ನಮ್ಮ ನಂದಿನಿಗೆ ಮಾತಾಡಲು ಬಂದಿದ್ದರೆ...
ಲೀಟರಿಗೆ ಕೇವಲ 3 ರು. ಮಾತ್ರ ಏರಿಸಲಾಗಿದೆ ಎಂದು ಘೋಷಿಸಲಾಗಿದ್ದರೂ, ಅಸಲಿಗೆ ಹಸಿರು ಮತ್ತು ಕೇಸರಿ ಪಾಕೀಟಿನಲ್ಲಿ ಬರುವ ಹಾಲಿನ ದರವನ್ನು ಲೀಟರಿಗೆ 4 ರು.ನಷ್ಟು ಏರಿಸಲಾಗಿದೆ. ಹೇಳುವವರಿಲ್ಲ ಕೇಳುವವರಿಲ್ಲ. ಜನ ಮಾತ್ರ ತೆಪ್ಪಗೆ ಹೆಚ್ಚಿನ ರೊಕ್ಕ ತೆತ್ತು ಹಾಲು ಕೊಳ್ಳುತ್ತಿದ್ದಾರೆ. ನೆಂಟರು ಬಂದರೆ ಅರ್ಧ ಲೀಟರ್ ನೀರು ಸೇರಿಸಿ ಚಹಾ ಮಾಡುತ್ತಿದ್ದಾರೆ.
ಹೋಗಲಿ, ಲೀಟರಿಗೆ ನೀಲಿ ಪಾಕೀಟಿಗೆ 24, ಹಸಿರಿಗೆ 28, ಕೇಸರಿಗೆ 30 ರು. ನೀಡುತ್ತಿದ್ದೇವಾದರೂ, ಹಾಲಿನ ಗುಣಮಟ್ಟವಾದರೂ ಉತ್ಕೃಷ್ಟವಾಗಿದೆಯಾ? ಅದೂ ಇಲ್ಲ. ಭಾರತೀಯ ಆಹಾರ ಸುರಕ್ಷಾ ಗುಣಮಟ್ಟ ಪ್ರಾಧಿಕಾರ ನಡೆಸಿರುವ ತನಿಖೆಯಿಂದ ತಿಳಿದುಬಂದಿದ್ದೇನೆಂದರೆ, ಕರ್ನಾಟಕದ ಹಾಲಿನ ಗುಣಮಟ್ಟ ಶೇ.22ರಷ್ಟು ಕಳಪೆಯಾಗಿದೆ.
ಅಲ್ಲಿಗೆ ಮುಗಿಯಿತು. ಜನ ಪೇಪರು ಓದಿದರು, ಸುದ್ದಿ ತಿಳಿದರು, ಅಲ್ಲಲ್ಲಿ ಮಾತಾಡಿಕೊಂಡು ಸುಮ್ಮನಾದರು. ಯಾರಾದರೂ ಪ್ರತಿಭಟನೆ ಮಾಡಿದರಾ? ವ್ಯವಸ್ಥೆಯೊಂದಿಗೆ ಹೊಂದಿಕೊಂಡು ಹೋಗುವುದನ್ನು ರೂಢಿಸಿಕೊಂಡವರಿಗೆ ಅದಕ್ಕೆಲ್ಲಾ ಟೈಮಾದರೂ ಎಲ್ಲಿದೆ? ನೋಡುವುದನ್ನೆಲ್ಲಾ ನೋಡಿ ಕೊನೆಗೆ ಪ್ರತಿಭಟನೆಗೆಂದು ಸಾಕ್ಷಾತ್ ಬಂದಿದ್ದು ಯಾರು ಗೊತ್ತಾ?
ನನ್ ಅದರ್ ದ್ಯಾನ್ ಅವರ್ ಕಾಮಧೇನು. ನಾನು ಹಾಲನ್ನೇನೋ ಕರೆದು ಕೊಡುತ್ತೇನೆ. ಆದರೆ, ಅದರಲ್ಲಿ ಗೌಳಿ ಎಷ್ಟು ನೀರು ಸೇರಿಸುತ್ತಾನೆ, ಎಲ್ಲಿ ಪಾಶ್ಚರೀಕರಿಸಲಾಗುತ್ತದೆ, ಎಲ್ಲೆಲ್ಲಿ ಕಲಬೆರಕೆಯಾಗುತ್ತದೆ, ಯಾರ್ಯಾರು ಗೋಲ್ ಮಾಲ್ ಮಾಡುತ್ತಾರೆ ಎಂಬುದನ್ನು ತಿಳಿಯಲು ಇನ್ಸ್ಪೆಕ್ಷನ್ನಿಗಾಗಿ ಬಸವನಗುಡಿಯ ಪುಟ್ಟಣ್ಣ ರಸ್ತೆಯ ಒಂದು ಹಾಲಿನ ಬೂತಿಗೆ ಸ್ವತಃ ಬಂದಿದ್ದಳು ನಂದಿನಿ.
ನಮ್ಮ ನಂದಿನಿಗೇನಾದರೂ ಮಾತು ಬರುತ್ತಿದ್ದರೆ... ಏನು ಹೇಳುತ್ತಿತ್ತು? ಯಾರ್ಯಾರನ್ನು ತರಾಟೆಗೆ ತೆಗೆದುಕೊಳ್ಳುತ್ತಿತ್ತು? ಕಾಮೆಂಟ್ ತಾಣದಲ್ಲಿ ಬರೆದು ತಿಳಿಸಿ.