ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರಾದ ನಾವು ಈ ಪಾಟಿ ಹೇಡಿಗಳೇ?

By * ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು
|
Google Oneindia Kannada News

Tamil poet Thiruvalluvar
* ತಿರುವಳ್ಳುವರ್ ಮತ್ತು ಸರ್ವಜ್ಞ ಪ್ರತಿಮೆಗಳ ಸ್ಥಾಪನೆಯ ಉದ್ದೇಶ ಆ ಕವಿಗಳಮೇಲಿನ ಅಭಿಮಾನವಲ್ಲ. ಬೆಂಗಳೂರಿನಲ್ಲಿ ತಮಿಳರು ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪಿಸಿರುವುದು ಕರ್ನಾಟಕದ ರಾಜಧಾನಿಯಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸುವ ಉದ್ದೇಶದಿಂದ. ಇದಕ್ಕೆ ಪ್ರತಿಯಾಗಿ ಕನ್ನಡಿಗರು ತಮಿಳುನಾಡಿನ ರಾಜಧಾನಿಯಲ್ಲಿ ಸರ್ವಜ್ಞನ ಪ್ರತಿಮೆಯನ್ನು ಸ್ಥಾಪಿಸುವ ನಿರ್ಧಾರ ತಳೆಯುವುದು ಅನಿವಾರ್ಯವಾಯಿತು.

* ಇದೀಗ ಎಲ್ಲ ರಾಜಕೀಯ ಪಕ್ಷಗಳೂ ತಿರುವಳ್ಳುವರ್ ಪ್ರತಿಮೆಯ ಅನಾವರಣವನ್ನು ಬೆಂಬಲಿಸುತ್ತಿರುವುದು ಬಿಬಿಎಂಪಿ ಚುನಾವಣೆಯಲ್ಲಿ ತಮಿಳರ ಮತ ಗಳಿಕೆಯ ದೃಷ್ಟಿಯಿಂದಲೇ ಹೊರತು ತಮಿಳುನಾಡಿನೊಡನೆ ಯಾವ ಸೌಹಾರ್ದದ ಉದ್ದೇಶದಿಂದಲೂ ಅಲ್ಲ. ಏಕೆಂದರೆ, ದೇಶದ ಎಲ್ಲ ಪಕ್ಷಗಳ ಎಲ್ಲ ರಾಜಕಾರಣಿಗಳೂ ಅಂತರಂಗದಲ್ಲಿ ಸದಾ ಮಿತ್ರರೇ.

* ಬೆರಳೆಣಿಕೆಯ ಹಿರಿಯ ಸಾಹಿತಿಗಳು ಬೆಂಬಲಿಸುತ್ತಿರುವುದು ತಮ್ಮ ಪ್ರವೃತ್ತಿಬಂಧುದ್ವಯರಮೇಲಿನ ಅಭಿಮಾನದಿಂದ ಮತ್ತು ಆ ಕವಿಶ್ರೇಷ್ಠದ್ವಯರ ಪಂಗಡಕ್ಕೆ ಸೇರಿದ ಶ್ರೇಷ್ಠರು ತಾವೆಂದು ಈ ಮೂಲಕ ಪರೋಕ್ಷವಾಗಿ ಸಾರುವ ಉದ್ದೇಶದಿಂದ. ಈ ಹಿರಿಯ ಸಾಹಿತಿಗಳು ತಮಿಳುನಾಡು ಸರ್ಕಾರವನ್ನು ಮತ್ತು ತಮಿಳರನ್ನು ಅರ್ಥಮಾಡಿಕೊಂಡ ಬಗೆ ಇವರ ಮುಗ್ಧತೆಯನ್ನು ತೋರಿಸುತ್ತದೆ.

* ಕನ್ನಡಪರ ಸಂಘಟನೆಗಳು ವಿರೋಧಿಸುತ್ತಿರುವುದರಲ್ಲಿ ಸ್ವಾರ್ಥ ಇರಬಹುದಾದರೂ ವಿರೋಧವು ಸಕಾರಣವಾದುದಾಗಿದೆ.

