ಎಲ್ಲಕ್ಕೂ ಒಂದು ಕೊನೆಯಿದೆ, ಮಡೆಸ್ನಾನಕ್ಕೂ ಇರಲಿ
ಒಂದು ಕಡೆ ದಲಿತ ಕಾಲೋನಿಗಳಲ್ಲಿ ಓಡಾಡಿ ಹಿಂದೂ ಧರ್ಮವನ್ನು ಉದ್ಧರಿಸುವ ಮತ್ತು ಮತಾಂತರವನ್ನು ವಿರೋಧಿಸುವ ಮಾತನಾಡುವ ಶ್ರೀಗಳಿಗೆ ಮಡೆಸ್ನಾನದಿಂದ ಯಾವ ಧರ್ಮಕ್ಕೆ, ಹೇಗೆ ನಷ್ಟವಾಗಬಹುದು ಮತ್ತು ಹಿಂದೂ ಅನ್ನುವ ಧರ್ಮದ ಬಗ್ಗೆ ಮಾಧ್ಯಮಗಳ ಮೂಲಕ ಜಗತ್ತಿಗೆ ಯಾವ ಸಂದೇಶ ತಲುಪಬಹುದು ಅನ್ನುವುದರ ಅರಿವಿರಲಿಕ್ಕಿಲ್ಲವಾ? ಇದ್ದರೆ ಈ ರೀತಿ ಮೈಗೆ ಎಣ್ಣೆ ಹಚ್ಚಿಕೊಂಡವರಂತೆ ಹೇಳಿಕೆ ನೀಡುತಿದ್ದರಾ?
ಮಡೆ ಸ್ನಾನ ಅನ್ನುವ So Called ಧಾರ್ಮಿಕ ನಂಬಿಕೆ(?) ನಡೆದುಕೊಂಡು ಬಂದ ಹಾದಿಗೆ 400 ವರ್ಷಗಳ ಇತಿಹಾಸವಿದೆ. ಆದರೆ ತೀರಾ ಇದು ಮಾಧ್ಯಮಗಳಲ್ಲಿ ದೊಡ್ದ ಮಟ್ಟದ ಸುದ್ದಿ ಮಾಡಲಿಕ್ಕಾರಂಭಿಸಿದ್ದು ಬಹುಷಃ ಕಳೆದ ವರ್ಷದಿಂದಲೇ. ಸದ್ಯ, ಈಗಲಾದರೂ ನಮ್ಮ ದನಿ ಕೇಳಿಬರುತ್ತಿದೆ ಅನ್ನುವ ಸಂತೋಷದ ಜೊತೆ ಜೊತೆಗೆ ಇಂತಹ ಅನಿಷ್ಟ ಪದ್ಧತಿಗಳಿಗೆ ಬ್ರೇಕ್ ಹಾಕಬೇಕಾದ ಸರ್ಕಾರ ಮತ್ತು ಸರ್ಕಾರದ ಸಚಿವರೇ "ನೋ ಕಮೆಂಟ್ಸ್" ಅನ್ನುವುದು ನೋಡಿ ಬೇಸರವೂ ಆಗುತ್ತದೆ.
ಈ ಮಡೆ ಸ್ನಾನ ಅಂದರೆ ಬ್ರಾಹ್ಮಣರ ತಿಂದ ಎಂಜಲೆಲೆಗಳ ಮೇಲೆ ಉರುಳುವುದು. ಎಂಜಲೆಲೆಗೆ ಅದ್ಭುತ ಶಕ್ತಿಯಿದೆ ಅನ್ನುವುದಾದರೆ ಅದು ಯಾರು ತಿಂದು ಬಿಟ್ಟ ಎಲೆಯಾದರೂ ಆದೀತು ಅಲ್ಲವೇ? ಬ್ರಾಹ್ಮಣರೇ ಯಾಕೆ ಬೇಕು ಅನ್ನುವ ವಾದ ಮಾಡುವುದು ಅದೇ ಎಂಜಲೆಲೆಯ ಮೇಲೆ ಹೊರಳಾಡಿದಂತೆಯೇ ಸರಿ. ಹಿಂದೆ ನಮ್ಮಲ್ಲಿದ್ದಂತಹ ಸತಿ-ಪದ್ದತಿ, ವಿಧವಾ ಕೇಶ ಮುಂಡನ, ಬೆತ್ತಲೆ ಸೇವೆಯಂತೆ ಈ ಮಡೆ ಸ್ನಾನವು ಒಂದು ವಿಕೃತಿ ಅಲ್ಲದೆ ಮತ್ತಿನ್ನೇನು? [ಬಿದ್ದಿರುವುದು ಬೆಂಕಿಯಲ್ಲ ಎಂಜಲೆಲೆ]