ಮಹದಾಯಿ ಯೋಜನೆಗೆ ಚಾಲನೆ ಸಿಕ್ಕಿದ್ದು ಹೇಗೆ?
ಈ ನಡುವೆ 1975-78ರ ನಡುವೆ ಗುಳೇದಗುಡ್ದದಿಂದ ಶಾಸಕರಾಗಿದ್ದ ಬಿಎಂ ಹೊರಕೇರಿಯವರು ಬಾಳೆಕುಂದ್ರಿಯವರ ಜೊತೆಗೂಡಿ ಮಲಪ್ರಭಾ ಅಣೆಕಟ್ಟೆ ತುಂಬಲು ಈಗಿರುವ ನೀರು ಸಾಲದು, ಇದಕ್ಕೆ ಪಶ್ಚಿಮಘಟ್ಟದ ಮಹದಾಯಿ ನದಿಯ ನೀರಿನಿಂದ ಸಾಮಾನ್ಯ ಕೊರತೆಯನ್ನು ತುಂಬುವಷ್ಟು ನೀರನ್ನು ಮಲಪ್ರಭೆಗೆ ಹರಿಸಬೇಕು ಎನ್ನುವ ಯೋಜನೆಯನ್ನು ಮೊದಲ ಬಾರಿಗೆ ರೂಪಿಸಿ, ಫೆಬ್ರವರಿ 1976ರಲ್ಲಿ ವಿಧಾನ ಮಂಡಲದಲ್ಲಿ ಪ್ರಸ್ತಾಪ ಮಂಡಿಸಿದರು. ವಿರೋಧ ಪಕ್ಷದ ನಾಯಕರಾಗಿದ್ದ ಎಸ್.ಆರ್. ಬೊಮ್ಮಾಯಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಯ್ತು. ಈ ಸಮಿತಿಯು ಮಹದಾಯಿ ನದಿಯಿಂದ ನೀರನ್ನು ಮಲಪ್ರಭೆಗೆ ಸೇರಿಸುವ ಯೋಜನೆಯನ್ನು ಮಂಡಿಸಿತು.
1989ರಲ್ಲಿ ಎಸ್.ಆರ್ ಬೊಮ್ಮಯಿಯವರು ಮುಖ್ಯಮಂತ್ರಿಗಳಾದ ನಂತರ ಯೋಜನೆಗೆ ಚಾಲನೆ ಸಿಕ್ಕಿತು. ಬೆಳಗಾವಿ ಜಿಲ್ಲೆಯ ಖಾನಾಪುರದ ಸಮೀಪದ ದೇವಗಾಂವ್ ಎಂಬಲ್ಲಿ ಹುಟ್ಟುವ ಮಹದಾಯಿ ನದಿಯು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ. ಕೇಂದ್ರೀಯ ನೀರು ಆಯೋಗ ಈ ನದಿಯಲ್ಲಿ ಸುಮಾರು 180ರಿಂದ 220 ಟಿಎಂಸಿ ನೀರಿದ್ದು ನದಿಪಾತ್ರದ ಹರವು (ಜಲಾನಯನ ಪ್ರದೇಶ: ಕರ್ನಾಟಕ - 375 ಚ.ಕಿ.ಮೀ, ಮಹಾರಾಷ್ಟ್ರ - 77 ಚ.ಕಿ,ಮೀ. ಗೋವಾ - 1580 ಚ.ಕಿ.ಮೀ).
ಮಹದಾಯಿ ನದಿಗೆ ಹಲವಾರು ತೊರೆಗಳು, ಉಪನದಿಗಳಿವೆ. ಸರಳಾ ನದಿ, ಬಂಡೂರ, ಕೊಟ್ಟೆ, ಬಯಲುನಾಡು, ಬಂಡೂರಾ ನಾಲೆ, ಕಾರಂಜೋಳ ಇವುಗಳು ಪ್ರಮುಖವಾದವುಗಳು, ನದಿಗೆ ಸೇರುವ ನೀರಿನ ಲೆಕ್ಕದಂತೆ ಕರ್ನಾಟಕದ ಪಾಲು ಸುಮಾರು 47 ಟಿಎಂಸಿಯಷ್ಟಿದೆ.
ಕರ್ನಾಟಕದ ಮಲಪ್ರಭೆಗೆ ನದಿನೀರು ಹರಿಯುವಂತೆ ಮಾಡುವುದು ಮತ್ತು ಇದಕ್ಕಾಗಿ ಅಣೆಕಟ್ಟನ್ನು ಕಟ್ಟುವುದು ಎಂದು ಯೋಜಿಸಿತು. ಆ ಮೂಲಕ ವಿದ್ಯುತ್ ಉತ್ಪಾದಿಸಿ, ಸದರಿ ವಿದ್ಯುತ್ತನ್ನು ಗೋವೆಗೆ ಕೊಡುವುದೆಂದೂ ನೀರನ್ನು ಮಲಪ್ರಭೆಗೆ ಹರಿಸುವುದೆಂದೂ ಯೋಜನೆ ಮಾಡಿಕೊಂಡು, ಗೋವಾದ ಮುಖ್ಯಮಂತ್ರಿಯಾಗಿದ್ದ ಪ್ರತಾಪ್ ಸಿಂಗ್ ರಾಣೆಯವರ ಸರ್ಕಾರದ ಜೊತೆಯಲ್ಲಿ ಒಪ್ಪಂದಕ್ಕೂ ಸಹಿ ಹಾಕಲಾಯಿತು. ದುರದೃಷ್ಟವಶಾತ್ ರಾಷ್ಟ್ರಪತಿಗಳ ಆಳ್ವಿಕೆ ಹೇರಲ್ಪಟ್ಟು ಬೊಮ್ಮಾಯಿಯವರ ಸರ್ಕಾರ ಬಿದ್ದುಹೋದದ್ದು ಇಡೀ ಯೋಜನೆ ನೆನೆಗುದಿಗೆ ಬೀಳಲು ಕಾರಣವಾಯ್ತು.