ಕಳಸಾ ಬಂಡೂರಿ ಹೋರಾಟಗಾರರ ಮುಂದಿನ ನಡೆ ಏನು?
ಕರ್ನಾಟಕ ಸರ್ಕಾರ ತನ್ನ ವಿಸ್ತೃತ ಮೂಲಯೋಜನೆಯಲ್ಲಿ ಹುಬ್ಬಳ್ಳಿ ಧಾರವಾಡದ ಕುಡಿವ ನೀರಿಗಾಗಿ 2.5 ಟಿಎಂಸಿ ಬೇಕು ಎಂಬುದಾಗಿ ಹೇಳಿದ್ದರೂ, ವಾಸ್ತವವಾಗಿ ಇಂದು ಅದಕ್ಕಿಂತ ಹೆಚ್ಚು ನೀರು ಬಳಕೆಯಾಗುತ್ತದೆ. ಇಂದಿನ ಲೆಕ್ಕದಲ್ಲಿ ಈ ಭಾಗದ ಜನರ ಕುಡಿಯುವ ನೀರಿನ ಅಗತ್ಯಕ್ಕಾಗೇ ಸುಮಾರು 15 ಟಿಎಂಸಿಯಷ್ಟು ನೀರು ಬೇಕು. ಇನ್ನು ನೀರಾವರಿಗೆ ನೀರೆಲ್ಲಿದೆ ಎನ್ನುವುದು ರೈತ ಹೋರಾಟಗಾರರ ಪ್ರಶ್ನೆ.
ಇದೀಗ ಕಾನೂನು ಹೋರಾಟದಲ್ಲಿ ತಾನೂ ತೊಡಗಿಕೊಳ್ಳುವ ಮೂಲಕ, ಸರ್ಕಾರ ತಪ್ಪುಹಾದಿ ಹಿಡಿಯದಂತೆ ಕಾಯುವ ಕೆಲಸವನ್ನು ಒಂದೆಡೆ ಮಾಡುತ್ತಿದ್ದರೆ, ಮತ್ತೊಂದೆಡೆ ಜನರಲ್ಲಿ ಅವರಿಗೆ ಆಗಿರುವ ಅನ್ಯಾಯದ ಬಗ್ಗೆ ಜಾಗೃತಿಯನ್ನು ಮೂಡಿಸುವತ್ತ ಗಮನ ಹರಿಸಿದೆ.
ಈಗ ಹೋರಾಟಗಾರರ ಗಮನ ಮಹದಾಯಿ ನ್ಯಾಯಾಧೀಕರಣ ನೀಡಬಹುದಾದ ತೀರ್ಪಿನತ್ತ ನೆಟ್ಟಿದೆ. ಇದೇ ಜುಲೈ 12ರಂದು ಆಯೋಗಕ್ಕೆ ವಿಚಾರಣೆ ಮುಂದೂಡಲು ಮನವಿ ಸಲ್ಲಿಸುವ ಮೂಲಕ ನ್ಯಾಯಾಧಿಕರಣದ ಕೆಂಗಣ್ಣಿಗೆ ಗುರಿಯಾದ ಗೋವಾದ ಬೂಟಾಟಿಕೆಯನ್ನು ಬಯಲುಮಾಡಬೇಕಾಗಿದೆ.
ಪರಿಸರ ನಾಶವಾಗುವುದೆನ್ನುವ ಕಾರಣವನ್ನು ಮುಂದಿಟ್ಟಿರುವ ಇದೇ ಗೋವಾ, ಮಹದಾಯಿ ನದಿಯ ತಟದಲ್ಲಿ ಜಲವಿದ್ಯುತ್ ಯೋಜನೆ ಯೋಜಿಸಿರುವ, ಜಲಸಾರಿಗೆಗಾಗಿ ನಾಲೆ ತೋಡಿರುವ, ಬೆಳಗಾವಿ ಪಣಜಿಯ ನಡುವೆ ರಸ್ತೆ ಅಗಲಿಸುವ ಕೆಲಸಕ್ಕಾಗಿ 4000ಕ್ಕೂ ಹೆಚ್ಚು ಮರಗಳನ್ನು ಕಡಿಯುವುದಕ್ಕೆ ಕೇಂದ್ರವು ಒಪ್ಪಿಗೆ ಕೊಡುವಾಗ ಇಲ್ಲದ ಕಾಳಜಿ ಮಹದಾಯಿ ಯೋಜನೆ ಮಾಡುವಾಗ ಯಾಕೆ ಮೂಡುತ್ತಿದೆ ಎನ್ನುವುದನ್ನು ಬಯಲುಮಾಡಬೇಕಿದೆ.
