ಮಳೆಯ ಪರಿಮಳ ಎಲ್ಲೆಲ್ಲಿಗೆ ತಲುಪಿಲ್ಲ?
ಅರೆ! ಹೀಗೆಲ್ಲ ಯೋಚನೆಗಳು ಮೂಡಿ ಅದೆಷ್ಟು ಕಾಲವಾಗಿತ್ತು! ಪ್ರೇಮಿಗಳಿಗೆ ರೋಮ್ಯಾಂಟಿಕ್ ಎನಿಸುವ, ಮಕ್ಕಳಿಗೆ ಕುತೂಹಲ ಮೂಡಿಸುವ, ದೊಡ್ಡವರಲ್ಲಿ ಹಳೆ ನೆನಪುಗಳನ್ನು ಕೆದಕಿ ಭಾವನೆಗಳನ್ನು ಕೆಣಕುವ, ನಿಸರ್ಗ ಸಿರಿಯ ಸೊಬಗನ್ನು ಚಿತ್ರಿಸುವ ರಮ್ಯ ರಮಣೀಯ ಮಳೆ ಇನ್ನಿಲ್ಲವಾಯಿತೆ? ಎಂಥವರಲ್ಲೂ ಅಡಗಿ ಸುಪ್ತವಾಗಿರುವ ಕವಿತ್ವವನ್ನು ಜಾಗೃತಗೊಳಿಸುವ, ಯಾವ ಮಾನವ ವಿರಚಿತ ಕಲೆಯೂ ಸಪ್ಪೆಯೆನಿಸಿಬಿಡುವ ಆ ಮಳೆಯ ಸೌಂದರ್ಯಕ್ಕೆ, ಅದು ತೆರೆದಿಡುವ ಅಗಣಿತ ವಿಸ್ಮಯಗಳಿಗೆ, ಅದು ತೆರೆಕಾಣಿಸುವ ಮೋಹಕ ಚಿತ್ರಗಳಿಗೆ, ಅದು ತಂದುಕೊಡುವ ಪುಳಕಗಳಿಗೆ ಬೆರಗಾಗುವುದನ್ನು, ಸ್ಪಂದಿಸುವುದನ್ನು, ಅದರ ಸವಿಯ ಆಸ್ವಾದಿಸುವುದನ್ನು ಮನಸ್ಸು ಮರೆತೇ ಹೋಗಿದೆಯೊ ಹೇಗೆ?
ಯಾವುದಕ್ಕೂ ಪುರುಸೊತ್ತು ಸಿಗದ ಅತಿವೇಗದ ಬದುಕಿನಲ್ಲಿ ಈ ಸಂಗತಿಗಳೆಲ್ಲ ಗೌಣವಾಗಿಬಿಟ್ಟವೆ? ಬಿಸಿಬಿಸಿ ಚಹಾ ಹೀರುತ್ತ ಜೊತೆಯಲ್ಲಿ ಮೆಣಸಿನಕಾಯಿ ಬಜ್ಜಿ ತಿನ್ನುವ ಹಂಬಲ, ಕಿಟಕಿಯ ಪಕ್ಕದಲ್ಲಿ ನಿಂತು ಮಳೆನೀರು ಎರಚಿಸಿಕೊಳ್ಳುವ ತುಂಟ ಆಸೆ, ಮನೆಯೆದುರಲ್ಲಿರುವ ತೊಯ್ದ ಸಂಪಿಗೆ ಮರವನ್ನು ಜೋರಾಗಿ ಅಲುಗಾಡಿಸಿ ಮತ್ತೊಂದು ಮಳೆ ಸುರಿಸಿ ತಾಕತ್ತು ಮೆರೆವ ಹುಡುಗಾಟ ಇವೆಲ್ಲ ಮಳೆಯ ಜೊತೆಯಲ್ಲೆ ಹುಟ್ಟುವಂಥ ವಿನೋದಗಳು, ಬದುಕಿನ ಏಕತಾನತೆಯನ್ನು ಮುರಿದುಹಾಕುವ ಸುಲಭ ಸಾಧನಗಳು, ಜೀವನಪ್ರೀತಿಯನ್ನು ಉಕ್ಕಿಸುವಂಥ ಆಟಗಳು. ಇವೆಲ್ಲವನ್ನು ನಾವು ಬಲವಂತವಾಗಿ ದೂರವಿಟ್ಟಿದ್ದೇವೆ. ಇದಾವುದನ್ನೂ ಮಾಡುತ್ತಾ ಕೂರಲು ವ್ಯವಧಾನವಿಲ್ಲ ಎಂಬ ಕಟು ನಿರ್ಧಾರ ಕೈಗೊಂಡು ಒಪ್ಪಲೊಲ್ಲದ ಮನಸ್ಸನ್ನು ಲಗಾಮು ಹಾಕಿ ಒಪ್ಪಿಸಿಬಿಟ್ಟಿದ್ದೇವೆ.
ಆ ಅಸಂಖ್ಯ ಟಿಸಿಲುಗಳ ತುದಿಯಲ್ಲಿ ಫಳ ಫಳನೆ ಹೊಳೆಯುತ್ತಿವೆ ಮುತ್ತಿನ ಮಣಿಗಳು... | |
ಇವೆಲ್ಲವೂ ಸಾಲದೆಂಬಂತೆ ವಿದ್ಯುತ್ ಸಮಸ್ಯೆ. ಮರದ ಕೊಂಬೆ ಮುರಿದು ರಸ್ತೆಗಳಲ್ಲಿ ಬೀಳುವುದು. ಗೋಡೆ ಕುಸಿದು ಜೀವ ಕಮರುವುದು, ಮನೆಗಳಲ್ಲಿ ನೀರು ನುಗ್ಗುವುದು. ಒಂದೆರಡಲ್ಲ ನಗರಗಳಲ್ಲಿ ಉಂಟಾಗುವ ಭಾನಗಡಿ. ಒಟ್ಟಿನಲ್ಲಿ ತುಂಬ ಹಚ್ಚಿಕೊಂಡಿದ್ದ, ಮಳೆರಾಯನೆಂಬ ಆತ್ಮೀಯ ಗೆಳೆಯನನ್ನು, ಅವನ ಸಾಂಗತ್ಯವನ್ನು ಇದ್ದಕ್ಕಿದ್ದ ಹಾಗೆ ಕಾರಣವೇ ತಿಳಿಯದೆ ಉಪೇಕ್ಷಿಸುತ್ತಿರುವಂಥ ಭಾವ.