* ಚೆನ್ನೈನಲ್ಲಿ ಕನ್ನಡಿಗರು ತಮ್ಮ ಬುಡ ಭದ್ರಪಡಿಸಿಕೊಳ್ಳಲು, ತಮ್ಮ ಬೇರುಗಳನ್ನು ವಿಸ್ತರಿಸಲು ಮತ್ತು ತಮ್ಮ ಬಾಹುಗಳನ್ನು ಚಾಚಲು ಸರ್ವಜ್ಞನ ಪ್ರತಿಮೆಯನ್ನು ಎಂದೂ ಬಳಸಿಕೊಳ್ಳುವುದಿಲ್ಲ; ಆದರೆ ಬೆಂಗಳೂರಿನ ತಮಿಳರ ಬಗ್ಗೆ ಈ ಭರವಸೆ ಇಲ್ಲ.

* ಈಗಾಗಲೇ ಕನ್ನಡಿಗರು ಅಲ್ಪಸಂಖ್ಯಾತರಾಗಿರುವ ಮತ್ತು ಕನ್ನಡವು ತೀವ್ರಗತಿಯಲ್ಲಿ ಮಾಯವಾಗುತ್ತಿರುವ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯ ಅನಾವರಣವನ್ನು ಕೇವಲ 'ಕವಿಗೌರವ ಮತ್ತು ಸೌಹಾರ್ದ'ದ ದೃಷ್ಟಿಯಿಂದ ಮಾತ್ರ ನೋಡಿದರೆ ಸಾಲದು. ರಾಜಧಾನಿಯಲ್ಲಿ ಕನ್ನಡದ ಮತ್ತು ಕನ್ನಡಿಗರ ರಕ್ಷಣೆಯ ದೃಷ್ಟಿಯಿಂದಲೂ ನೋಡಬೇಕು. ಕನ್ನಡ ಮತ್ತು ಕನ್ನಡಿಗರು ಗಟ್ಟಿಮುಟ್ಟಾಗಿ ಉಳಿದರೆ ತಾನೇ, ಕವಿ, ಸೌಹಾರ್ದ ಇತ್ಯಾದಿ?

* ಇಷ್ಟಕ್ಕೂ ಎರಡೂ ಪ್ರತಿಮೆಗಳನ್ನೂ ಏಕಕಾಲದಲ್ಲಿ ಅನಾವರಣಗೊಳಿಸಲು ಸಾಧ್ಯವಿಲ್ಲವೆ? ಇದರಲ್ಲೂ ತಮಿಳರದೇ ಮೇಲುಗೈಯಾಗಬೇಕೆ? ಈ ಚಿಕ್ಕ ವಿಷಯದಲ್ಲೂ ಕನ್ನಡಿಗರಾದ ನಾವು ಬೆನ್ನು ಬಗ್ಗಿಸುತ್ತೇವೆಂದರೆ ಇನ್ನು ಕಾವೇರಿ, ಹೊಗೇನಕಲ್, ಶಾಸ್ತ್ರೀಯ ಭಾಷೆ....ಈ ವಿಷಯಗಳಲ್ಲಿ ಮುಂದೆ ನಮ್ಮ ಪಾಡೇನು? ಕನ್ನಡಿಗರಾದ ನಾವು ಈ ಪಾಟಿ ಹೇಡಿಗಳೇ?

* ತಿರುವಳ್ಳುವರ್ ಪ್ರತಿಮೆಯ ಅನಾವರಣ ಭಾನುವಾರದಂದು. ಗರಿಷ್ಠ ಸಂಖ್ಯೆಯ ತಮಿಳರು ಅನಾವರಣ ಸಮಾರಂಭಕ್ಕೆ ಹಾಜರಾಗಲು ಅನುಕೂಲ. ಅದೇ, ಸರ್ವಜ್ಞನ ಪ್ರತಿಮೆಯ ಅನಾವರಣ ಗುರುವಾರದಂದು! ಹೇಗಿದೆ ತಮಿಳರ ಐಡಿಯಾ!

