ದೀವಿ ಹಲಸು ಬೆಳೆಸಿ.. ತರಕಾರಿ ಸಮಸ್ಯೆ ನೀಗಿಸಿ..
ಗಗನಕ್ಕೇರುತ್ತಿರುವ ತರಕಾರಿ ಬಗ್ಗೆ ಮಾತನಾಡುವವರು ತಮ್ಮ ಮನೆಯ ಹಿತ್ತಲಲ್ಲಿ ಅಥವಾ ಖಾಲಿ ಜಾಗಗಳಲ್ಲಿ ತರಕಾರಿಯಾಗಿ ಬಳಸಲ್ಪಡುವ ದೀವಿ ಹಲಸು(ಜಿಗುಜ್ಜೆ) ನೆಟ್ಟು ಬೆಳೆಸಿದರೆ ತರಕಾರಿ ಸಮಸ್ಯೆಯನ್ನು ಬಗೆಹರಿಸಬಹುದು. ಒಮ್ಮೆ ದೀವಿ ಹಲಸಿನ ರುಚಿಯನ್ನು ಸವಿದವರು ಎಂದಿಗೂ ಮರೆಯಲಾರರು. ಅಷ್ಟೆ ಅಲ್ಲ ಮಾರುಕಟ್ಟೆಯಲ್ಲಿ ಕಣ್ಣಿಗೆ ಬಿದ್ದರೆ ಮನೆಗೆ ಕೊಂಡೊಯ್ಯದಿರಲಾರರು. ಹಾಗಾಗಿ ಇದಕ್ಕೆ ಬೇಡಿಕೆ ಇದ್ದೇ ಇರುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆಂಗು, ಅಡಿಕೆ ತೋಟಗಳ ನಡುವೆ ಕಾಣಸಿಗುವ ದೀವಿ ಹಲಸು ಇದೀಗ ಕೊಡಗು, ಮೈಸೂರಿನ ಕೆಲವೆಡೆ ಕಂಡು ಬರುತ್ತದೆ. ಮೇಲ್ನೋಟಕ್ಕೆ ಅಲಂಕಾರಿಕ ಸಸ್ಯದಂತೆ ಕಾಣುವ ಇದೊಂದು ಜನಪ್ರಿಯ ತರಕಾರಿ. ಹಲಸು ವಂಶಕ್ಕೆ ಸೇರಿದ ದೀವಿ ಹಲಸು ಎಲೆ ಹಾಗೂ ಕಾಯಿಯಲ್ಲಿ ಹಲಸಿಗಿಂತ ಭಿನ್ನವಾಗಿದೆ.
ಇದು ಭಾರೀ ಮಳೆ ಬೀಳುವ ಮಲೆನಾಡಿನ ಗುಡ್ಡಗಳ ಓರೆಯಲ್ಲಿ, ಕರಾವಳಿ ಪ್ರದೇಶಗಳಲ್ಲಿ ಬೆಳೆಯುತ್ತದೆ. ಒಂದೆಡೆ ಕರಾವಳಿ ಪ್ರದೇಶ, ಮತ್ತೊಂದೆಡೆ ಮಲೆನಾಡು ಪ್ರದೇಶವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಹವಾಗುಣವು ದೀವಿ ಹಲಸಿಗೆ ಹೇಳಿ ಮಾಡಿಸಿದಂತಿದ್ದು, ಈ ಜಿಲ್ಲೆ ದೀವಿ ಹಲಸು ಬೆಳೆಗೆ ಹೆಸರುವಾಸಿಯಾಗಿದೆ.[ಹಾಪ್ ಕಾಮ್ಸ್ ನಲ್ಲಿ 10 ದಿನಗಳ ಕಾಲ ತರಕಾರಿ ಮೇಳ]
ಕನ್ನಡದಲ್ಲಿ ಬೇರು ಹಲಸು (ಬೇರಿನಿಂದಲೇ ಸಸ್ಯಾಭಿವೃದ್ಧಿ ಮಾಡುವ ಕಾರಣ ಈ ಹೆಸರು ಅನ್ವಯಿಸಬಹುದು), ದೀವಿ ಹಲಸು ಎಂದು ಕರೆದರೆ, ಆಂಗ್ಲ ಭಾಷೆಯಲ್ಲಿ ಬ್ರೆಡ್ ಪ್ರೂಟ್, ತಮಿಳಿನಲ್ಲಿ ಕರಿಪಾಲ, ತುಳುವಿನಲ್ಲಿ ಜೀಗುಜ್ಜೆ ಎಂದು ಕರೆಯುತ್ತಾರೆ. ದೀವಿ ಹಲಸನ್ನು ಜೀಗುಜ್ಜೆ ಎಂಬ ಹೆಸರಿನಿಂದಲೇ ಹೆಚ್ಚಾಗಿ ಕರೆಯುತ್ತಾರೆ. ಅಲ್ಲದೆ ಇದು ಜನಪ್ರಿಯ ಹೆಸರಾಗಿಯೂ ರೂಢಿಯಲ್ಲಿದೆ.
