ಹಿಂದೂಗಳ ಮೇಲೆ ಬಿದ್ದಿರುವುದು ಬೆಂಕಿಯಲ್ಲ ಎಂಜಲೆಲೆ
ವ್ಯಾಲಂಟೈನ್ಸ್ ಡೇಯನ್ನ ವಿಕೃತಿ ಅನ್ನುವವರಿಗೆ ಇದು ವಿಕೃತಿ ಅನ್ನಿಸುವುದಿಲ್ಲ ಅನ್ನುವುದು ಧೃತರಾಷ್ಟ್ರ ಪ್ರೇಮವಲ್ಲದೇ ಇನ್ನೇನು? ಜನರನ್ನ ಮಡೆ ಸ್ನಾನ ಮಾಡದಂತೆ ತಡೆಯಲಾಗದವರಿಗೆ ಮತಾಂತರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿದೆಯೆ? ಈಗಾಗಲೇ ಹಿಂದೂ ಧರ್ಮದ ಜಾತಿ ಪದ್ಧತಿ ಶೋಷಣೆಯ ಹಳೆ ರಾಗವನ್ನೇ ಹಾಡಿ ಹಾಡಿ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿರುವ ಮಿಷನರಿಗಳ ಬಾಯಿಗೆ ಈ ಮಡೆ ಸ್ನಾನ ಅನ್ನುವುದು ಬ್ರಹ್ಮಾಸ್ತ್ರದಂತೆ ಅನ್ನಿಸುವುದಿಲ್ಲವೇ? ಹಾಗೇ ಈ ವಿಷಯದಲ್ಲಿ ಕೇವಲ ಪೇಜಾವರ ಶ್ರೀಗಳಿಗೆ ಮಾತ್ರ ಯಾಕೆ ಪ್ರಶ್ನೆ ಕೇಳಬೇಕು? ಕರ್ನಾಟಕದ ಮೂಲೆ ಮೂಲೆಯ ಜಾತಿ-ಉಪಜಾತಿಗಳಿಗೆಲ್ಲ ಇರುವ ಸ್ವಾಮೀಜಿಗಳು ಉತ್ತರದಾಯಿಗಳೇ ಅಲ್ಲವೇ? ನೀವುಗಳ್ಯಾಕೆ ದೊಡ್ಡ ಮಟ್ಟದಲ್ಲಿ ಇದರ ವಿರುದ್ಧ ದನಿಯೆತ್ತುತ್ತಿಲ್ಲ?
ಪದ್ದತಿಯ ಹೆಸರಿನಲ್ಲಿ ನಡೆಯುವ ವಿಕೃತಿಗಳಿಗೆ ಸರ್ಕಾರವೇ ಬ್ರೇಕ್ ಹಾಕಬೇಕಿದೆ. ಧಾರ್ಮಿಕ/ಆಧ್ಯಾತ್ಮಿಕ ಕೇಂದ್ರಗಳಾಗಬೇಕಾದ ದೇವಾಲಯಗಳ ಗರ್ಭದಲ್ಲೇ ಅಸ್ಪೃಷ್ಯತೆ ಬೇರು ಬಿಡುವುದು ಯಾವುದೇ ಧರ್ಮಕ್ಕಾದರೂ ಅಪಾಯಕರವೇ. ಅದಕ್ಕೊಂದು ಪುಟ್ಟ ಉದಾಹರಣೆಯೆಂದರೆ ಈಗಲೂ ಬಹಳಷ್ಟು ದೇವಸ್ಥಾನಗಳಲ್ಲಿ ಬ್ರಾಹ್ಮಣರಿಗೆಂದೇ ಇರುವ ಪ್ರತ್ಯೇಕ ಊಟದ ವ್ಯವಸ್ಥೆ! ಮನುಷ್ಯರ ಜೊತೆಗೆ ಕೂತು ಊಟ ಮಾಡಲಾಗದವ್ರು ಜೊತೆಗೆ ಬಾಳ್ವೆ ಮಾಡಲಾದೀತೆ? ಇಂತ ಕೆಟ್ಟ ನಡೆಯನ್ನು ಸಂಪ್ರದಾಯದ ಹೆಸರೇಳಿ ಮುಂದುವರೆಸುವವರಿಗೆ ಜಾತಿ ನಿರ್ಮೂಲನೆ ಬಗ್ಗೆ ಮಾತನಾಡಲು ಬಾಯಿಯಾದರು ಎಲ್ಲಿಂದ ಬರುತ್ತದೆ?
ಸಾವಿರ ಕವಲೊಡೆದು ನಿಂತಿರುವ ಹಿಂದೂ ಅನ್ನುವ ಜೀವನ ಪದ್ಧತಿ ಒಂದಾಗಬೇಕು ಅನ್ನುವವರು "ಹಿಂದೂ" ಅಂತ ತನ್ನನ್ನು ತಾನು ಕರೆದುಕೊಳ್ಳುವ ಮೊದಲು "ಮಾನವ" ಅಂತ ತಿಳಿದುಕೊಳ್ಳಲೇ ಬೇಕು. ಅಷ್ಟೆಲ್ಲ ಸುಲಭವಾಗಿ ಬದಲಾಗುವ ಮಂದಿ ನಾವಲ್ಲ (ಹಿಂದೂಗಳು) ಬಿಡಿ. ಬದಲಾಗುವುದಿದ್ದರೆ ಉಡುಪಿಯ ಕೃಷ್ಣ ಕನಕದಾಸರೆಡೆಗೆ ತಿರುಗಿ ನಿಂತಾಗಲೇ ನಮ್ಮ ಜಾತಿ ಅನ್ನುವ ಕರ್ಮಕಾಂಡಕ್ಕೆ ಬೆಂಕಿ ಬೀಳಬೇಕಿತ್ತು. ಆದರೆ, ಬಿದ್ದಿರುವುದು ಬೆಂಕಿಯಲ್ಲ ಎಂಜಲೆಲೆ! ಮತ್ತದರ ಮೇಲೆಯೆ ನಾವು-ನಮ್ಮ ಮನೆ, ಮನಸ್ಸು ನಮ್ಮ ಧರ್ಮ ಬಿದ್ದು ಹೊರಳಾಡುತ್ತಿದೆ ಮತ್ತೆ ಧರ್ಮ ರಕ್ಷಕರ ಬಾಯಿಗಳು ಬಿದ್ದು ಹೋಗಿವೆ!