ಪಂಚಗವ್ಯ - ರೈತರಿಗೆ ವರದಾನ
ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಓರ್ವ ಹಿರಿಯ ವಿಜ್ಞಾನಿ ಕೃಷಿಯಲ್ಲಿ ಪಂಚಗವ್ಯದ ಪಾತ್ರವನ್ನು ವೈಜ್ಞಾನಿಕವಾಗಿ ಪರೀಕ್ಷಿಸಿದ್ದಾರೆ. ಅವರ ವರದಿಯಂತೆ ನಡೆಸಿರುವ ಪ್ರಯೋಗದ ಆರಂಭಿಕ ನಿಷ್ಕರ್ಷೆಗಳಿಂದ ಹಲವಾರು ಬೆಳೆಗಳು ಹೆಚ್ಚಿನ ಫಸಲು ಹಾಗೂ ಕಡಿಮೆ ಕಾಲಾವಧಿಯಲ್ಲಿ ಫಲನೀಡುತ್ತವೆ ಎಂಬುದಾಗಿ ತಿಳಿದು ಬಂದಿದೆ.
ಈ ಕಲ್ಪನೆಯನ್ನು ಯಶಸ್ವಿಯಾಗಿ ಜನಪ್ರಿಯಗೊಳಿಸುವುದರಲ್ಲಿ ಈರೋಡ್ ಜಿಲ್ಲೆಯ ಕೋಡುಮುಡಿಯಲ್ಲಿನ ಓರ್ವ ವೃತ್ತಿನಿರತ ವೈದ್ಯರಾಗಿರುವ ಡಾ.ಕೆ. ನಟರಾಜನ್ ಅವರದೇ ಪ್ರಧಾನ ಪಾತ್ರವೆಂದು ರಾಜ್ಯದ ಹಾರ್ಟಿಕಲ್ಚರಲ್ ಕಾಲೇಜ್ ಹಾಗೂ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಪ್ರಮುಖರಾಗಿರುವ ಡಾ.ಈ. ವಡಿವೇಲ್ ಅವರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗವು ಈ ಸಂಬಂಧದಲ್ಲಿ ಸೂಕ್ಷ್ಮಾಣು ಜೀವಿಗಳ ಕೆಲಸದ ಪ್ರಭಾವದ ಕುರಿತು ಮನ್ನಣೆ ನೀಡಲು ಮತ್ತು ಕೆಲವು ಆಯ್ದ ಬೆಳೆಗಳ ಮೇಲೆ ಪ್ರಯೋಗ ಮಾಡಲು ಸಹ ಮುಂದಾಯಿತು. ಈಗ ಅದರಲ್ಲಿ ಫಸಲಿನ ಪ್ರಮಾಣ ಹೆಚ್ಚಾಗುವ ಹಾಗೂ ಬೆಳೆಯ ಕಾಲಾವಧಿ ಕಡಿಮೆಯಾಗುವ ಇವೆರಡೂ ನಿಟ್ಟಿನಲ್ಲಿ ಸಕಾರಾತ್ಮಕ ಫಲಗಳು ಲಭಿಸಿವೆ ಎಂದು ಅವರು ತಿಳಿಸಿದ್ದಾರೆ.
ಸೂರ್ಯಕಾಂತಿ, ಅಶ್ವಗಂಧ (ಔಷಧೀಯ ಗಿಡ), ಜೋಳ, ಭತ್ತ , ನುಗ್ಗೆಕಾಯಿ ಮತ್ತು ಮೂಲಂಗಿ ಇವುಗಳ ಮೇಲೆ ನಡೆಸಲಾದ ಈ ಪ್ರಯೋಗದಲ್ಲಿ ಮೊದಲ ಪ್ರಯತ್ನದಲ್ಲೇ ಶೇ.20-25ರಷ್ಟು ಫಸಲು ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಅದೇ ರೀತಿಯಲ್ಲಿ ಭತ್ತ ಮತ್ತು ಕಬ್ಬಿನ ಬೆಳೆಯಲ್ಲಿ ಫಸಲಿನ ಕಾಲಾವಧಿ ಕನಿಷ್ಠ 20 ದಿನಗಳಷ್ಟು ಕಡಿಮೆಯಾಗಿರುವುದು ಸಹ ಗೊತ್ತಾಗಿದೆ ಎಂದು ಡಾ. ವಡಿವೇಲ್ ಅವರು ಹೇಳುತ್ತಾರೆ. ಅಷ್ಟೇ ಅಲ್ಲ, ಕಬ್ಬಿನಲ್ಲಿ ಮರು ಪ್ರಾಪ್ತಿಯು ಶೇ.1ರಷ್ಟು ಏರಿಕೆಯಗಿರುವುದು ಕೂಡ ಗೊತ್ತಾಗಿದೆ.
