ಮತ್ತೂರಿನಲ್ಲಿ 1400 ವರ್ಷ ಹಳೆಯ ಗುಡಿಗೆ ಹೊಸ ಮೆರುಗು
ಈಗ ಮತ್ತೂರಿನ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಸುಮಾರು 1400 ವರ್ಷದ ಇತಿಹಾಸವಿರುವ ಶ್ರೀ ಭೀಮೇಶ್ವರ ದೇವಸ್ಥಾನ ಸದ್ದುಗದ್ದಲವಿಲ್ಲದೆ, ಯಾವುದೇ ಆಡಂಬರವಿಲ್ಲದೆ, ರಾಜಕೀಯದ ಲೇಪನವಿಲ್ಲದೆ ಎದ್ದು ನಿಂತಿದೆ. ಮತ್ತೂರಿನಿಂದ ಸುಮಾರು 1 ಕಿಲೋಮೀಟರ್ ದೂರದಲ್ಲಿರುವ ಈ ದೇವಸ್ಥಾನ ಸಾರ್ವಜನಿಕರ ದರ್ಶನಕ್ಕೆ ಲಭ್ಯವಿದೆ. ಸಮೃದ್ಧ ತುಂಗಾ ನದಿಯ ದಡದಲ್ಲಿ ಶುದ್ಧ ಹಸಿರಿನ ರಮಣೀಯ ವಾತಾವರಣದ ಮಡುವಿನಲ್ಲಿ ಅತ್ಯಂತ ಪುರಾತನವಾದ, ಆದರೆ ಅವಸಾನದ ಅಂಚಿನಲ್ಲಿದ್ದ ಈ ದೇವಸ್ಥಾನವನ್ನು ಮರು ಜೋಡಿಸಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಾರ್ವಜನಿಕರ ದರ್ಶನಕ್ಕೆ ಅನುವುಮಾಡಿಕೊಡಲಾಗಿದೆ.
ಸೂರ್ಯೋದಯವಾದ ಮರುಕ್ಷಣದಲ್ಲೇ ಸೂರ್ಯನ ಪ್ರಥಮ ಕಿರಣ ದೇವಾಲಯದ ಒಳಗಿರುವ ಈಶ್ವರ ಲಿಂಗದ ಮೇಲೆ ಬೀಳುವ ದೃಶ್ಯಕ್ಕೆ ಇತಿಹಾಸವಿದೆ. ಅತ್ಯಂತ ಪುರಾತನವಾದ ಈ ದೇವಸ್ಥಾನ ಹಲವು ಇತಿಹಾಸ ಹಾಗೂ ವಿಶೇಷ ನಂಬಿಕೆಗಳಿಂದ ಕೂಡಿದ್ದು ಕೇವಲ ದೈವಭಕ್ತರಿಗಷ್ಟೇ ಅಲ್ಲದೆ ಇತಿಹಾಸದ ಅಧ್ಯಯನಕಾರರಿಗೂ ಹಲವು ವಿಶೇಷ ಮಾಹಿತಿಗಳನ್ನೂ ಒದಗಿಸಬಲ್ಲುದಾಗಿದೆ. ಕಾರಣ, ತುಂಗಾ ನದಿಯ ದಡದಲ್ಲಿ ಇದೇ ರೀತಿಯ ಪುರಾತನವಾದ ದೇವಸ್ಥಾನಗಳು ಇರುವಿಕೆಯ ಬಗ್ಗೆ ಹಲವಾರು ಮಾಹಿತಿಗಳು ಕಾಣಸಿಗುತ್ತವೆ.
ಒಂದು ಒಳ್ಳೆಯ ದೈವಿಕ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಹಾಗೂ ಪ್ರಾಚೀನ ದೇವಾಲಯದ ರಕ್ಷಣೆಯ ಕಾರಣಕ್ಕಾಗಿ ಸಾಕಷ್ಟು ಶ್ರಮ ವಹಿಸಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸವನ್ನು ಬಹುತೇಕ ಪೂರ್ಣಗೊಳಿಸಿಯಾಗಿದೆ. ಇನ್ನು ಹಲವಾರು ಜನರ ಸಹಾಯ ಹಾಗೂ ಶ್ರದ್ಧೆಯ ಅವಶ್ಯಕತೆಯಿದೆ. ಎಲ್ಲ ಸಹೃದಯ ಆಸ್ತಿಕರಿಗೂ ಹಾಗೂ ಇತಿಹಾಸದ ಆಸಕ್ತರಿಗೂ ಆತ್ಮೀಯ ಸ್ವಾಗತ.
ದೇವಸ್ಥಾನ ತಲುಪುವ ಬಗ್ಗೆ : ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿ ತಿರುವು ತೆಗೆದುಕೊಂಡು ಮತ್ತೂರಿನ ಮುಖ್ಯರಸ್ತೆಯ ಮೂಲಕ ಮತ್ತೂರನ್ನು ತಲುಪಿ ಅಲ್ಲಿಂದ ಕುಸ್ಕೂರು ಎಂಬ ಊರಿಗೆ ತೆರಳುವ ಮಾರ್ಗದಲ್ಲಿ (ಮತ್ತೂರು ಮುಖ್ಯರಸ್ತೆಯೇ) ಊರಿಗೆ ಮುಂಚೆ ಬಲಕ್ಕೆ ತಿರುಗಿದರೆ ಸ್ವಲ್ಪ ದೂರಕ್ಕೆ ಸಿಗುತ್ತದೆ ಶ್ರೀ ಭೀಮೇಶ್ವರ ದೇವಸ್ಥಾನ. ಭರ್ತಿ ಮಳೆಯಾಗಿ ತುಂಗೆ ತುಂಬಿ ಹರಿಯುತ್ತಿದ್ದರೂ ಅಲ್ಲಿ ಒಮ್ಮೆ ಪ್ರವಾಸ ಕೈಗೊಳ್ಳಲು ಇದು ಸಕಾಲ. ಹೆಚ್ಚಿನ ಮಾಹಿತಿಗೆ ದೂರವಾಣಿ 94499 77288.