ತಮ್ಮ ಮನೆಯ ಸುತ್ತಮುತ್ತ ಖಾಲಿ ಜಾಗ ಇದ್ದದ್ದೇ ಆದರೆ ಅಲ್ಲೊಂದು ಜೀಗುಜ್ಜೆ ಮರವನ್ನು ನೆಟ್ಟು ಬೆಳೆಸಿದ್ದೇ ಆದರೆ ತರಕಾರಿ ಸಮಸ್ಯೆಯನ್ನು ನೀಗಿಸುವುದರೊಂದಿಗೆ ಆದಾಯವನ್ನು ಕೂಡ ನಿರೀಕ್ಷಿಸಬಹುದು ಎನ್ನುವುದರಲ್ಲಿ ಎರಡು ಮಾತಿಲ್ಲ.
ಇದನ್ನು ಹೇಗೆ ಬೆಳೆಯುತ್ತಾರೆ. ಈ ತರಕಾರಿಯಿಂದ ಮನುಷ್ಯನಿಗೆ ಯಾವ ವಿಟಮಿನ್ ಗಳು ದೊರೆಯುತ್ತದೆ? ಏನೆಲ್ಲಾ ತಿಂಡಿ ತಿನಿಸು ಮಾಡಬಹುದು ಎಂಬುದನ್ನು ತಿಳಿಯೋಣ.[ಈ ಮರ ಕಡಿಯುವುದೋ? ಬಿಡುವುದೋ? ನೀವೇ ಹೇಳಿ..]
ದೀವಿ ಹಲಸನ್ನು ಬೆಳೆಯುವುದು ಹೇಗೆ?
ದೀವಿ ಹಲಸಿನ ಸಸ್ಯಾಭಿವೃದ್ಧಿಯನ್ನು ಸಾಮಾನ್ಯವಾಗಿ ಬೇರುಗಳಿಂದ ಮಾಡುವುದು ಕಂಡು ಬರುತ್ತದೆ. ನೆಲದ ಆಳದಲ್ಲಿ ಹರಡಿ ಬೆಳೆಯುವ ಗಿಡದ ಬೇರನ್ನು ಸ್ವಲ್ಪ ಗಾಯಗೊಳಿಸಿ ಆ ನಂತರ ಅದನ್ನು ಮಣ್ಣಿನಿಂದ ಮುಚ್ಚಿದಾಗ(ತೇವಾಂಶ ನೋಡಿಕೊಂಡು ನೀರು ಹಾಯಿಸಬೇಕಾಗುತ್ತದೆ) ಗಾಯಗೊಳಿಸಿದ ಜಾಗದಿಂದ ಚಿಗುರೊಡೆದು ಗಿಡವಾಗುತ್ತದೆ. ಗಿಡದ ಬೇರನ್ನು ಉಳಿಯುವಂತೆ ಮಾಡಿ ಬೇರು ನೀಡಿ ಚಿಗುರೊಡೆದ ಸಸ್ಯವನ್ನು ಕತ್ತರಿಸಿ ಕುಂಡದಲ್ಲಿ ನೆಟ್ಟು ಬೆಳೆಸಿ ಆ ನಂತರ ಸೂಕ್ತ ಸ್ಥಳದಲ್ಲಿ ನೆಡುವ ಮೂಲಕ ಬೆಳೆಸಬಹುದು.
ದೀವಿ ಹಲಸಿನ ಮರದಲ್ಲಿ ಎಷ್ಟು ಕಾಯಿಗಳು ಬಿಡುತ್ತದೆ?