ಪಂಚಗವ್ಯದ ಎಲ್ಲ ಮೂಲವಸ್ತುಗಳು ಆಯಾ ಕೃಷಿ ಕ್ಷೇತ್ರದಲ್ಲೇ ಲಭ್ಯವಿರುವುದರಿಂದ ಅದನ್ನು ಸಾಮಾನ್ಯವಾಗಿ ಯಾವುದೇ ಕೃಷಿಗೆ ಅಲ್ಲಲ್ಲೇ ತಯಾರಿಸಿ ಬಳಸಬಹುದಾದರೂ ತೋಟದ ಬೆಳೆಗಳಿಗೆ ಮತ್ತು ವ್ಯಾಪಾರಿ ಬೆಳೆಗಳಿಗೆ ಅದನ್ನು ಬಳಸುವುದು ಹೆಚ್ಚು ಉಪಯುಕ್ತ ಎಂಬುದು ಡಾ. ವಡಿವೇಲ್ ಅವರ ಅಭಿಪ್ರಾಯವಾಗಿದೆ. ಈಗಾಗಲೇ ಗೋಮೂತ್ರದ ಮೇಲೆ ಸಂಶೋಧನೆ ನಡೆಸಿ, ಅದರಲ್ಲಿ ಪೇಟೆಂಟ್ ಹಕ್ಕನ್ನು ಪಡೆದಿರುವ ಸಿ.ಎಸ್.ಐ.ಆರ್. ಸಹಯೋಗದೊಂದಿಗೆ ಪಂಚಗವ್ಯದ ವಿಷಯದಲ್ಲಿ ತಾನು ಪೇಟೆಂಟ್ ಪಡೆಯಲು ವಿಶ್ವವಿದ್ಯಾಲಯವು ಮುಂದಾಗಿದೆ.
ಪಂಚಗವ್ಯವನ್ನು ತಯಾರಿಸುವ ವಿಷಯದಲ್ಲಿ ಮಾತಾಡುತ್ತ ಡಾ. ವಡಿವೇಲ್ ಅವರು, ಗೋಬರ್ ಗ್ಯಾಸ್ ಘಟಕದಿಂದ ಲಭಿಸುವ ಸಗಣಿ ಸ್ಲರಿ, ಜೊತೆಯಲ್ಲಿ ತಾಜಾ ಸಗಣಿ, ಗೋಮೂತ್ರ, ಹಾಲು, ಮೊಸರು, ತುಪ್ಪ, ಕಬ್ಬಿನ ಹಾಲು, ಎಳನೀರು, ಬಾಳೆಹಣ್ಣು ಇವುಗಳನ್ನು ಅಗಲಬಾಯಿಯ ಮಣ್ಣಿನ ಪಾತ್ರೆಯಲ್ಲಾಗಲೀ, ಕಾಂಕ್ರೀಟ್ ತೊಟ್ಟಿಯಲ್ಲಾಗಲೀ ಅಥವಾ ಪ್ಲಾಸ್ಟಿಕ್ ಪಾತ್ರೆಯಲ್ಲಾಗಲೀ ನಿರ್ಧಾರಿತ ಪ್ರಮಾಣದಲ್ಲಿ ಕಲಸಬೇಕು.
ಈ ಪಾತ್ರೆ ಅಥವಾ ತೊಟ್ಟಿಯನ್ನು ನೆರಳಲ್ಲಿ ತೆರೆದು ಇರಿಸಿ, ದಿನದಲ್ಲೆರಡು ಬಾರಿ-ಪ್ರಾತಃಕಾಲ ಮತ್ತು ಸಂಜೆ ಚೆನ್ನಾಗಿ ಕಲಕಬೇಕು. ಈ ದ್ರಾವಣವು ಏಳು ದಿನಗಳಲ್ಲಿ ಪೂರ್ಣವಾಗಿ ಸಿದ್ಧವಾಗಿದ್ದು ನಂತರ ಅದನ್ನು ಚಿಮುಕಿಸಲು, ಹರಿಯಿಸಲು ಹಾಗೂ ಬೀಜ ಮತ್ತು ಸಸಿಗಳ ಸಂಸ್ಕರಣೆಗೂ ಬಳಸಬಹುದು ಎಂದು ಅವರು ಹೇಳಿದ್ದಾರೆ.
ಪಂಚಗವ್ಯವು ಕಫ, ವಾತ ಮತ್ತು ಪಿತ್ತಜನ್ಯ ರೋಗ, ಹೃದಯ ರೋಗ, ವಿಷಪ್ರಭಾವದಿಂದ ಹೃದಯವನ್ನು ರಕ್ಷಿಸುತ್ತದೆ.
(ಕೃಪೆ: ಧರ್ಮಭಾರತೀ)
ಪೂರಕ ಓದಿಗೆ
ಬೇಡ ಬಿಟಿ ಬದನೆ, ಶ್ರೀರಾಮುಲು ಅವರಿಗೆ ನಿವೇದನೆ