* 'ಕನ್ನಡ ನೆಲ-ಜಲ-ಭಾಷೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ' ಎಂಬ ಹಳಸಲು ಮಾತನ್ನು ನಮ್ಮ ಎಲ್ಲ ರಾಜಕಾರಣಿಗಳಂತೆಯೇ ಯಡಿಯೂರಪ್ಪನವರೂ ನೂರಾಒಂದನೇ ಸಲ ಹೇಳುತ್ತಿದ್ದಾರೆ. ಸಮಸ್ಯೆಗಳನ್ನು ತಮಿಳುನಾಡಿನೊಡನೆ ಮಾತುಕತೆ ಮೂಲಕ ಪರಿಹರಿಸಿಕೊಳ್ಳುವುದಾಗಿಯೂ ಹೇಳುತ್ತಿದ್ದಾರೆ. ಕಾವೇರಿ ವಿವಾದ, ಹೊಗೇನಕಲ್ ವಿವಾದ, ಶಾಸ್ತ್ರೀಯಭಾಷೆ ವಿವಾದ ಮೊದಲಾದ ವಿವಾದಗಳು ಬಗೆಹರಿದ ನಂತರ ಇಬ್ಬರೂ ಒಟ್ಟಾಗಿ ಎರಡೂ ಪ್ರತಿಮೆಗಳನ್ನೂ ವಿಜೃಂಭಣೆಯಿಂದ ಅನಾವರಣ ಮಾಡೋಣ ಎಂದು ಯಡಿಯೂರಪ್ಪನವರು ಕರುಣಾನಿಧಿಯವರನ್ನು ಮಾತುಕತೆ ಮೂಲಕ ಒಪ್ಪಿಸಬಹುದಲ್ಲವೆ? ಇದೇ ಸಾಧ್ಯವಾಗದಿದ್ದರೆ ಇನ್ನು ವಿವಾದಗಳೆಲ್ಲ ಮಾತುಕತೆ ಮೂಲಕ ನ್ಯಾಯಯುತವಾಗಿ ಬಗೆಹರಿಯುವುದು ಸಾಧ್ಯವೆ?

* ಚಾರ್ಲಿ ಚಾಪ್ಲಿನ್ ಪ್ರತಿಮೆಯ ಗೊಟಾಳೆ ಆಯಿತು, ಈಗ ತಿರುವಳ್ಳುವರ್ ಪ್ರತಿಮೆಯ ಗೊಟಾಳೆ. ಸಮಾಜದ ಮನಸ್ಸನ್ನು ಒಡೆದು ಪ್ರತಿಮೆಗಳನ್ನು ಸ್ಥಾಪಿಸುವ ತುರ್ತು ಅಂಥಾದ್ದೇನಿದೆ? ಗಾಂಧೀಜಿಯ ಆದರ್ಶಗಳಿಗೆ ಚಿಕ್ಕಾಸಿನ ಬೆಲೆಯನ್ನೂ ಕೊಡದ ನಾವು ಆ ವ್ಯಕ್ತಿಯ ಪ್ರತಿಮೆಗಳನ್ನು ಮಾತ್ರ ಗಲ್ಲಿಗೊಂದರಂತೆ ಸ್ಥಾಪಿಸಿ ಏನು ಸಾಧಿಸಿದ್ದೇವೆ?

* ಕೊನೆಗೊಂದು ಕಟಕಿ: ಉಳ್ಳವರ್ ತಿರುವಳ್ಳುವರ್ ಪ್ರತಿಮೆಯ ಸ್ಥಾಪಿಸುವರ್. ತಿರಿದುಣ್ಣುವರ್ ಅದರ ಕೆಳಗೆ ಕುಳಿತು ಸುರಿದುಣ್ಣುವರ್! ಅಕಟಕಟಾ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X