ಯಡಿಯೂರಪ್ಪನವರಿಗೆ ಬದನೆಕಾಯಿ ಮನವಿ
ಇಂಥಾ ಒಂದು ವಿದ್ಯೆ ಅಥವಾ ವಾಮಾಚಾರ ಇದೆಯೋ ಇಲ್ಲವೋ ಎಂಬ ತನಿಖೆ ಮಾಡಲಿಕ್ಕಾಗಲಿ ಅಥವಾ ಅದರ ಬಗ್ಗೆ ಸಂಶೋದನೆ ಮಾಡಲಿಕ್ಕಾಗಲಿ ಈ ವಿಚಾರ ಪ್ರಸ್ತಾಪ ಮಾಡುತ್ತಿಲ್ಲ. ಆದರೆ ಇದೀಗ ಇಂಥದೇ ಒಂದು ವಿಚಾರ, ಅಂದರೆ ಊಟದಲ್ಲಿ "ವಿಷ" ಬೆರೆತಿರುವ ಬಗ್ಗೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ಚರ್ಚೆ ಏರ್ಪಟ್ಟಿದೆ. ಅದೇನೆಂದರೆ ಬಿ.ಟಿ.ಬದನೆ (ಕುಲಾಂತರಿ ತಳಿ). ಅದು ಹೇಗೆ ಎಂದು ಆಶ್ಚರ್ಯ ಬೇಡ. ಸ್ವಲ್ಪ ಗಮನಿಸಿ ಕೈ ಮಸ್ಕು ಇಕ್ಕೋ ವಿದ್ಯೆಯ ಅಥವಾ ಮದ್ದಿಕ್ಕೋದರ ಕಾರ್ಯತಂತ್ರ ಮತ್ತು ಮಾರ್ಗ ಈ ವಿಚಾರಕ್ಕೆ ಬಹಳ ಹತ್ತಿರದಿಂದ ಒಪ್ಪುತ್ತದೆ.
ಆದರೆ ಒಂದೇ ವ್ಯತ್ಯಾಸ "ಮದ್ದಿಡುವುವರು" ತಿನ್ನುವವರಿಗೆ ಕಾಣದೆ ಮರೆಮಾಚಿ ಇಡುತ್ತಾರೆ. ಕುಲಾಂತರಿ ತಳಿಯಲ್ಲಿ ಹಾಗಲ್ಲ. ಎಲ್ಲರಿಗೂ ತಿಳಿಯುವಂತೆಯೇ ಇಡುವುದು. ಆದರೆ ಅದನ್ನು ಪರಿಚಯಿಸುವಾಗ ಇದು ತುಂಬಾ ಒಳ್ಳೆಯದು ಇದರಿಂದ ಏನೂ ತೊಂದರೆ ಇಲ್ಲ ಎಂಬ ಹಸೀ ಸುಳ್ಳು ಹೇಳುತ್ತಾರೆ ಅಷ್ಟೆ. ಏನದು "ಮದ್ದಿನ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗ್ತಾ ಇರೋದು ಬದನೆಕಾಯಿ ಅಂದಿರಾ.. ಹೌದು ಈಹೊತ್ತು ಬದನೆಕಾಯಿಯದೇ ಲೋಕದ ತುಂಬಾ ಚರ್ಚೆ.. ಆದರೆ ನಮ್ಮ ಹಿತ್ತಲಲ್ಲಿ ಬೆಳಕೊಳೋ ಮುಳ್ಳು ಬದನೆ, ಗುಂಡು ಬದನೆ ವಿಚಾರ ಅಲ್ಲ. ಈ ನಾಡಿನ "ಪರಮಶ್ರೇಷ್ಠ" ಸಂಶೋಧಕರು ಲ್ಯಾಬ್ಗಳಲ್ಲಿ ಕುಳಿತು ತಯಾರಿಸಿರುವ ಬಿ.ಟಿ. ಬದನೆ (ಕುಲಾಂತರಿ) ಈಗ ಚರ್ಚಾ ವಸ್ತು.
ಏನದು ಬಿ.ಟಿ. ಬದನೆ?
ಭೂಮಿಯಲ್ಲಿ ಬ್ಯಾಸಿಲೆಸ್ ಥುರಂಜೆನ್ಸಿಸ್ (ವಿಷಕಾರಿ ಜೀವಿ) ಎಂಬ ಏಕಾಣುಜೀವಿ ಇರುತ್ತದೆ. ಅದು ಗಿಡ ಮತ್ತು ಕಾಯಿಗಳನ್ನು ಕೊರೆಯುವ ಕೀಟಗಳನ್ನು ಸಾಯಿಸಬಲ್ಲ ಪ್ರೋಟೀನನ್ನು ಉತ್ಪಾದಿಸುವ ಶಕ್ತಿ ಹೊಂದಿರುತ್ತದೆ. ಇಂಥಾ ಸೂಕ್ಷ್ಮಾಣುಜೀವಿಯ ವಂಶವಾಹಿ(ಜೀನ್)ಯನ್ನು ಕಿತ್ತು ಬದನೆಗಿಡದ ಜೀವಕೋಶಕ್ಕೆ ಸೇರಿಸಲಾಗಿದೆ. ತನಗೆ ಸಂಬಂಧವೇ ಇಲ್ಲದ ಇನ್ನೊಂದು ವಂಶವಾಹಿಯನ್ನು ತನ್ನ ಮೈಯೊಳಗೆ ಸೇರಿಸಿಕೊಂಡ ಬದನೆ ಗಿಡದ ಮೈಯೆಲ್ಲಾ ನಂಜಾಗುತ್ತದೆ (ಅಂದರೆ ಗಿಡವೇ ಕೀಟನಾಶಕ ಗುಣಗಳನ್ನು ಹೊಂದುತ್ತದೆ).
ಅಂಥಾ ನಂಜು ತುಂಬಿದ ಗಿಡದ ಕಾಂಡವನ್ನೋ ಅಥವಾ ಕಾಯಿಯನ್ನೋ ತಿಂದ ಕೀಟಗಳು ಸಾಯುತ್ತವೆ. ಹೀಗಾದಾಗ ಬದನೆಗೆ ಕಾಡುವ ಈ ಕೀಟಗಳಿಗೆ ಕ್ರಿಮಿನಾಶಕಗಳನ್ನು ಸಿಂಪಡಿಸುವ ಗೋಜಲೇ ಇಲ್ಲ. ಬದಲಿಗೆ ಗಿಡವೇ ಕೀಟನಾಶಕದಂತೆ ಕೆಲಸಮಾಡುತ್ತದೆ. ಇದರಿಂದ ಕೀಟಗಳ ಕಾಟ ತಪ್ಪುತ್ತದೆ, ಬೆಳೆ ಸಮೃದ್ದಿಯಾಗಿ ಬರುತ್ತದೆ ಎಂಬುದು ಇದನ್ನು ಸೃಷ್ಟಿಸಿರುವ ಸಂಶೋಧಕರ ತಂಡ, ಮಹಿಕೋ ಹಾಗೂ ಮಾನ್ಸಾಂಟೋ ಕಂಪನಿಗಳ ಸಮಜಾಯಿಷಿ.
ಮುಂದೆ ಓದಿ : ಬಿ.ಟಿ.ಬದನೆ ಪಲ್ಯ ತಿನ್ನಲು ಯೋಗ್ಯವೆ? »