ದೀವಿ ಹಲಸು ಗಿಡವು ಸುಮಾರು ಹದಿನೆಂಟು ಮೀಟರ್ನಷ್ಟು ಎತ್ತರಕ್ಕೆ ಬೆಳೆಯುತ್ತದೆ. ಅಲ್ಲದೆ, ಗಿಡನೆಟ್ಟು ನಾಲ್ಕೈದು ವರ್ಷಗಳಲ್ಲಿ ಕಾಯಿ ಬಿಡಲಾರಂಭಿಸುತ್ತದೆ. ಈಗ ಗೂಟಿ ಕಸಿ ವಿಧಾನದ ಮೂಲಕ ಸಸ್ಯಾಭಿವೃದ್ಧಿ ಮಾಡುತ್ತಾರೆ. 15-20 ವರ್ಷಗಳವರೆಗೂ ಫಲ ನೀಡುತ್ತಾ ಸಾಗುವ ದೀವಿ ಹಲಸು ಮರವೊಂದರಲ್ಲಿ ಸಾವಿರಕ್ಕೂ ಹೆಚ್ಚಿನ ಕಾಯಿಗಳನ್ನು ಪಡೆಯಬಹುದು ಎನ್ನಲಾಗುತ್ತದೆ. ಆದರೆ ಸರಾಸರಿ ನೂರಕ್ಕೆ ಕಡಿಮೆಯಾಗದು. ವಾರ್ಷಿಕ ಬೆಳೆಯಾದ ಇದು ಜನವರಿ ಹಾಗೂ ಸೆಪ್ಟಂಬರ್ ಈ ಎರಡು ತಿಂಗಳುಗಳಲ್ಲಿ ಕಾಯಿಬಿಡುತ್ತದೆ. ಕಾಯಿಯೊಂದು ಮುಕ್ಕಾಲು ಕೆಜಿಯಿಂದ ಒಂದು ಕೆಜಿಗೂ ಅಧಿಕ ತೂಗುತ್ತದೆ.
ದೀವಿ ಹಲಸಿನಲ್ಲಿ ಏನೆಲ್ಲಾ ಗುಣಗಳಿವೆ?
ದೀವಿ ಹಲಸಿನಲ್ಲಿ ವಿಟಮಿನ್ ಸಿ, ಸೇರಿದಂತೆ ಅಯೋಡಿನ್, ಪ್ಲೋರಿನ್, ಕಾರ್ಬನ್, ಹೈಡ್ರೇಟ್, ಶರ್ಕರ ಪಿಷ್ಟ ಅಲ್ಲದೆ, ಕ್ಯಾಲ್ಸಿಯಂ, ರಂಜಕ, ಕ್ಯಾರೊಟಿನ್ ಮೊದಲಾದವುಗಳು ಅಧಿಕ ಪ್ರಮಾಣದಲ್ಲಿದೆ. ಅಲ್ಲದೆ ಇದರ ಬೇರಿನಲ್ಲಿಯೂ ಔಷಧೀಯ ಗುಣಗಳಿವೆ ಎನ್ನಲಾಗಿದೆ.
ದೀವಿ ಹಲಸಿನಿಂದ ಯಾವ ಯಾವ ತಿನಿಸು ತಯಾರಿಸಬಹುದು?
ಬಲಿತ ಕಾಯಿಗಳನ್ನು ವಿವಿಧ ತಿನಿಸುಗಳಾಗಿ. ಉಪ್ಪಿನಕಾಯಿಯಾಗಿಯೂ ಬಳಸಬಹುದು. ಕಾಯಿಯ ಹೊರ ಸಿಪ್ಪೆಯನ್ನು ತೆಗೆದು ತಿರುಳನ್ನು ತುಂಡು ಮಾಡಿ ಒಣಗಿಸಿ ಶೇಖರಿಸಿಡಬಹುದು. ಅಗಲವಾದ, ದಪ್ಪವಾದ ತುಂಡುಗಳನ್ನು ಉಪ್ಪು, ಖಾರ(ರುಚಿಗೆ ತಕ್ಕಂತೆ) ಸವರಿ ಎಣ್ಣೆ ಅಥವಾ ತುಪ್ಪ ಹಚ್ಚಿ ಹೆಂಚಿನ ಮೇಲಿಟ್ಟು ಬೇಯಿಸಿದರೆ ಇದು ಬ್ರೆಡ್ನಂತೆ ರುಚಿಯಾಗಿರುತ್ತದೆ. ಪಲ್ಯ, ಚಿಪ್ಸ್, ಸಂಡಿಗೆ, ಬೋಂಡಾ, ಹಪ್ಪಳ ಹಿಗೆ ವಿವಿಧ ತಿನಿಸಾಗಿಯೂ ಉಪಯೋಗಿಸಬಹುದು. ದೀವಿಗೆ ಮರದ ಕಾಂಡದಲ್ಲಿ ಚಿಗುರೊಡೆಯುವ ಅನುಪಯುಕ್ತ ಚಿಗುರನ್ನು ದನಗಳಿಗೆ ಮೇವಾಗಿಯೂ ನೀಡಬಹುದು.[ಈ ವಾರ ಮನೇಲಿ ಬೋರಿ ಮಾಡಿರಿ, ನಮ್ಮನ್ನೂ ಕರೀರಿ]