಹೌಸಿನಿಂದ ಹೊರಗೆ ಬಂದಿದ್ದರು. ಮುಂಜಾವದ ತಣ್ಣನೆ ಗಾಳಿಯ ವೇಗ ನಿಧಾನವಾಗಿ ಜೋರಾಗುತ್ತಿತ್ತು. ಉಪ್ಪಿನಂಗಡಿಯ ನಸುಕಿನ ಚಳಿಯನ್ನು ಸಹಿಸೋದು ಕಷ್ಟ ಮಾರಾಯ ಎಂದು ಗೊಣಗಿಕೊಂಡು ಆ್ಯಂಟನಿ ಇದುವರೆಗೆ ನಡೆದ ಮಾತುಕತೆಗೂ ತನಗೂ ಸಂಬಂಧವಿಲ್ಲ ಎಂಬಂತೆ ಒಂದು ಸಿಗರೇಟು ಹಚ್ಚಿಕೊಂಡ.
ಇದ್ಯಾತರ ರಗಳೆ ಅಂತ ರಘುವಿಗೆ ಮತ್ತೊಮ್ಮೆ ಅನ್ನಿಸಿತು. ಅಲ್ಲಿಂದ ತಕ್ಷಣ ಹೊರಟುಬಿಡುವುದೇ ವಾಸಿ ಎಂದುಕೊಂಡ. ಇಲ್ಲದೇ ಹೋಗಿದ್ದರೆ ಒಂದು ಕೋಟಿ ಬಜೆಟ್ಟಿನ ಸಿನಿಮಾ ಬಿಟ್ಟು ನಿದ್ದೆಗೆಟ್ಟು ಡ್ರೆೃವ್ ಮಾಡಿಕೊಂಡು ಬಂದು, ಮಾಡುವುದಕ್ಕೆ ಯಾವ ಕೆಲಸವೂ ಇಲ್ಲದ ಮೋಹನನ ಜೊತೆ ಕೇವಲ ಕುಡಿತಕ್ಕೂ ಫಾರೆಸ್ಟು ಡಿಪಾರ್ಟುಮೆಂಟಿನ ಆಫೀಸರುಗಳಿಗೆ ಲಾರಿ ಡ್ರೆೃವರುಗಳು ಘಟ್ಟದ ಮೇಲಿನಿಂದ ತಂದುಬಿಡುವ ಹುಡುಗಿಯರ ಜೊತೆ ಮಲಗುವುದಕ್ಕೂ ಉಪಯೋಗಕ್ಕೆ ಬರುವ ಫಾರೆಸ್ಟು ಗೆಸ್ಟ್ಹೌಸಿನ ಮುಂದೆ ಆ ಮುಂಜಾನೆ ನಿಲ್ಲುವುದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ?
'ತುಂಬಾ ಅರ್ಜೆಂಟಲ್ಲಿದ್ದೀಯಾ" ಸಿಗರೇಟನ್ನು ಹೊಸಕಿ ಆರಿಸಿ ಜೇಬಲ್ಲಿಟ್ಟುಕೊಂಡು ನಾಲಗೆಯ ಮೇಲೆ ನೆಲೆಗೊಂಡ ಸಿಗರೇಟಿನ ಕಹಿಯನ್ನು ಕ್ಯಾಕರಿಸಿ ಉಗಿಯುತ್ತಾ ಆ್ಯಂಟನಿ ಕೇಳಿದ. ರಘು ಉತ್ತರಿಸಲಿಲ್ಲ. ಆ ನಿರುತ್ತರವನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎನ್ನುವುದನ್ನು ಬಲ್ಲವನಂತೆ ದಿನೇಶ ಮಾತು ಶುರುಮಾಡಿದ.
'ನಿರಂಜನ ಕೊಲೆಯಾದದ್ದಂತೂ ನಿಜ. ಆ ಬಗ್ಗೆ ಇವರಿಗೆಲ್ಲ ಅನುಮಾನವಿದ್ದರೂ ನನಗಂತೂ ಅನುಮಾನವೇ ಇಲ್ಲ. ಅವನು ಬೆಂಗಳೂರಿನಿಂದ ಹೊರಟಿದ್ದಾನೆ ಅನ್ನುವುದು ನನಗೆ ಗೊತ್ತಿದೆ. ಹೊರಡುವ ಮುಂಚೆ ನನಗವನು ಫೋನ್ ಮಾಡಿದ್ದಾನೆ. ಅವನನ್ನು ಗಾಂಧೀಪಾರ್ಕಿನ ಹತ್ತಿರ ಇಳಿಸಿ ಹೋಗಿದ್ದಾಗಿ ಕುಂದಾಪುರ ಬಸ್ಸಿನ ಡ್ರೆೃವರ್ ಅನಂತ ಹೇಳಿದ. ಅವನ ಕೈಯಲ್ಲೊಂದು ದೊಡ್ಡ ರುಕ್ಸ್ಯಾಕ್ ಬ್ಯಾಗ್ ಇತ್ತಂತೆ. ಬೆಳಗ್ಗೆ ಗಾಂಧೀಪಾರ್ಕಿನಲ್ಲಿ ಇಳಿದ ನಿರಂಜನ ಹಾಗಿದ್ದರೆ ಎಲ್ಲಿಗೆ ಹೋದ?"
