ನನ್ನ ಮಗನ ಜಾತಕದಲ್ಲಿ ನಾಗದೋಷ ಇದೆ
ಆದರೆ ಕಾಲಕಾಲಕ್ಕೆ ಏನೇನು ಆಗಬೇಕೋ ಅದೆಲ್ಲ ಆಗತ್ತೆ. ಆಗಬೇಕು, ಅದನ್ನು ದಾಟಿ ನಾವು ಮುಂದೆ ಹೋಗುತ್ತಿರಬೇಕು ಎಂಬ ನಂಬಿಕೆಯುಳ್ಳವನು ನಾನು. ಮಗುವಿಗೆ ವಿಪರೀತ ಕಾಯಿಲೆ ಬಂದು ಅವನು ಬದುಕಿ ಉಳಿದದ್ದು ಒಂದು ಪವಾಡ ಎಂದೆನಿಸಿತು. ನಮ್ಮ ಮಗನ ಜಾತಕ ನೋಡಿದ ಮನೆ ಪುರೋಹಿತರು ಹೇಳಿದರು:
"ನಿಮ್ಮ ಮಗುವಿನ ಜಾತಕದಲ್ಲಿ ನಾಗದೋಷ ಇದೆ. ಇದು ನಿವಾರಣೆ ಆಗತಕ್ಕದ್ದು. ಅದಕ್ಕೆ ಬೇಕಾದ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ನೀವು ಸಿದ್ದರಾಗಿ" ಎಂದು ಹಿತವಚನ ನುಡಿದರು. ಅದರಂತೆ ಭಾನುವಾರ 29 ನವೆಂಬರ್ ಬನಶಂಕರಿ ಮೊದಲನೇ ಹಂತ ಸೀತಾ ಸರ್ಕಲ್ ಸಮೀಪದ ವಿಜಯ ಧಾರ್ಮಿಕ ಸಭಾಂಗಣದಲ್ಲಿ ಆಶ್ಲೇಷ ಬಲಿ ಪೂಜೆ ಮಾಡಿದೆವು.
ಜಾತಕ ದೋಷ ರೀತ್ಯ ನನ್ನ ಮಗನಿಗೆ 10 ವರ್ಷ ಆಶ್ಲೇಷ ಬಲಿ ಪೂಜೆ ಸಲ್ಲಿಸಬೇಕು. ಮೊದಲ ಬಾರಿಗೆ ಬೆಂಗಳೂರಿನಲ್ಲೇ ಮಾಡಲಾಯಿತು. ಬರುವ ವರ್ಷಗಳಲ್ಲಿ ಇದನ್ನು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯ ದೇಗುಳ ಅಥವಾ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರದಲ್ಲಿರುವ ಘಾಟಿ ಸುಬ್ರಮಣ್ಯ ದೇವಸ್ಥಾನದಲ್ಲಿ ಮಾಡಬಹುದೆಂದು ಪುರೋಹಿತ ಮೋಹನ್ ಉಪಾಧ್ಯಾಯ ನಮಗೆ ತಿಳಿಸಿದರು.
ಮಗು ಹುಟ್ಟಿದ ತಿಂಗಳಲ್ಲಿ ಬರುವ ಆಶ್ಲೇಷ ನಕ್ಷತ್ರ ಯಾವುದೇ ದಿನ ಈ ಕೈಂಕರ್ಯ ಕೈಗೊಳ್ಳಬಹುದು. ಕುಕ್ಕೆ ಸುಬ್ರಮಣ್ಯದಲ್ಲಿ ಪ್ರತಿದಿನ ಸಾಮೂಹಿಕ ಆಶ್ಲೇಷ ಬಲಿ ಪೂಜೆಗೆ ವ್ಯವಸ್ಥೆ ಇರತ್ತೆ. ಏಕಾದಶಿ ಮತ್ತು ಅಮಾವಾಸ್ಯೆ ದಿನ ಇರುವುದಿಲ್ಲ.
ಅಂತೂ ನಮ್ಮ ಮೊದಲ ಆಶ್ಲೇಷ ಬಲಿ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿಕೊಂಡೆವು ಎಂದು ನನಗೆ ನಾನೇ ಹೇಳಿಕೊಳ್ಳಬೇಕು. ಮನೆಗೆ ಮತ್ತು ಮನಕ್ಕೆ ಹತ್ತಿರವಾಗಿರುವ ನೆಂಟರಿಷ್ಟರ ಸಾಮೀಪ್ಯದಲ್ಲಿ ಮತ್ತು ಗುರುಹಿರಿಯರ ಆಶೀರ್ವಾದದಿಂದ ಇದು ಸಾಂಗವಾಯಿತು. ಪೂಜೆ ಮತ್ತು ಪ್ರಸಾದ ಮುಗಿದ ನಂತರ ನಮ್ಮ ತಂದೆಯವರ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತ್ತು. ನನಗೆ ಅರ್ಥವಾಯಿತು. [ಮುಂದೆ : ನೆಮ್ಮದಿ ತಂದ ಪೂಜೆ]