ಬರುವ ನವೆಂಬರ್ ತಿಂಗಳ 20ನೇ ತಾರೀಕಿಗೆ ಈ ನ್ಯಾಯಾಧಿಕರಣಕ್ಕೆ ಆರು ವರ್ಷವಾಗಲಿದ್ದು ಅವಧಿ ಪೂರ್ಣಗೊಳ್ಳಲಿದೆ. ಈಗ ಮುಂದಿರುವ ಆಯ್ಕೆಯೆಂದರೆ ಹೆಚ್ಚುವರಿ ಅವಧಿ ನೀಡುವುದು ಅಥವಾ ನವೆಂಬರ್ ಇಪ್ಪತ್ತಕ್ಕೆ ಮೊದಲು ತೀರ್ಪು ನೀಡುವುದು ಮಾತ್ರವೇ ಆಗಿದೆ. ಹೀಗೆ ಅವಧಿಯನ್ನು ನ್ಯಾಯಾಧೀಕರಣದ ಅವಧಿಯನ್ನು ವಿಸ್ತರಿಸುವುದಕ್ಕೆ ರೈತ ಮುಖಂಡರು ವಿರೋಧ ತೋರಿಸುತ್ತಾ ನವೆಂಬರ್ 20ಕ್ಕೆ ಮೊದಲೇ ತೀರ್ಪು ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಕರ್ನಾಟಕದ ಜನಪ್ರತಿನಿಧಿಗಳು ಗೋವಾದ ಜೊತೆ, ಪ್ರಧಾನಮಂತ್ರಿಗಳ ಮಧ್ಯಸ್ಥಿತಿಯ ಮೂಲಕ ಮಾತುಕತೆಯನ್ನಾಡಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಇಲ್ಲಿನ ಜನಪ್ರತಿನಿಧಿಗಳ ವಿರುದ್ಧವಾಗಿ ಪ್ರತಿಭಟಿಸುವ, ಹಳ್ಳಿಹಳ್ಳಿಗಳಿಗೆ ರಾಜಕಾರಣಿಗಳು ಕಾಲಿಡದಂತೆ ಮಾಡುವ ಮೂಲಕ ಈ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆಯಿದೆ. ಸದಾ ಬರಗಾಲದಿಂದ ನರಳುವ, ಹೊಟ್ಟೆಪಾಡಿಗಾಗಿ ಹಪಹಪಿಸುವ ಜನರ ಪಾಲಿಗೆ ಮಹದಾಯಿ ಮಹಾತಾಯಿ ಆಗಬೇಕಾಗಿದೆ. ಕುಡಿಯುವ ನೀರಿನ ದಾಹ ತಣಿಸುವ ಅಮೃತಮಯಿ ಆಗಬೇಕಿದೆ. ಇದೆಲ್ಲಕ್ಕಿಂತಾ ಮಿಗಿಲಾಗಿ ಪ್ರಾದೇಶಿಕ ರಾಜಕೀಯ ಪಕ್ಷವೊಂದರ ಕೊರತೆಯನ್ನು ಕನ್ನಡನಾಡು ತುಂಬಿಕೊಳ್ಳಬೇಕಾದ ಅಗತ್ಯ ಹಿಂದೆಂದಿಗಿಂತಲೂ ತೀವ್ರವಾಗಿದೆ.