ಜಾತಿ-ಮತಗಳ ಮೀರುವ ಪ್ರಯತ್ನಕ್ಕೆ ನಾಂದಿಯಾಗಲಿ ಕನಕಜಯಂತಿ
ನೀ ಮಾಯೆಯೊಳಗೋ ಮಾಯೆ ನಿನ್ನೊಳಗೊ ..? ನೀ ದೇಹದೊಳಗೊ ದೇಹ ನಿನ್ನೊಳಗೊ ..?, ತಲ್ಲಣಸಿದಿರು ಕಂಡ್ಯ ತಾಳು ಮನವೆ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ.., ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ.. ಎಂಬಿತ್ಯಾದಿ ಶ್ರೇಷ್ಠ ಕೀರ್ತನೆಗಳ ಮೂಲಕ ದಾಸಶ್ರೇಷ್ಠರಲ್ಲೊಬ್ಬರಾದವರು ಕನಕದಾಸರು.
ಇಂದು(ನ.6) ಕರ್ನಾಟಕದಾದ್ಯಂತ ಅವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಕನಕ ಜಯಂತಿ ಆಚರಣೆಯ ಹಿಂದಿರುವ ರಾಜಕೀಯ, ಜಾತಿ ಓಲೈಕೆಗಳ ಕಸರತ್ತುಗಳನ್ನೆಲ್ಲ ಆಚೆ ಇಟ್ಟು ಒಬ್ಬ ಶ್ರೇಷ್ಠಾತಿ ಶ್ರೇಷ್ಠ ದಾಸರನ್ನಾಗಿ ಕನಕದಾಸರನ್ನು ಕಂಡರೆ, ಕಾಗಿನೆಲೆಯ ಆದಿಕೇಶವನೂ ಮೆಚ್ಚಿಯಾನು!
ನ.6 ಕನಕದಾಸ ಜಯಂತಿ ನಿಮಿತ್ತ ವಿಶೇಷ ಲೇಖನ
ಹಾವೇರಿ ಜಿಲ್ಲೆಯ ಬಾಡದಲ್ಲಿ ಜನಿಸಿದ ಕನಕದಾಸರು, ಕಾಗಿನೆಲೆಯಾದಿಕೇಶವರಾಯ ಎಂಬ ಅಂಕಿತನಾಮದೊಂದಿಗೆ ಹಲವು ಕೀರ್ತನೆಗಳನ್ನು ರಚಿಸಿದ್ದಾರೆ. ಮೇಳು ಕೀಳೆಂಬ ಭಾವವೇ ಸುಳ್ಳು, ಶುದ್ಧ ಭಕ್ತಿ, ಪವಿತ್ರ ಮನಸ್ಸಿದ್ದರೆ ದೇವ ತಾನಾಗಿಯೇ ಒಲಿಯಬಲ್ಲ ಎಂಬುದನ್ನು ಅರ್ಥಮಾಡಿಸಿದವರು ಕನಕದಾಸರು. ಅದಕ್ಕೆಂದೇ ಉಡುಪಿಯ ಕೃಷ್ಣ, ಶುದ್ಧ ಮನಸ್ಸಿನ ಕನಕದಾಸರ ಭಕ್ತಿಗೆ ಒಲಿದು ಗೋಡೆಯೊಡೆದು ದರ್ಶನ ನೀಡಿದ!
ಜಾತಿ ಮತಗಳನ್ನು ಮೀರಿ ಬೆಳೆವ ಸಂಕಲ್ಪದೊಂದಿಗೆ ಪ್ರತಿವರ್ಷ ಆಚರಣೆಗೊಳ್ಳುವ ಕನಕ ಜಯಂತಿಗೆ ಹಲವು ಗಣ್ಯರು ಟ್ವಿಟ್ಟರ್ ನಲ್ಲಿ ಶುಭಹಾರೈಸಿದ್ದಾರೆ.
|
ದಿವ್ಯಚೇತನ ಕನಕದಾಸ
ಕುಲವನ್ನು ನಡತೆಯ ಮೇಲೆ ನಿರ್ಧರಿಸಬೇಕೇ ವಿನಃ ಹುಟ್ಟಿನಿಂದಲ್ಲ ಎಂದು ಹಾಡುತ್ತಾ, ಜಾತಿ-ಧರ್ಮಗಳ ಕಳಂಕವನ್ನು ಹೋಗಲಾಡಿಸಲು ಶ್ರಮಿಸಿದ ದಿವ್ಯಚೇತನ ಕನಕದಾಸರನ್ನು ಸ್ಮರಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
|
ಕನಕದಾಸರ ಮಾತು ಇಂದಿಗೂ ಪ್ರಸ್ತುತ
ಕುಲಕುಲ ಕುಲವೆಂದು ಹೊಡೆದಾಡದಿರಿ ಎಂದು ಕನಕದಾಸರು ಅಂದೇ ಹೇಳಿದ್ದಾರೆ.ಇಂದಿಗೂ ಅವರ ಮಾತು ಅಷ್ಟೇ ಪ್ರಸ್ತುತ. ಎಲ್ಲರಿಗೂ ಕನಕದಾಸರ ಜಯಂತಿಯ ಶುಭಾಶಯಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
|
ಸಮಾಜ ಸುಧಾರಕ ಕನಕದಾಸರು
ಮಹಾನ್ ಕವಿ ಮತ್ತು ಜಾತಿ ಪದ್ಧತಿಯ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಿದ ಸಾಮಾಜಿಕ ಸುಧಾರಕ ಕನಕದಾಸರನ್ನು ಅವರ ಜಯಂತಿಯಂದು ನೆನೆಯೋಣ ಎಂದು ಕಾಂಗ್ರೆಸ್ ನಾಯಕ ರಿಜ್ವಾನ್ ಅರ್ಶದ್ ಟ್ವೀಟ್ ಮಾಡಿದ್ದಾರೆ.
|
ಶ್ರೀಕೃಷ್ಣ ಭಕ್ತ ಕನಕಜಯಂತಿ
ಕರ್ನಾಟಕದ ಸಮಸ್ತ ಜನರಿಗೆ ಶ್ರೀ ಕೃಷ್ಣ ಭಕ್ತ ಕನಕದಾಸ ಜಯಂತಿಯ ಹಾರ್ದಿಕ ಶುಭಾಶಯಗಳು ಎಂದು ಬಿಜೆಪಿ ಮುಖಂಡ ಅಶ್ವತ್ಥನಾರಾಯಣ ಅವರು ಟ್ವೀಟ್ ಮಾಡಿದ್ದಾರೆ.