ಪೋಲಿಸರಿಗೆ ಕಂಪ್ಲೇಂಟ್ ಕೊಡಬೇಕಿತ್ತು. ರಘು ಅನುಮಾನಿಸುತ್ತಲೇ ಹೇಳಿದ. ಅವನಿಗೆ ಯಾಕೋ ಈ ರಗಳೆಯೇ ಬೇಡ ಅನ್ನಿಸಲಿಕ್ಕೆ ಶುರುವಾಗಿತ್ತು. ಗಾಂಧೀಪಾರ್ಕಿನಲ್ಲಿ ಇಳಿದು ಮಾಯವಾದ ನಿರಂಜನನನ್ನು ಹುಡುಕುವುದಾದರೂ ಎಲ್ಲಿ ? ಬೇಕೆಂದೇ ತಪ್ಪಿಸಿಕೊಂಡಿದ್ದರೆ ಆತ ಹುಡುಕಿದರೂ ಸಿಗುತ್ತಾನೆ ಅನ್ನುವ ನಂಬಿಕೆಯಾದರೂ ಎಲ್ಲಿಂದ ಬರಬೇಕು? ಎಲ್ಲವೂ ಗೋಜಲಾಗುತ್ತಿದೆ ಅನ್ನಿಸಿತು. ರಘುನಂದನ ಸುದೀರ್ಘವಾಗಿ ಆಕಳಿಸಿದ.
'ನೀವು ಹೇಳೋದು ಒಂದಕ್ಕೊಂದು ರಿಲೇಟೇ ಆಗುತ್ತಿಲ್ಲ. ಅವನು ಕೊಲೆಯಾಗಿದ್ದಾನೆ. ಅವನ ಹೆಣವನ್ನು ಕೊಕ್ಕಡ ರಾಮಚಂದ್ರ ರೈ ತೋಟದಲ್ಲಿ ಹೂತಿಟ್ಟಿದ್ದಾರೆ ಅಂತೀರಿ. ಈಗ ನೋಡಿದರೆ ನಾಪತ್ತೆಯಾಗಿದ್ದಾನೆ ಅಂತೀರಿ. ಗಾಂಧೀಪಾರ್ಕಿನಲ್ಲೇ ಇಳಿದದ್ದು ನೋಡಿದವರಿದ್ದಾರೆ ಅಂತೀರಿ. ಇದನ್ನೆಲ್ಲ ಹೇಗ್ರಯ್ಯಾ ಜೋಡಿಸೋದು. ಒಂದಕ್ಕೊಂದು ಕೊಂಡಿಯೇ ಸಿಗುತ್ತಿಲ್ಲ" ಅರ್ಧ ಸಿಟ್ಟು, ಇನ್ನರ್ಧ ಅನುಮಾನದಿಂದ ರಘುನಂದನ ಕೇಳಿದ.'ಕೊಂಡಿ ಇದೆ ಅನ್ನುತ್ತಾ ಮೋಹನ ಗುಟ್ಟು ಹೇಳುವವನಂತೆ ನಿರಂಜನನನ್ನು ಪಕ್ಕಕ್ಕೆ ಕರೆದುಕೊಂಡು ಹೋದ. ಹಿಂದಕ್ಕೆ ಬರಲು ಹೆಜ್ಜೆಯೆತ್ತಿದ ಸತ್ಯ ಮತ್ತು ದಿನೇಶರಿಬ್ಬರನ್ನೂ ಬಲಗೈಯೆತ್ತಿ ಬರಬೇಡಿಎಂದು ಸೂಚಿಸಿ ವಾತಾವರಣಕ್ಕೊಂದು ಅನಿರೀಕ್ಷಿತ ನಿಗೂಢತೆ ಲಭ್ಯವಾಗುವಂತೆಯೂ ಮಾಡಿದ. ರಘುನಂದನ ಕುತೂಹಲದಿಂದ ಕಾಯುತ್ತಿದ್ದ ಹಾಗೆ, ಅತ್ಯಂತ ದೃಢವಾಗಿಯೂ ಅದೇ ಸತ್ಯ ಎಂಬಂತೆಯೂ 'ಇದಕ್ಕೆಲ್ಲ ಕಾರಣ ಒಂದು ಹುಡುಗಿ" ಎಂದ.ಯಾರದು ಎಂಬಂತೆ ಅವನ ಮುಖವನ್ನೇ ನೋಡಿದ ರಘು.'ನಡುಮನೆ ಸದಾನಂದ ರೈಯ ಮಗಳು.... ವೀಣಾಸರಸ್ವತಿ..".