ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಬ್ಬಚ್ಚಿ : ಬದುಕಿದೆಯಾ ಬಡಜೀವವೆ

|
Google Oneindia Kannada News

City sparrows win over electromagnetism
ಕಣ್ಮರೆಯ ಹಾದಿಯಲ್ಲಿದ್ದ ಗುಬ್ಬಿಗಳು ಮತ್ತೆ ಕಾಣಿಸಿಕೊಂಡಿವೆ. ಜೀವವಿಕಾಸದ ಮಹತ್ವದ ಅಂಶವೊಂದು ಎಲ್ಲರಿಗೆ ಗೋಚರಿಸಿದೆ. ವಿಷಕ್ಕೆ ವಿಷವೇ ಮದ್ದು. ಮುಳ್ಳು ತೆಗೆಯಲು ಮುಳ್ಳೇ ಬೇಕು ಮುಂತಾದ ಮಾತುಗಳು ನಿಜವಾಗಿದೆ. ಮೊಬೈಲ್ ವಿಕಿರಣಗಳ ಜೊತೆಗಿನ ಸೆಣೆಸಾಟದಲ್ಲಿ ಗುಬ್ಬಿ ಬಾಗಷಃ ಗೆದ್ದಿದೆ. ಎಲ್ಲರಿಗೂ ಅಚ್ಚುಮೆಚ್ಚಿನ ಪುಟ್ಟ ಗುಬ್ಬಚ್ಚಿ ಬದುಕಿ ಬಂದಿದ್ದು ಎಲ್ಲರಿಗೂ ಖುಷಿ ತಂದಿದೆ. ಮನೆಯಂಗಳದಲ್ಲಿ ಹರವಿದ ಅಕ್ಕಿಕಾಳಿನ ಮೊರದಲ್ಲಿ ಗುಬ್ಬಿಯ ಕಾಲ್ಗುರುತುಗಳು ಮೂಡತೊಡಗಿವೆ.

ನಗರವಾಸಿಗಳಿಗಂತೂ ಈ ಅಂಗುಲ ಉದ್ದದ ಉಣ್ಣೆ ಉಂಡೆಯಂತಹ ಪಕ್ಷಿಯ ಬಗ್ಗೆ ವಿಶೇಷ ಅಕ್ಕರೆ. ಅಂಗಡಿಯ ಶೆಲ್ಪಿನ ಮೂಲೆಯಲ್ಲಿ, ಕ್ಯಾಲೆಂಡರಿನ ಹಿಂದೆ, ಗೋಡೆಗೆ ನೇತಿಟ್ಟ ದೇವರ ಫೋಟೋದ ಹಿಂಬಾಗದಲ್ಲಿ, ಬೆಳಕಿಂಡಿಯ ಕಿಟಕಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಗರಿಗಳನ್ನು, ಹುಲ್ಲು ಗರಿಕೆಗಳನ್ನು ತಂದು ಬೆಚ್ಚನೆಯ ಗೂಡುಕಟ್ಟಿ ಸಂಸಾರ ಹೋಡುವ ಈ ಹಕ್ಕಿ ನಿರುಪದ್ರವಿ. ಆದರೆ ಈ ಪುಟ್ಟ ಜೀವಕ್ಕೆ ಮನುಷ್ಯನ ಉಪದ್ರವ ಮಾತ್ರ ಸಂತತಿಯೇ ನಾಶವಾಗುವಷ್ಟು ಕಾಡಿಸಿದ್ದು ಖರೆ.

ಆಧುನಿಕ ಅತ್ಯಾವಶ್ಯಕ ವಸ್ತುವಾಗಿರುವ ಮೊಬೈಲ್ ಸಂಜ್ಞೆಗಳಿಂದಾಗಿ ಗುಬ್ಬಚ್ಚಿಯ ಸಂತತಿಯೇ ನಾಶವಾಗುವ ಹಂತ ತಲುಪಿದ್ದು ಹಳೆಯ ಸಂಗತಿ. ವಿಜ್ಞಾನಿಗಳು ಗುಬ್ಬಿಯ ಮೇಲೆ ಸಂಜ್ಞೆಗಳು ಬೀರಿದ ಪರಿಣಾಮವನ್ನು ಆಧಾರವಾಗಿಟ್ಟುಕೊಂಡೇ ಮೊಬೈಲ್ ಮನುಷ್ಯನ ಮೇಲೆ ಅದರಲ್ಲೂ ಚಿಕ್ಕಮಕ್ಕಳ ದೇಹದ ಮೇಲೆ ಬೀರುವ ಅಪಾಯಗಳ ಕುರಿತು ಪ್ರತಿಪಾದಿಸಿದ್ದರು. ಹೃದಯ, ಮೆದುಳು ಮುಂತಾದ ಸೂಕ್ಷ್ಮ ಅವಯವಗಳ ಮೇಲೆ ಅಪಾಯವುಂಟುಮಾಡಿ, ಕ್ಯಾನ್ಸರ್‌ನ ಹುಟ್ಟಿಗೆ ಕೂಡ ಕಾರಣವಾಗಬಹುದು ಎಂದು ಎಚ್ಚರಿಸಿದ್ದರು.