ನಗರವಾಸಿಯಾದ (ಗ್ರಾಮೀಣ ಜನತೆ ಎಂದು ಓದಿಕೊಳ್ಳುವುದು) ಎಂಥವರಿಗೂ ಈ ವಿಚಾರಗಳೆಲ್ಲ ಹಾಸ್ಯಾಸ್ಪದ ಎನಿಸಬಹುದು, ಇಂಪ್ರಾಕ್ಟಿಕಲ್, ಸಿಲ್ಲಿ, ಸೆಂಟಿಮೆಂಟಲ್ ಎಂದು ತೋರಬಹುದು. ಮಳೆಯ ಬಗೆಗಿನ ಸುಂದರ ಕಲ್ಪನೆಗಳೆಲ್ಲ ಇನ್ನಿಲ್ಲ, ಅವೇನಿದ್ದರೂ ಕಾಲೇಜಿನ ವಾರ್ಷಿಕ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಕವಿತೆಗಳಲ್ಲಿ ಮಾತ್ರ, ಮಲೆನಾಡಿನ ಪ್ರವಾಸ ಕೈಗೊಂಡ ಆ ಮೂರು ದಿನಗಳಿಗೆ ಮಾತ್ರ ಸೀಮಿತ ಎಂದು ನಮಗೆ ನಾವೇ ಹೇಳಿಕೊಂಡಂತಿದೆ. ಮಳೆಯೆಡೆಗಿನ ಈ ನಿರ್ಭಾವುಕ ಮನೋವೃತ್ತಿಯಿಂದ ತಪ್ಪಿಸಿಕೊಳ್ಳಲು ಮಾರ್ಗೋಪಾಯಗಳೇ ಇಲ್ಲದಂತಾಗಿದೆ. ಟ್ರಾಫಿಕ್ ಜಾಮ್ ರಾಕ್ಷಸನ ಅಟ್ಟಹಾಸಕ್ಕೆ ಬೆದರಿ ನಲುಗಿ ಒಳಮನಸ್ಸಿನ ಸಂವೇದನೆಗಳನ್ನೆಲ್ಲ ನಿವೃತ್ತಿಗೆ ನೂಕಲೇಬೇಕಾಗಿದೆ. ಹೀಗೆಯೆ ಇದ್ದುಬಿಡಬೇಕೆಂದು ಅಂದುಕೊಂಡು ಅದನ್ನೆ ಯಾವುದೋ ನಿಯಮದಂತೆ ನಿಷ್ಠೆಯಿಂದ ಪಾಲಿಸುತ್ತಲೂ ಇದ್ದೇವೆ.
ಕಾಲಚಕ್ರ ತಿರುಗಿ ಮತ್ತೊಮ್ಮೆ ಮುಂಗಾರಿನ ಹೊಸ್ತಿಲಲ್ಲಿದೆ. ಆಗಸದಲ್ಲಿ ಮೋಡಗಳ ಬಳಗ ಜಮಾಯಿಸುತ್ತಿದೆ. ಗುಡುಗು-ಮಿಂಚುಗಳು ಹಣಕಿ ಹಾಕುತ್ತಿವೆ. ಅಲ್ಲಲ್ಲಿ ಮಳೆಯಾಗುತ್ತಿರುವ ವರದಿಗಳು ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿವೆ. ಮಳೆಯ ಆಟಾಟೋಪಗಳು ಒಂದಷ್ಟು ಕರುಣೆ ತೋರಲಿ. ಟ್ರಾಫಿಕ್ ಜಾಮ್ ಗಳ ಮಧ್ಯದಲ್ಲೂ ಮಳೆಯ ಸಾವಿರಾರು ಬಣ್ಣಗಳು ಕಣ್ಣಿಗೆ ಗೋಚರಿಸುವಂತಾಗಲಿ. ಬಿಡುವಿರದ ಓಟಗಳ ನಡುವೆ ಅದುಮಿಟ್ಟಿದ್ದ ಮನಸ್ಸು ಒಂದಿಷ್ಟು ಸಡಿಲವಾಗಲಿ, ಮಳೆಯ ತುಂಟಾಟಗಳಿಗೆಲ್ಲ ಮತ್ತೆ ಜೀವ ಬರಲಿ ಸವಿಭಾವ ಮರಳಲಿ. ಈ ಬಾರಿಯಾದರೂ ಮಳೆರಾಯನ ಹಳೆಯ ಗೆಳೆತನ ನೆನಪಾಗಲಿ. ಅವನನ್ನು ಬಾಹುಗಳಲ್ಲಿ ತಬ್ಬಿಕೊಳ್ಳಲಾಗದಿದ್ದರು ಬೊಗಸೆಗಳಲ್ಲಿ ತುಂಬಿಕೊಳ್ಳುವಂತಾಗಲಿ. ಮತ್ತೊಮ್ಮೆ ಪುಟಿದೇಳುವುವೆ ಆ ಮುಗ್ಧ ಸುಂದರ ಭಾವಗಳು?