ಈ ಕುರಿತು ಹಲವು ವಿಸ್ತ್ರತ ಸಂಶೋಧನೆಗಳು ನಡೆದವು. ಮೊಬೈಲ್ ವಿಕಿರಣಗಳು ಬೀರುವ ಅಪಾಯಗಳೂ ಸಿದ್ಧವಾದವು. ಜನರು ವಿಜ್ಞಾನಿಗಳು ನೀಡಿದ ವರದಿಯಿಂದ ಕಂಗಾಲಾದರು. ಆದರೆ ಮೊಬೈಲ್ ಬಳಕೆಯಿಂದ ವಿಮುಖವಾಗುವ ಮನಸ್ಸನ್ನು ಯಾರೂ ಮಾಡಿಲ್ಲ. ಅಪಾಯದ ಅರಿವಿದ್ದರೂ ಮೊಬೈಲ್ ಕಂಪನಿಗಳು ನೀಡುವ ತರಹೇವಾರಿ ಆಫರ್‌ಗಳಿಗೆ ಮನಸೋತು ಖರೀದಿಸಿದರು. ಇದೆಲ್ಲದರ ಪರಿಣಾಮ ನೇರವಾಗಿ ಆಗಿದ್ದು ಗುಬ್ಬಚ್ಚಿಯೆಂಬ ಪುಟ್ಟ ಪಕ್ಷಿಯಮೇಲ್ಹಾಗೂ ಇಂತದೇ ಇನ್ನಷ್ಟು ಸೂಕ್ಷ್ಮ ಜೀವಿಗಳ ಮೇಲೆ. ಸುಮಾರು 10 ವರ್ಷಗಳ ಕಾಲ ಒಂದೇ ಸಮನೆ ಈ ಗುಬ್ಬಿಯ ಸಂತತಿಯು ಕ್ಷೀಣಿಸಿತು. ಆದರೆ ಇದೀಗೆ ಮತ್ತೆ ಕಾಣಿಸಕೊಳ್ಳತೊಡಗಿವೆ. ದುಂಡುದುಂಡಾಗಿ ಅಂಗಡಿಯಮುಂಗಟ್ಟುಗಳ ಮುಂದೆ, ಬಸ್ಟ್ಯಾಂಡ್‌ನ ಟ್ಯೂಬ್‌ಲೈಟ್ ಮೇಲೆ, ಪುಸ್ತಕದ ಅಂಗಡಿಯಲ್ಲಿ ನೇತುಬಿಟ್ಟ ಪುಸ್ತಕಗಳ ಮೇಲೆ ಗುಬ್ಬಿಗಳ ರೆಕ್ಕೆ ಸದ್ದು ಕೇಳತೊಡಗಿದೆ.

ಜೀವ ವಿಜ್ಞಾನದ ಮಹತ್ವದ ಅಂಶವೊಂದು ಸಾಮಾನ್ಯನ ಅರಿವಿಗೂ ಬರುವಂತಾಗಿದೆ. ಗುಬ್ಬಿಗಳ ದೇಹದಲ್ಲಿ ಮೊಬೈಲ್ ವಿಕಿರಣಗಳನ್ನು ಜಯಿಸುವಂತೆ ಮಾರ್ಪಾಟಾಗಿರಬಹುದು. ಈ ಬದಲಾವಣೆಯೇ ಮತ್ತೆ ಗುಬ್ಬಿಗಳು ಕಾಣಿಸಿಕೊಳ್ಳಲು ಕಾರಣವಾಗಿರಲೂಬಹುದು.

ಜೀವ ವಿಕಾಸದ ಪ್ರಮುಖ ಘಟ್ಟದಲ್ಲಿ ಅಳಿಯಲಿರುವ ಸಂತತಿಯೊಂದು ಉಳಿಯುವುದಕ್ಕಾಗಿ ಪ್ರಕೃತಿಯ ಒತ್ತಡಗಳ ಜೊತೆಗೆ ಜಿದ್ದಿಗೆ ಬಿದ್ದು ಗೆದ್ದಿದೆ ಎನ್ನಬಹುದು. ಇದೇ ರೀತಿ ಮನುಷ್ಯನು ಕೂಡ ನಿರಂತರವಾಗಿ ಮೊಬಾಯಿಲ್ ಸಂಸರ್ಗದಲ್ಲಿಯೇ ಇರುತ್ತಾನಾದ್ದರಿಂದ ಅಪಾಯಗಳನ್ನು ಜಯಿಸಿದರೂ ಜಯಿಸಬಹುದು. ಈ ನಿಟ್ಟಿನಲ್ಲಿ ವಿಜ್ಞಾನಿಗಳು ಸಂಶೋಧನೆಗಳನ್ನು ಕೈಗೊಂಡು ವಾಸ್ತವಾಂಶಗಳನ್ನು ಖಚಿತಪಡಿಸಬೇಕಾಗಿದೆ.

IS ELECTROSMOG KILLING THE SPARROW?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X